ಮೇ18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024ರ ರೋಚಕ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ 27 ರನ್ಗಳ ರೋಚಕ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಪ್ಲೇಆಫ್ಗೆ ಅರ್ಹತೆ ಪಡೆಯುತ್ತಿದ್ದಂತೆ ಆಟಗಾರರು ಮತ್ತು ಅಭಿಮಾನಿಗಳ ಸಂಭ್ರಮಾಚರಣೆ ಉತ್ತುಂಗಕ್ಕೇರಿದವು.
ಮಾಜಿ ಸಿಎಸ್ಕೆ ಬ್ಯಾಟರ್ ಅಂಬಟಿ ರಾಯುಡು ಅವರು ಹಾಲಿ ಚಾಂಪಿಯನ್ನರ ನಿರಾಶಾದಾಯಕ ಸೋಲಿನಿಂದ ಕಾಮೆಂಟರಿ ಸ್ಟುಡಿಯೋದಲ್ಲಿ ಕಣ್ಣೀರು ಹಾಕಿದರು. ಆರ್ಸಿಬಿ ತಂಡವು ಬ್ಯಾಟ್, ಬಾಲ್ ಮತ್ತು ಫೀಲ್ಡಿಂಗ್ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಸಿಎಸ್ಕೆ ತಂಡದ ಐಪಿಎಲ್ 2024ರ ಪ್ಲೇಆಫ್ ಕನಸುಗಳು ಭಗ್ನಗೊಂಡವು.

ಪಂದ್ಯದ ಅಂತಿಮ ಓವರ್ನಲ್ಲಿ ಆರ್ಸಿಬಿಯ ಯಶ್ ದಯಾಳ್ ಎಂಎಸ್ ಧೋನಿ ವಿಕೆಟ್ ಪಡೆದ ನಂತರ, ಅಂಬಟಿ ರಾಯುಡು ಹೊಟ್ಟೆ ಉರಿದುಕೊಂಡಂತೆ ಕಾಣುತ್ತಿದ್ದರು ಮತ್ತು ಸಿಎಸ್ಕೆ ತಂಡ ಹೀನಾಯವಾಗಿ ಸೋಲುತ್ತಿದ್ದಂತೆಯೇ ಕಾಮೆಂಟರಿ ಸಮಯದಲ್ಲಿ ಅಂಬಟಿ ರಾಯುಡು ತಮ್ಮ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಅಳುತ್ತಿದ್ದರು.
ಸಿಎಸ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಅವರು ಕೊನೆಯ ಓವರ್ನಲ್ಲಿ ಬಾಲ್ನೊಂದಿಗೆ ಸಂಪರ್ಕ ಸಾಧಿಸಲು ವಿಫಲರಾದರು ಮತ್ತು ಸಿಎಸ್ಕೆ ತಂಡದ ಐಪಿಎಲ್ 2024ರ ಪ್ಲೇಆಫ್ ಭರವಸೆಯನ್ನು ಹಾಳು ಮಾಡಿದರು. ಮಾತ್ರವಲ್ಲದೆ ಆರ್ಸಿಬಿ ತಮ್ಮ ತವರಿನಲ್ಲಿ 27 ರನ್ಗಳ ಗೆಲುವು ದಾಖಲಿಸಿ ಪ್ಲೇಆಫ್ಗೆ ಪ್ರವೇಶ ಪಡೆಯಲು ನೆರವಾಯಿತು.

ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಮೊದಲ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಸೋತ ನಂತರ ಪುಟಿದೆದ್ದ ಆರ್ಸಿಬಿ ತಂಡಕ್ಕೆ ಇದು ಪಂದ್ಯಾವಳಿಯಲ್ಲಿ ಸತತ ಆರನೇ ಗೆಲುವಾಗಿತ್ತು.
ಕಠಿಣ ಹೋರಾಟದ ಗೆಲುವು ಮತ್ತು ಸದ್ಯ ನಡೆಯುತ್ತಿರುವ ಐಪಿಎಲ್ 2024ರ ಪ್ಲೇಆಫ್ಗೆ ಅರ್ಹತೆ ಪಡೆದ ನಂತರ, ಆರ್ಸಿಬಿ ಆಟಗಾರರು ಸಂಭ್ರಮಿಸಿದರು ಮತ್ತು ಭಾವುಕರಾಗಿದ್ದರು.
