
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಶುಕ್ರವಾರ ಹೃದಯ ತಪಾಸಣೆಗಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜು ನಡೆಯಲಿದ್ದು, ಗಂಗೂಲಿ ಖುದ್ದಾಗಿ ಈ ಕಾರ್ಯಕ್ರಮದ ಆಯೋಜನೆಯನ್ನ ವೀಕ್ಷಿಸಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದ 49 ವರ್ಷದ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಘು ಹೃದಯಾಘಾತಕ್ಕೊಳಗಾಗಿದ್ದ ಗಂಗೂಲಿಯವರಿಗೆ ವೈದ್ಯರ ತಂಡವು ತುಂಬಾ ಸೂಕ್ಷ್ಮವಾಗಿ ಆರೋಗ್ಯವನ್ನ ಗಮನಿಸುತ್ತಿದೆ. ಆದಾಗ್ಯೂ, ನಾರಾಯಣ ಹೆಲ್ತ್ ಸಿಟಿ ಅವರ ಆರೋಗ್ಯದ ಬಗ್ಗೆ ಯಾವುದೇ ವಿಚಾರವನ್ನ ಬಹಿರಂಗಪಡಿಸಿಲ್ಲ. ಆದರೆ ಇದು ಕೇವಲ ವಾಡಿಕೆಯ ತಪಾಸಣೆ ಎಂದು ನಂಬಲಾಗಿದೆ.
ಸೌರವ್ ಗಂಗೂಲಿ ಕಳೆದ ವರ್ಷ ಎರಡು ಬಾರಿ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರು ಎರಡು ಆಂಜಿಯೋಪ್ಲ್ಯಾಸ್ಟಿ ಕಾರ್ಯವಿಧಾನಗಳಿಗೆ ಒಳಗಾಗಿದ್ದರು.
ಕೋವಿಡ್-19 ವಿರುದ್ಧ ಸಂಪೂರ್ಣ ಲಸಿಕೆಯನ್ನು ಪಡೆದಿರುವ ಗಂಗೂಲಿ, ಜನವರಿ 2022 ರಲ್ಲಿ ಓಮಿಕ್ರಾನ್ ರೂಪಾಂತರದ ಪಾಸಿಟಿವ್ ಪರೀಕ್ಷೆಯ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸಹೋದರ ಸ್ನೇಹಶಿಶ್ ಗಂಗೂಲಿ ಅವರು ಕಳೆದ ವರ್ಷದ ಆರಂಭದಲ್ಲಿ ಕೋವಿಡ್ -19 ಪಾಸಿಟಿವ್ ಆಗಿದ್ದರು.
ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಅತ್ಯಂತ ಅಚ್ಚುಕಟ್ಟಾಗಿ ನಡೆಯಲು ಸೌರವ್ ಗಂಗೂಲಿ ಪಣತೊಟ್ಟಿದ್ದಾರೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.