
ಟಿ ಟ್ವೆಂಟಿ ವಿಶ್ವಕಪ್ ಮರೆತು ಮುಂಬೈ ಗೆಲುವಿಗಾಗಿ ಆಟವಾಡಬೇಕಿದೆ
'ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶಾನ್ ಇಬ್ಬರೂ ಕೂಡ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಹೆಚ್ಚಿನ ಗಮನವನ್ನು ಹರಿಸದೇ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ತಮ್ಮ ಮುಂಬೈ ಇಂಡಿಯನ್ಸ್ ತಂಡದ ಪರ ಉತ್ತಮ ಆಟವನ್ನಾಡಿ ತಂಡಕ್ಕೆ ಸಹಾಯ ಮಾಡಬೇಕಿದೆ. ಏಕೆಂದರೆ ಇಬ್ಬರಿಗೂ ಕೂಡ ಕ್ರಿಕೆಟ್ ಭವಿಷ್ಯವನ್ನು ಕಟ್ಟುಕೊಟ್ಟದ್ದು ಇದೇ ಮುಂಬೈ ಇಂಡಿಯನ್ಸ್ ತಂಡ, ಹೀಗಾಗಿ ತಮ್ಮ ತಂಡಕ್ಕೆ ಆಸರೆಯಾಗಬೇಕಾಗಿರುವುದು ಇಬ್ಬರ ಕರ್ತವ್ಯ ' ಎಂದು ಬ್ರಿಯಾನ್ ಲಾರಾ ಬುದ್ದಿಮಾತನ್ನು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಪರ ತಮ್ಮ ಕೊನೆಯ 4 ಪಂದ್ಯಗಳಲ್ಲಿ ಕ್ರಮವಾಗಿ 0,8,5 ಮತ್ತು 3 ರನ್ ಗಳಿಸಿದ್ದರೆ, ಇಶಾನ್ ಕಿಶನ್ ತಮ್ಮ ಕೊನೆಯ 3 ಪಂದ್ಯಗಳಲ್ಲಿ 11, 14 ಮತ್ತು 9 ರನ್ ಗಳಿಸಿ ಮಂಕಾಗಿದ್ದಾರೆ.

ಸೌರಭ್ ತಿವಾರಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಬ್ರಿಯಾನ್ ಲಾರಾ
ಇಶಾನ್ ಕಿಶನ್ ಸಾಲುಸಾಲು ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದ ಕಾರಣ ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆತನ ಬದಲು ಸೌರಭ್ ತಿವಾರಿಗೆ ಆಡುವ ಅವಕಾಶವನ್ನು ಮುಂಬೈ ಇಂಡಿಯನ್ಸ್ ತಂಡ ನೀಡಿತ್ತು. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸೌರಭ್ ತಿವಾರಿ ಆ ಪದ್ಯದಲ್ಲಿ 37 ಎಸೆತಗಳಲ್ಲಿ 45 ರನ್ ಬಾರಿಸುವುದರ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗೆ ಸೌರಭ್ ತಿವಾರಿ ಆಡಿದ ಉತ್ತಮ ಆಟವನ್ನು ಪ್ರಶಂಸಿರುವ ಬ್ರಿಯಾನ್ ಲಾರಾ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರಲ್ಲಿಯೂ ಸೌರಭ್ ತಿವಾರಿ ರೀತಿ ಉತ್ತಮ ಆಟವನ್ನಾಡಬೇಕೆಂಬ ತುಡಿತ ಮತ್ತು ಆಸಕ್ತಿ ಕಾಣಿಸುತ್ತಿಲ್ಲ ಎಂದಿದ್ದಾರೆ.

ಕಳಪೆ ಫಾರ್ಮ್ ಕುರಿತಾಗಿ ಕಣ್ಣೀರಿಟ್ಟಿದ್ದ ಇಶಾನ್ ಕಿಶನ್
ಯುಎಇಯಲ್ಲಿ ಮುಂದುವರಿಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕುರಿತಾಗಿ ಸ್ವತಃ ಇಶಾನ್ ಕಿಶಾನ್ ಅವರೇ ಬೇಸರಕ್ಕೊಳಗಾಗಿ ಕಣ್ಣೀರಿಟ್ಟಿದ್ದ ಘಟನೆ ಕಳೆದ ಭಾನುವಾರದಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಕಣ್ಣೀರಿಡುತ್ತಾ ಕುಳಿತಿದ್ದ ಇಶಾನ್ ಕಿಶನ್ ಬಳಿ ಬಂದ ವಿರಾಟ್ ಕೊಹ್ಲಿ ಆತನನ್ನು ಸಮಾಧಾನಪಡಿಸಿ ಕೆಲ ಹೊತ್ತು ಮಾತನಾಡಿ ಧೈರ್ಯ ತುಂಬಿದ್ದರು.


Click it and Unblock the Notifications












