ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ವಿಶ್ವದಾದ್ಯಂತ 1574 ಆಟಗಾರರು ಈ ಮೆಗಾ ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಆದರೆ ಈಗ ಈ ಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 574 ಆಟಗಾರರಿಗೆ ಇಳಿಸಿದೆ. ಐಪಿಎಲ್ ಹರಾಜಿನಲ್ಲಿ ಎಲ್ಲರ ಕಣ್ಣು ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರ ಮೇಲಿದೆ. ಈ ಮೂವರು ಹಲವು ತಂಡಗಳ ಗುರಿಯಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಯಿಂದ ಬೇರ್ಪಟ್ಟ ನಂತರ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿ ಬಿಡ್ ಮಾಡಲಿದೆ ಎಂದು ವರದಿಗಳು ಹೇಳುತ್ತಿವೆ. ಕೆಎಲ್ ರಾಹುಕ್ ಈ ಹಿಂದೆ ಆರ್ಸಿಬಿಗೆ ಆಡಿದ್ದು, ಮೂಲತಃ ಅವರು ಕನ್ನಡಿಗ. ಅಲ್ಲದೆ, ವಿಕೆಟ್ಕೀಪಿಂಗ್ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದಾರೆ. ಇತ್ತ ನಾಯಕನ ಹುಡುಕಾಟದಲ್ಲಿರುವ ಆರ್ಸಿಬಿ ಕೆಎಲ್ ರಾಹುಲ್ ಅವರನ್ನು ಬಿಡ್ ಮಾಡಲಿದೆ ಎಂಬುದು ಎಲ್ಲ ಅಭಿಮಾನಿಗಳ ನಿರೀಕ್ಷೆಯಾಗಿದೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬಿಡ್ ಮಾಡಬಹುದು ಎಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಮತ್ತು ಕ್ರಿಕೆಟ್ ವಿವರಣೆಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ . ಈ ಹೇಳಿಕೆ ನಂತರ ಆರ್ಸಿಬಿ ಅಭಿಮಾನಿಗಳು ಅಚ್ಚರಿಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಫ್ರಾಂಚೈಸಿಗೆ ಕೆಎಲ್ ರಾಹುಲ್ ಅವರನ್ನು ಬಿಡ್ ಮಾಡುವಂತೆ ವಿಶೇಷ ರೀತಿಯಲ್ಲಿ ಮನವಿಗಳನ್ನು ಮಾಡುತ್ತಿದ್ದಾರೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡವು 2022 ಮತ್ತು 203 ರಲ್ಲಿ ಪ್ಲೇಆಫ್ ತಲುಪಿತು. ಕಳೆದ ವರ್ಷ ಏಳನೇ ಸ್ಥಾನದಲ್ಲಿದ್ದ ಕಾರಣ ತಂಡದ ಆಡಳಿತವು ರಾಹುಲ್ ಅವರನ್ನು ಕೈಬಿಡಲು ನಿರ್ಧರಿಸಿತ್ತು.
