ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಪ್ಲೇಯರ್ ಮುಂಬರುವ ಆವೃತ್ತಿಯಲ್ಲಿ ರುತುರಾಜ್ ಅವರೇ ತಂಡವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ಸಂಜು ಸ್ಯಾಮ್ಸನ್ ಅವರ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತಪ್ಪ ಉತ್ತರ ನೀಡಿದ್ದಾರೆ. ಮ್ಯಾನೇಜ್ಮೆಂಟ್ ಗಾಯಕ್ವಾಡ್ ಅವರಿಗೆ ಸಮಯ ಕೊಟ್ಟು ಕಲಿಯಲು ಅವಕಾಶ ನೀಡಬೇಕು ಎಂದಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದಿಂದ ಟ್ರೇಡ್ ಆದ ಸಂಜು, ಚೆನ್ನೈ ತಂಡವನ್ನು ಸೇರಿಕೊಂಡರು. ಇವರು ಆಗಮನದಿಂದ ತಂಡದ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಸುದ್ದಿಗಳನ್ನು ಈಗ ತಳ್ಳಿ ಹಾಕಿದೆ. ಅಲ್ಲದೆ ಗಾಯಕ್ವಾಡ್ ಅವರನ್ನೇ ಮುಂಬರುವ ಆವೃತ್ತಿಗೆ ನಾಯಕ ಎಂದು ಘೋಷಿಸಿದೆ.

ನನಗೆ ಅನಿಸಿದ ಮಟ್ಟಿಗೆ ಸಿಎಸ್ಕೆ ಸಂಜು ಅವರಿಗೆ ನಾಯಕತ್ವ ನೀಡುವುದಿಲ್ಲ. ಮ್ಯಾನೇಜ್ಮೆಂಟ್ ಗಾಯಕ್ವಾಡ್ ಅವರಿಗೆ ಸಮಯ ನೀಡಿ ನಾಯಕತ್ವದ ಗುಣಗಳನ್ನು ಅರಿತುಕೊಳ್ಳಲು ಅವಕಾಶ ನೀಡಬೇಕು. ಅವರು ತಂಡವನ್ನು 2024ರಿಂದ ಮುನ್ನಡೆಸುತ್ತಿದ್ದಾರೆ. ಜನರು ಏನು ಹೇಳುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ರುತುರಾಜ್ ಅವರು ಧೋನಿ ಅವರ ನಾಯಕತ್ವದಲ್ಲಿ ಆಡಿದ್ದಾರೆ. ಅಲ್ಲದೆ ಅವರ ಗರಡಿಯಲ್ಲಿ ಪಳಗುತ್ತಿದ್ದಾರೆ ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಧೋನಿ ಅವರು ಆಡದೇ ಇದ್ದಾಗ ಗಾಯಕ್ವಾಡ್ ತಂಡವನ್ನು ಮುನ್ನಡೆಸಬೇಕು. ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗಿರಬಹುದು. ಈ ಆವೃತ್ತಿಯಲ್ಲಿ ಅವರು ಮೆಂಟರ್ ಕಂ, ಮಾರ್ಗದರ್ಶಕರ ಪಾತ್ರದಲ್ಲಿ ಹೆಚ್ಚಾಗಿ ನಾನು ಅವರನ್ನು ನೋಡುತ್ತಿದ್ದೇನೆ. ರುತುರಾಜ್ ಗಾಯಕ್ವಾಡ್ ಅವರಲ್ಲಿನ ನಾಯಕತ್ವ ಗುಣಗಳ ಬಗ್ಗೆ ಜನರಿಗೂ ಅರಿವಾಗಬೇಕು. ಅವರಿಗೆ ಕೆಲವು ವರ್ಷ ನೀಡಿ ಅವಕಾಶ ಕೊಡಬೇಕು. ಒಂದು ವೇಳೆ ಅವರು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ಸಂಜು ಸ್ಯಾಮ್ಸನ್ ಇದ್ದಾರೆ ಎಂದು ಉತ್ತಪ್ಪ ತಿಳಿಸಿದ್ದಾರೆ.
ರುತುರಾಜ್ ಗಾಯಕ್ವಾಡ್ ಅವರು 2024ರಲ್ಲಿ ನಾಯಕತ್ವವನ್ನು ವಹಿಸಿಕೊಂಡರು. ಕಳೆದ ಆವೃತ್ತಿಯಲ್ಲೂ ಇವರು ತಂಡವನ್ನು ಮುನ್ನಡೆಸಿದ್ದರು. ಆದರೆ ಲೀಗ್ನ ಮಧ್ಯದಲ್ಲಿ ಗಾಯಕ್ಕೆ ತುತ್ತಾಗಿ ಹೊರ ನಡೆದಿದ್ದರು. ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಅಲ್ಲದೆ ಇತಿಹಾಸದಲ್ಲಿ ಮೊದಲ ಬಾರಿಗೆ ಕೊನೆಯ ಸ್ಥಾನದೊಂದಿಗೆ ಸರಣಿಗೆ ಗುಡ್ ಬೈ ಹೇಳಿತ್ತು. ಹೀಗಾಗಿ ಈ ಆವೃತ್ತಿಯಲ್ಲಿ ಎಲ್ಲರ ಕಣ್ಣುಗಳು ಈ ತಂಡದ ಮೇಲೆ ನೆಟ್ಟಿರಲಿವೆ. ಚೆನ್ನೈ ತಂಡ 6ನೇ ಐಪಿಎಲ್ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ವೇಳೆ ರುತುರಾಜ್ ಗಾಯಕ್ವಾಡ್ ಪಾತ್ರ ಮುಖ್ಯ. 19ನೇ ಆವೃತ್ತಿಯ ಐಪಿಎಲ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಮಾರ್ಚ್ 30 ರಂದು ನಡೆಯಲಿದೆ.