ಈ ಸಂಭ್ರಮದ ನಡುವೆ, ಸಿಎಸ್ಕೆ ಮಾಜಿ ಆಟಗಾರ ಅಂಬಟಿ ರಾಯುಡು ತಮ್ಮ ಹತಾಶೆಯನ್ನು ಮರೆಮಾಡಲು ಸಾಧ್ಯವಾಗಲಿಲ್ಲ ಮತ್ತು ವಿವಾದಾತ್ಮಕ ಹೇಳಿಕೆಯೊಂದಿಗೆ ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್ಸಿಬಿ ತಂಡವನ್ನು ಹೀಯಾಳಿಸಿದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದ ಅಂತಿಮ ಕ್ಷಣದಲ್ಲಿ ಐಪಿಎಲ್ 2024ರ ಪ್ಲೇಆಫ್ಗೆ ಮುನ್ನಡೆಯುವ ಅವರ ಕನಸುಗಳು ಭಗ್ನಗೊಂಡಿದ್ದರಿಂದ ಸಿಎಸ್ಕೆ ಎಷ್ಟು ನೋವನ್ನು ಅನುಭವಿಸುತ್ತಿದೆ ಎಂಬುದನ್ನು ಅಂಬಟಿ ರಾಯುಡು ಅವರ ಪ್ರತಿಕ್ರಿಯೆ ತೋರಿಸಿದೆ.
ಅಂಬಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡುತ್ತಾ, "ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲಬೇಕು. ಪ್ಲೇಆಫ್ ಪ್ರವೇಶಿಸಿದ ನಂತರ ಬೆಂಗಳೂರಿನ ಬೀದಿಗಳಲ್ಲಿ ಪ್ರತಿಕ್ರಿಯೆ ಹೇಗಿತ್ತು ಎಂದು ನೋಡಿದೆವು. ವಾಸ್ತವವಾಗಿ, ಸಿಎಸ್ಕೆ ತಮ್ಮ ಟ್ರೋಫಿಗಳಲ್ಲಿ ಒಂದನ್ನು ಆರ್ಸಿಬಿಗೆ ನೀಡಬೇಕು. ಆಗ ಅವರು ಅದನ್ನು ಮೆರವಣಿಗೆ ಮಾಡಬಹುದು," ಎಂದು ಹೇಳಿದರು.
ಇದೇ ವೇಳೆ ಭಾರತ ಮತ್ತು ಆರ್ಸಿಬಿ ಮಾಜಿ ವೇಗಿ ವರುಣ್ ಆರೋನ್ ಅವರು ಐಪಿಎಲ್ 2024ರ ಪಂದ್ಯದ ಫಲಿತಾಂಶ ಹಾಗೂ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಕುರಿತು ಅಂಬಟಿ ರಾಯುಡು ಹೇಳಿಕೆಗೆ ತಿರುಗೇಟು ನೀಡಲು ಹಿಂದೆಮುಂದೆ ನೋಡಲಿಲ್ಲ.
ಅದೇ ಚರ್ಚೆಯಲ್ಲಿ ಮಾತನಾಡುತ್ತಾ ಅಂಬಟಿ ರಾಯುಡುಗೆ ತಿರುಗೇಟು ನೀಡಿದ ವರುಣ್ ಆರೋನ್, "ಆರ್ಸಿಬಿ ರೋಮಾಂಚಕ ಗೆಲುವಿನೊಂದಿಗೆ ಸಿಎಸ್ಕೆ ತಂಡವನ್ನು ಐಪಿಎಲ್ 2024ರಿಂದ ಹೊರಹಾಕಿರುವುದನ್ನು ಅರಗಿಸಿಕೊಳ್ಳಲು ಅಂಬಟಿ ರಾಯುಡುಗೆ ಸಾಧ್ಯವಾಗುತ್ತಿಲ್ಲ," ಎಂದು ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದರು.
ಗಮನಾರ್ಹವಾಗಿ, ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಿಂದ 14 ಅಂಕಗಳನ್ನು ಹೊಂದಿವೆ. ಆದರೆ ಉತ್ತಮ ನೆಟ್ ರನ್ ರೇಟ್ ಹೊಂದಿದ ಕಾರಣ, ಆರ್ಸಿಬಿ ತಂಡವು ಐಪಿಎಲ್ 2024ರ ಪ್ಲೇಆಫ್ಗೆ ಮುನ್ನಡೆಯಿತು.