ಸಿಎಸ್ಕೆ ಫ್ರಾಂಚೈಸಿ ಎಂಎಸ್ ಧೋನಿಯ ಉತ್ತರಾಧಿಕಾರಿಯಾಗಿ ಸಮರ್ಥ ಆಟಗಾರರನ್ನು ನೋಡುತ್ತಿದೆ. ತಂಡಕ್ಕೆ ವಿಕೆಟ್ಕೀಪರ್-ಬ್ಯಾಟರ್ ಅಗತ್ಯವಿದೆ. ಹೀಗಾಗಿ ಸಿಎಸ್ಕೆ ಫ್ರಾಂಚೈಸಿ ಭಾರತೀಯ ಆಟಗಾರರನ್ನು ಪಡೆದರೆ ಅದ್ಭುತವಾಗಿರಲಿದೆ ಎಂದುಕೊ0ಳ್ಳುತ್ತೇನೆ. ಎಲ್ಲರೂ ಹೇಳುತ್ತಿದ್ದಾರೆ, ನಾನು ಕೂಡ ಹೇಳುತ್ತೇನೆ. ಅವರು 30 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದಾರೆ. ಶೀಘ್ರದಲ್ಲೇ ತಂದೆಯಾಗಲಿದ್ದಾರೆ. ಎಲ್ಲರೂ ಅವರನ್ನು ದೊಡ್ಡವರಾಗಿದ್ದಾರೆ ಎಂದು ಪರಿಗಣಿಸಿದ್ದಾರೆ. ಆದ್ದರಿಂದ ಅವರು ಚೆನ್ನೈಗೆ ಸರಿಯಾಗಿದ್ದಾರೆ. ಈ ಕಾರಣಕ್ಕೆ ಸಿಎಸ್ಕೆ ಫ್ರಾಂಚೈಸಿಗೆ ಕೆಎಲ್ ರಾಹುಲ್ ಹರಾಜಾಗುವುದು ಖಚಿತ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪರ್ಸ್ನಲ್ಲಿ 55 ಕೋಟಿ ರೂ. ಇಟ್ಟುಕೊಂಡಿದೆ. ಹೀಗಾಗಿ ಕೆಎಲ್ ರಾಹುಲ್ ಅವರು ಎಷ್ಟು ಬೆಲೆಗೆ ಹೋಗುತ್ತಾರೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಆದರೆ ಸಿಎಸ್ಕೆ ಫ್ರಾಂಚೈಸ್ ಬಳಿಕ 55 ಕೋಟಿ ರೂ. ಇರುವುದರಿಂದ ಕೆಎಲ್ ರಾಹುಲ್ ಅವರನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಕೆಎಲ್ ರಾಹುಲ್ ಹೊರೆತುಪಡಿಸಿ ಟೀಮ್ ಇಂಡಿಯಾ ಆಟಗಾರರಾದ ಇಶಾನ್ ಕಿಶನ್ ಅಥವಾ ರಿಷಬ್ ಪಂತ್ 10 ರಿಂದ 15 ಕೋಟಿ ರೂ. ಪಡೆದರೆ ಅವರು ತಂಡಕ್ಕೆ ಕರೆತರಲು ಪ್ರಯತ್ನಿಸುತ್ತಾರೆ. ಅವರು ಸ್ವಲ್ಪ ಸಮಯದವರೆಗೆ ಶ್ರೇಯಸ್ ಅಯ್ಯರ್ ಬಗ್ಗೆ ಯೋಚಿಸಬಹುದು. ಏಕೆಂದರೆ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲು ಸಿಎಸ್ಕೆ ಭಾರತೀಯ ಬ್ಯಾಟರ್ಗಳ ಅವಶ್ಯಕತೆಯಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ಮೇಲೂ ಸಿಎಸ್ಕೆ ಕಣ್ಣಿಟ್ಟಿದೆ ಎಂದು ಆಕಾಶ್ ಚೋಪ್ರಾ ಸುಳಿವು ನೀಡಿದ್ದಾರೆ. ಅಶ್ವಿನ್ ಐಪಿಎಲ್ನಲ್ಲಿ ಚೆನ್ನೈನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಐಪಿಎಲ್ 2025ರ ಟೂರ್ನಿಗಾಗಿ ರವೀಂದ್ರ ಜಡೇಜಾ ಹೊರತುಪಡಿಸಿ ಸಿಎಸ್ಕೆ ಸ್ಪಿನ್ ಆಯ್ಕೆಗಳೊಂದಿಗೆ ಹೆಣಗಾಡುತ್ತಿದೆ. ಅಶ್ವಿನ್ ಅವರು ಸಿಎಸ್ಕೆ ಫ್ರಾಂಚೈಸಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರು ತಮ್ಮ ಅಂತಿಮ ಐಪಿಎಲ್ ಆವೃತ್ತಿಯಲ್ಲಿ ಸಿಎಸ್ಕೆ ತಂಡದ ಭಾಗವಾಗುವ ಮೂಲಕ ಸಮತೋಲನ ತರಬಹುದು' ಎಂದಿದ್ದಾರೆ.