ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಇತಿಹಾಸದ ಯಶಸ್ವಿ ತಂಡಗಳಲ್ಲಿ ಒಂದು. ಚೆನ್ನೈ ಸೂಪರ್ ಕಿಂಗ್ಸ್ ಆರನೇ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ಪ್ಲ್ಯಾನ್ ಮಾಡಿಕೊಂಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಸಿಎಸ್ಕೆ ಅಳೆದು ತೂಗಿ ಆಟಗಾರರಿಗೆ ಹಣವನ್ನು ಹೂಡಿತು. ಈ ವೇಳೆ ಸ್ಟಾರ್ ಆಟಗಾರರು ಹಾಗೂ ಯುವ ಆಟಗಾರರಿಗೆ ಮಣೆ ಹಾಕಿತು. ಈ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ತಂಡದ ಪರ ಆಡಿ ಸೈ ಎನಿಸಿಕೊಂಡಿರುವ ಸ್ಟಾರ್ ಆಟಗಾರರಿಗೆ ಮಣೆ ಹಾಕಿದೆ. ರಾಜಸ್ಥಾನ ರಾಯಲ್ಸ್ ತಂಡದಿಂದ ರಿಲೀಸ್ ಆಗಿದ್ದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರಿಗೆ ಚೆನ್ನೈ ಬಾಜಿ ಕಟ್ಟಿ ಗೆದ್ದಿದೆ. ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಆಡುತ್ತಿರುವ ಅಶ್ವಿನ್ ಮಾಂತ್ರಿಕ ಸ್ಪಿನ್ ಬೌಲರ್. ಇವರನ್ನು ಕೊಳ್ಳಲು ಚೆನ್ನೈ ಸಫಲವಾಗಿದೆ. ಇವರು ಮತ್ತೆ ತಮ್ಮ ತವರು ಮನೆಗೆ ವಾಪಸ್ ಆಗಿದ್ದಾರೆ. ಇವರಿಗೆ ಚೆನ್ನೈ 9.75 ಕೋಟಿ ರೂ. ನೀಡಿದೆ.

ಅಫ್ಘಾನಿಸ್ತಾನ ತಂಡದ ಸ್ಪಿನ್ ಬೌಲರ್ ನೂರ್ ಅಹ್ಮದ್ ತಮ್ಮ ಮೂಲ ಬೆಲೆಗಿಂತ 5 ಪಟ್ಟು ಹೆಚ್ಚಿನ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡರು. ಇವರಿಗೆ ಸಿಎಸ್ಕೆ 10 ಕೋಟಿ ನೀಡಿದೆ.
ಕಳೆದ ಆವೃತ್ತಿಯಲ್ಲಿ ಚೆನ್ನೈ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ನ್ಯೂಜಿಲೆಂಡ್ ತಂಡದ ಇಬ್ಬರು ಸ್ಟಾರ್ ಆಟಗಾರರನ್ನು ಖರೀದಿಸಿದೆ. ಯುವ ಆಲ್ರೌಂಡರ್ ರಚಿನ್ ರವೀಂದ್ರ ಅವರಿಗೆ ಸಿಎಸ್ಕೆ 4 ಕೋಟಿ ನೀಡಿದರೆ, ಟಾಪ್ ಆರ್ಡರ್ ಬ್ಯಾಟರ್ ಡೇವನ್ ಕಾನ್ವೆ ಅವರಿಗೆ 6.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಉಳಿದಂತೆ ಸೈಯದ್ ಖಲೀಲ್ ಅಹ್ಮದ್ ಅವರಿಗೆ 4.8 ಕೋಟಿ ನೀಡಿದರೆ, ರಾಹುಲ್ ತ್ರಿಪಾಠಿ ಅವರಿಗೆ 3.40 ಕೋಟಿ ರೂ. ಪಡೆದು ಐಪಿಎಲ್ 2025ರಲ್ಲಿ ಚೆನ್ನೈ ತಂಡದ ಪರ ಆಡಲಿದ್ದಾರೆ.