ಐಪಿಎಲ್ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಮುಂಬೈ ಇಂಡಿಯನ್ಸ್ ಐದು ಪ್ರಶಸ್ತಿಗಳನ್ನು ಗೆಲ್ಲಲು ಕಾರಣವಾಗಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಈ ಸ್ಥಾನಕ್ಕಾಗಿ ಹಾರ್ದಿಕ್ ಅವರನ್ನು ಗುಜರಾತ್ ಟೈಟಾನ್ಸ್ನಿಂದ ಮರಳಿ ಕರೆಸಲಾಯಿತು.
ಮರಳಿ ಮುಂಬೈ ತಂಡಕ್ಕೆ ಬಂದ ಅವರಿಗೆ ನಾಯಕತ್ವವನ್ನು ನೀಡಲಾಗಿತ್ತು. ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಈ ನಿರ್ಧಾರ ಇಷ್ಟವಾಗಲಿಲ್ಲ. ಅವರು ಸಾಮಾಜಿಕ ಜಾಲತಾಣದಿಂದ ಕ್ರೀಡಾಂಗಣದವರೆಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಐಪಿಎಲ್ 2024ರ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಸಮ್ಮುಖದಲ್ಲಿ ಹಾರ್ದಿಕ್ ಅವರಿಗೆ ನಾಯಕತ್ವ ನೀಡಲಾಯಿತು. ಇದಾದ ನಂತರ ಮುಂಬೈ ತಂಡದ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಸೂರ್ಯಕುಮಾರ್ ಯಾದವ್ ಮಾತನಾಡಿರುವುದು ಎಲ್ಲೆಡೆ ವೈರಲ್ ಆಗಿದೆ.
ಕಾರ್ಯಕ್ರಮವೊಂದರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ಸೂರ್ಯಕುಮಾರ್ ಯಾದವ್ ಅವರನ್ನು ಕೇಳಿದಾಗ ಎಲ್ಲರನ್ನು ಬೆರಗುಗೊಳಿಸುವ ಹೇಳಿಕೆ ನೀಡಿದ್ದಾರೆ. ತಮ್ಮ ತಂಡವು ಪ್ರಸ್ತುತ ಎಲ್ಲಾ ಭಾರತೀಯ ನಾಯಕರನ್ನು ಹೊಂದಿರುವುದರಿಂದ ಐಪಿಎಲ್ನಲ್ಲಿ ತಂಡವು ಯಾವುದೇ ನಾಯಕತ್ವದ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಹೇಳಿದ್ದಾರೆ.
ನಾವು ಮುಂಬೈ ಇಂಡಿಯನ್ಸ್ ತಂಡಕ್ಕೆ ಹೋದಾಗ, ಅದು ಒಂದು ಕುಟುಂಬದಂತಿರುತ್ತದೆ. ಆದ್ದರಿಂದ ನಮಗೆ ಮೂವರು ನಾಯಕರು ಇದ್ದಾರೆಯೇ ಅಥವಾ ನಾಲ್ಕು ನಾಯಕರು ಇದ್ದಾರೆಯೇ ಎಂದು ನಾವು ಯೋಚಿಸುವುದಿಲ್ಲ. ನಾವು ಒಂದು ತಂಡ ಎಂದು ನಾವು ಭಾವಿಸುತ್ತೇವೆ ಎಂದು ಸೂರ್ಯಕುಮಾರ್ ತಿಳಿಸಿದ್ದಾರೆ.
ಮುಂಬೈ ತಂಡದ ಭಾಗವಾಗಿರುವ ರೋಹಿತ್ ಶರ್ಮಾ ಭಾರತದ ಟೆಸ್ಟ್ ಮತ್ತು ಏಕದಿನ ನಾಯಕರಾಗಿದ್ದಾರೆ. ಸೂರ್ಯಕುಮಾರ್ ಟಿ20ಯಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದು, ಜಸ್ಪ್ರೀತ್ ಬುಮ್ರಾ ವಿವಿಧ ಸಂದರ್ಭಗಳಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಸೂರ್ಯಕುಮಾರ್ ಯಾದವ್ ಹೊಗಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಮತ್ತು ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್ಗಳನ್ನು ವರುಣ್ ಕಬಳಿಸಿದ್ದಾರೆ. ಈ ಬಗ್ಗೆ ಸೂರ್ಯ ಮಾತನಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ನಂತರ ವರುಣ್ ವಿಭಿನ್ನ ಆಟಗಾರನಂತೆ ಕಾಣುತ್ತಿದ್ದಾರೆ. ಅವರು ಮಾನಸಿಕವಾಗಿ ಬಲಶಾಲಿಯಾಗಿದ್ದು, ಮುಖದಲ್ಲಿ ಯಾವಾಗಲೂ ನಗು ಇರುತ್ತದೆ. ಮೈದಾನದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಅವರು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಒಬ್ಬ ಕ್ರಿಕೆಟಿಗನ ದೃಷ್ಟಿಕೋನದಿಂದ, ಇದು ತುಂಬಾ ಒಳ್ಳೆಯ ವಿಷಯ. 2021 ರಲ್ಲಿ ಅವರು ತಂಡದಿಂದ ಹೊರಗುಳಿದ ರೀತಿ ಮತ್ತು ನಂತರ ಅವರು ಮರಳಿ ಬಂದ ರೀತಿ ಎರಡು ವಿಭಿನ್ನ ವರುಣ್ ಚಕ್ರವರ್ತಿಯನ್ನು ತೋರಿಸುತ್ತದೆ ಎಂದು ಸೂರ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.