ಮಾರ್ಚ್ 8 ಭಾರತೀಯ ಕ್ರಿಕೆಟ್ ಅಭಿಮಾನಿಗಳು ಎಂದು ಮರೆಯದ ಪಂದ್ಯ. ಅಂದು ಅಹಮದಾಬಾದ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ವೇಳೆ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಸೂರ್ಯಕುಮಾರ್ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಆದರೆ ಇದೇ ಆಟಗಾರರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿದಾಗ ಬೆಟ್ಟದಷ್ಟು ನಿರೀಕ್ಷೆಗಳು ಇದ್ದವು. ಆದರೆ ಈ ಎಲ್ಲ ನಿರೀಕ್ಷೆಗಳು ನುಚ್ಚುನಾರಾಗಿವೆ. ಸ್ಟಾರ್ ಆಟಗಾರರು 19ನೇ ಆವೃತ್ತಿಯ ಐಪಿಎಲ್ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ.
ಟಿ20 ಕ್ರಿಕೆಟ್ನ ಸೂಪರ್ ಸ್ಟಾರ್ ಆಟಗಾರರು 19ನೇ ಆವೃತ್ತಿಯ ಐಪಿಎಲ್ನಲ್ಲಿ ನಿರಾಸೆಯನ್ನು ಅನುಭವಿಸಿದ್ದಾರೆ. ಈ ಲೀಗ್ನಲ್ಲಿ ಯಾರ್ಕರ್ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಾಡುವ ಜಸ್ಪ್ರೀತ್ ಬುಮ್ರಾ ಆಡಿದ 9 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್ ಪಡೆದಿದ್ದಾರೆ. ಇವರು ವಿಕೆಟ್ ಪಡೆಯುವಲ್ಲಿ ಹಿಂದೆ ಬಿದ್ದಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ತಿಲಕ್ ವರ್ಮಾ ಒಂದು ಶತಕ ಬಾರಿಸಿದ್ದಾರೆ. ಈ ಲೀಗ್ನಲ್ಲಿ ಇವರು ಕೇವಲ 193 ರನ್ ಸಿಡಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸಹ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರು ಈ ಬಾರಿಯ ಐಪಿಎಲ್ನಲ್ಲಿ ಆಡಿದ 9 ಪಂದ್ಯಗಳಲ್ಲಿ 183 ರನ್ ಮಾತ್ರ ಸಿಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಹ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗಿದ್ದರು. ಇವರು ಸಹ ಈ ಲೀಗ್ನಲ್ಲಿ ಕೇವಲ 183 ರನ್ ಬಾರಿಸಿದ್ದು, 4 ವಿಕೆಟ್ ಕಬಳಿಸಿದ್ದಾರೆ.
ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸ್ಟಾರ್ ಆಟಗಾರರ ದಂಡೇ ಮುಂಬೈ ಇಂಡಿಯನ್ಸ್ ತಂಡದಲ್ಲಿದೆ. ಆದರೂ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ತಂಡದ ಪ್ರದರ್ಶನದ ಬಗ್ಗೆ ಕೋಚ್ ಮಹೇಲ ಜಯವರ್ಧನೆ ಮಾತನಾಡಿದ್ದಾರೆ. "ಇದು ಕೇವಲ ಬುಮ್ರಾ ಒಬ್ಬರ ತಪ್ಪಲ್ಲ, ಇದು ಬೌಲರ್ಗಳ ಸಾಮೂಹಿಕ ವೈಫಲ್ಯ. ಬುಮ್ರಾ ಅವರನ್ನು ಹೊರತು ಪಡಿಸಿ ಉಳಿದ ಬೌಲರ್ಗಳು ಸಹ ಬಿಗುವಿನ ದಾಳಿ ನಡೆಸಿ ವಿಕೆಟ್ ಬೇಟೆ ನಡೆಸಬೇಕಿತ್ತು. ಇದರಿಂದ ಬುಮ್ರಾ ಅವರಿಗೆ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಸೂರ್ಯಕುಮಾರ್ ಅವರು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಆದರೆ ಅದೃಷ್ಟ ಕೈಕೊಡುತ್ತಿದೆ ಎಂದು ಕೋಚ್ ಹೇಳಿದ್ದಾರೆ.
5 ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದೆ. ಮುಂಬೈ ಆಡಿದ 9 ಪಂದ್ಯಗಳಲ್ಲಿ 2 ಜಯ, 7 ಸೋಲು ಕಂಡಿದ್ದು 4 ಅಂಕಗಳನ್ನು ಕಲೆ ಹಾಕಿದೆ. ಇನ್ನು ಹಾರ್ದಿಕ್ ಪಡೆ ಪ್ಲೇ ಆಫ್ ಪ್ರವೇಶಿಸಬೇಕಾದಲ್ಲಿ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.