ಒಂದು ಹಂತದಲ್ಲಿ 102 ರನ್ ಬಾರಿಸಿ ಗೆಲುವಿನ ಕನಸು ಕಾಣುತ್ತಿದ್ದ ಪಂಜಾಬ್ ಕಿಂಗ್ಸ್ ನಂತರದ ಎಂಟು ಓವರ್ಗಳಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದು, ಪಂದ್ಯವನ್ನೇ ಕೈ ಚೆಲ್ಲಿತು. ಎಲ್ಎಸ್ಜಿ ತಮ್ಮ ಕೈಯಿಂದ ಜಾರಿ ಹೊರಟಿದ್ದ ಪಂದ್ಯವನ್ನು ಗೆದ್ದು ಎರಡು ಅಂಕವನ್ನು ಪಡೆದುಕೊಂಡಿತು. ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ತಮ್ಮ ತಂಡ ಎಡವಿದ್ದು ಎಲ್ಲಿ ಎಂಬ ಬಗ್ಗೆ ವಿವರಿಸಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖ್ನೋ ಸೂಪರ್ ಜೈಂಟ್ಸ್ 8 ವಿಕೆಟ್ ಕಳೆದುಕೊಂಡು 199 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 178 ರನ್ ಸೇರಿಸಿ ಸೋಲು ಕಂಡಿತು. ಇದು ಪ್ರಸಕ್ತ ಋತುವಿನಲ್ಲಿ ಪಂಜಾಬ್ ಕಂಡ ಎರಡನೇ ಸೋಲು. ಎಲ್ಎಸ್ಜಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.

ನಿಜಕ್ಕೂ ಈ ಪಂದ್ಯದಲ್ಲಿ ಲಖ್ನೋ ಸೂಪರ್ ಜೈಂಟ್ಸ್ ಭರ್ಜರಿಯಾಗಿ ಆಡಿದೆ. ಲಿಯಾಮ್ ಲಿವಿಂಗಸ್ಟೋನ್ ಗಾಯಕ್ಕೆ ತುತ್ತಾಗಿದ್ದು ನಮಗೆ ಹಿನ್ನಡೆ ಆಯಿತು. ಇದರಿಂದ ನಾಲ್ಕನೇ ಕ್ರಮಾಂಕಕ್ಕೆ ಪೆಟ್ಟು ಬಿದ್ದಿತು ಎಂದು ಶಿಖರ್ ತಿಳಿಸಿದ್ದಾರೆ.
ಎಲ್ಸಿಜಿ ಪರವಾಗಿ ಮಯಾಂಕ್ ಯಾದವ್ ಸೂಪರ್ ಆಗಿ ಬೌಲಿಂಗ್ ಮಾಡಿದರು. ಅವರನ್ನು ಎದುರಿಸಲು ಖುಷಿ ಆಯಿತು. ಅವರ ಆ ವೇಗವನ್ನು ಕಂಡು ನಾನು ಅಚ್ಚರಿ ಪಟ್ಟೆ. ಅವರು ನನ್ನ ವಿರುದ್ಧ ಪ್ರಯೋಗಿಸಿದ ದಾಳಿಗಳು ನಿಜಕ್ಕೂ ನನ್ನನ್ನು ಸಿಂಗಲ್ ಹಾಗೂ ಡಾಟ್ ಬೌಲ್ ಆಡುವಂತೆ ಮಾಡಿದವು. ಇವರನ್ನು ಕಟ್ಟಿ ಹಾಕಲು ನನ್ನ ಜೊತೆಗಾರರಿಗೆ ಶಾರ್ಟರ್ ಬೌಂಡರಿಯನ್ನು ಟಾರ್ಗೆಟ್ ಮಾಡಿ ಎಂದು ತಿಳಿಸಿದೆ. ಅಲ್ಲದೆ ಜಿತೇಶ್ ಶರ್ಮಾ ಅವರಿಗೆ ನೀನು ಮಯಾಂಕ್ನ್ನು ಬಿಟ್ಟು ಬೇರೆ ಬೌಲರ್ನ್ನು ಟಾರ್ಗೆಟ್ ಮಾಡು ಎಂದು ತಿಳಿಸಿದ್ದೆ ಎಂದು ಹೇಳಿದ್ದಾರೆ.
ಮಯಾಂಕ್ ಬಿಗುವಿನ ದಾಳಿ ನಡೆಸಿ ನಮ್ಮನ್ನು ಕಟ್ಟಿ ಹಾಕಿದರು. ನಾವು ಕೆಲವು ಕ್ಯಾಚ್ಗಳನ್ನು ಪಡೆಯಬಹುದಿತ್ತು. ಕ್ಯಾಚ್ಗಳನ್ನು ಪಡೆಯುವಲ್ಲಿ ಹಿಂದೆ ಬಿದ್ದಿರುವುದೇ ಮುಮೆಂಟ್ ಶಿಫ್ಟ್ ಆಗಲು ಕಾರಣವಾಯಿತು. ನಾವು ಮೈದಾನದ ಹೊರಗೆ ಮಾಡುವ ಪ್ಲ್ಯಾನ್ಗಳನ್ನು, ಆಡುವಾಗ ಇಂಪ್ಲಿಮೆಂಟ್ ಮಾಡುವುದು ಮುಖ್ಯ. ನಾವು ಪಂದ್ಯದ ಹತ್ತಿರದಲ್ಲೇ ಇದ್ದೇವು. ಆದರೆ ಇನ್ನೊಂದು ಚೂರು ಎಫಲ್ಟ್ ನಮ್ಮಿಂದ ಬೇಕಿತ್ತು ಎಂದು ಧವನ್ ತಿಳಿಸಿದ್ದಾರೆ.

ಲಖ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಅಮೋಘವಾಗಿ ಬ್ಯಾಟಿಂಗ್ ಮಾಡಿದರು. ಇವರು 50 ಎಸೆತಗಳನ್ನು ಎದುರಿಸಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 70 ರನ್ ಸಿಡಿಸಿ ತಂಡಕ್ಕೆ ನೆರವಾದರು. ಆದರೆ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಲು ಇವರಿಗೆ ಸಾಧ್ಯವಾಗಲಿಲ್ಲ.