ಸೌದಿಯಲ್ಲಿ ಇತ್ತೀಚಿಗೆ ಐಪಿಎಲ್ ಮೆಗಾ ಹರಾಜು ನಡೆಯಿತು. ಈ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ತಂಡಗಳು ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿವೆ. ಆರ್ಸಿಬಿ ಸಹ ಈ ಹರಾಜಿನಲ್ಲಿ 83 ಕೋಟಿ ರೂಪಾಯಿಗಳೊಂದಿಗೆ ಹರಾಜು ಅಂಗಳ ಪ್ರವೇಶಿಸಿತ್ತು. ಭಾರೀ ಹಣವನ್ನು ಹೊಂದಿದ್ದ ಆರ್ಸಿಬಿ, ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಸ್ಟಾರ್ ಗಿರಿಯನ್ನು ಹೊತ್ತುಕೊಂಡ, ನಾಯಕತ್ವ ಗುಣಗಳನ್ನು ಹೊಂದಿರುವ ಆಟಗಾರರು ಹರಾಜಿನಲ್ಲಿದ್ದರೂ ಆರ್ಸಿಬಿ ಇದಕ್ಕೆ ತಲೆ ಕೆಡಿಸಿಕೊಳ್ಳಲದೇ ತನ್ನ ಪ್ಲ್ಯಾನ್ ಮಾಡಿದೆ.
ಆರ್ಸಿಬಿ ಕಳೆದ ಆವೃತ್ತಿಯ ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ಹರಾಜಿನ ಅಂಗಳಕ್ಕೆ ಬಿಟ್ಟಿದ್ದರಿಂದ, ಅಭಿಮಾನಿಗಳು ಹೊಸ ನಾಯಕ ಬರಬಹುದು ಎಂಬ ನಿರೀಕ್ಷೆಯನ್ನು ಹೊತ್ತುಕೊಂಡಿದ್ದರು. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ ತನ್ನದೇ ಪ್ಲ್ಯಾನ್ ಮೂಲಕ ಹರಾಜಿನಲ್ಲಿ ಬಾಜಿ ಗೆದ್ದಿದೆ. ಭರವಸೆಯ ದೇಶೀ ಆಟಗಾರರಿಗೆ ಆರ್ಸಿಬಿ ಮಣೆ ಹಾಕಿದೆ.

ಈ ಬಾರಿ ಆರ್ಸಿಬಿ ತಂಡವನ್ನು ಮತ್ತೊಮ್ಮೆ ವಿರಾಟ್ ಕೊಹ್ಲಿ ಮುನ್ನಡೆಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಫ್ರಾಂಚೈಸಿ ಇನ್ನೂ ಬಹಿರಂಗಪಡಿಸಿಲ್ಲ. RCB ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್ ನೋಡುತ್ತಿದ್ದಂತೆ ಆರ್ಸಿಬಿ ನಾಯಕನ ಲೀಸ್ಟ್ಗೆ ಮತ್ತೊಬ್ಬ ಆಟಗಾರ ಎಂಟ್ರಿ ನೀಡಿದಂತೆ ಆಗಿದೆ.
ಆರ್ಸಿಬಿ ಸಾಮಾಜಿಕ ತಾಣದಲ್ಲಿನ ಪೋಸ್ಟ್ನಲ್ಲಿ ಟಾಪ್ ಕೆ ಎಂದು ಬರೆದುಕೊಂಡಿದೆ. ಇದರ ಅರ್ಥದ ಹಿಂದೆ ಅಭಿಮಾನಿಗಳು ಬಿದ್ದಿದ್ದಾರೆ. ವಿರಾಟ್ ಕೊಹ್ಲಿ ಸಹ ಇದೇ ಲೀಸ್ಟ್ನಲ್ಲಿ ಬರುವ ಆಟಗಾರ. ಆದರೆ ಆರ್ಸಿಬಿ ತನ್ನ ಸಾಮಾಜಿಕ ತಾಣದಲ್ಲಿ ಕೃನಾಲ್ ಪಾಂಡ್ಯರ ಚಿತ್ರವನ್ನು ಹಂಚಿಕೊಂಡಿಡದೆ. ಈ ಫೋಟೋದಲ್ಲಿ ಸ್ಟಾರ್ ಆಲ್ರೌಂಡರ್ ಆರ್ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಆರ್ಸಿಬಿ ಆಲ್ರೌಂಡರ್ಗೆ 5.75 ಕೋಟಿ ರೂಪಾಯಿ ಖರ್ಚು ಮಾಡಿದೆ. ಆರ್ಸಿಬಿ ತನ್ನ ಸಾಮಾಜಿಕ ಖಾತೆಯಲ್ಲಿ ಈ ಫೋಟೋ ಹಾಕುತ್ತಿದ್ದಂತೆ ಸಂಚಲನ ಉಂಟು ಮಾಡಿದೆ. ಕೃನಾಲ್ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡ ತಂಡವನ್ನು ಮುನ್ನಡೆಸಿದ್ದಾರೆ.
ಆರ್ಸಿಬಿ ಇತ್ತೀಚಿಗೆ ನಡೆದ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ. ನೀಡಿ ಭುವನೇಶ್ವರ್ ಕುಮಾರ್ ಅವರನ್ನು ಖರೀದಿ ಮಾಡಿದೆ. ಇವರಿಗೂ ಆರ್ಸಿಬಿ ನಾಯಕತ್ವದ ಹೊಣೆಯನ್ನು ನೀಡುವ ಸಾಧ್ಯತೆ ಇದೆ. ಇವರು ಸಹ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ 8 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಇವರಿಗೂ ತಂಡದ ಚುಕ್ಕಾಣಿ ನೀಡಿದರೆ ಅಚ್ಚರಿ ಇಲ್ಲ.
ಆರ್ಸಿಬಿ ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್ನಲ್ಲಿ ಭಾಗವಹಿಸುತ್ತಿದೆ. ಆದರೆ ಒಮ್ಮೆಯೂ ಐಪಿಎಲ್ ಚಾಂಪಿಯನ್ ಎಂಬ ಹಣೆ ಪಟ್ಟಿಯನ್ನು ಪಡೆದಿಲ್ಲ. ಹೀಗಾಗಿ 18ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಸ್ಥಿರ ಪ್ರದರ್ಶನವನ್ನು ನೀಡಿ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ಈ ಕನಸು ನನಸಾಗಬೇಕಾದಲ್ಲಿ ಸ್ಟಾರ್ ಆಟಗಾರರು ಸಂಘಟಿತ ಪ್ರದರ್ಶನ ನೀಡಿದರೆ ಮಾತ್ರ ಸಾಧ್ಯ. ಅಭಿಮಾನಿಗಳು ಈ ಬಾರಿಯೂ ಕಪ್ ನಮ್ದೇ ಎಂದು ಹೇಳುವ ಘೋಷವಾಕ್ಯ ನಿಜವಾಗುತ್ತದಾ ಕಾದು ನೋಡಬೇಕಿದೆ.