
ಈ ಬಾರಿಯ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರವನ್ನು ಕೈಗೊಂಡಿದ್ದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಜೊತೆಗಿನ ಎಲ್ಲಾ ಒಪ್ಪಂದವನ್ನು ಸಿಎಸ್ಕೆ ರದ್ದುಗೊಳಿಸಲು ಮುಂದಾಗಿದೆ ಎಂದು ಗುರುವಾರ ವರದಿಯಾಗಿತ್ತು. ಈ ಮೂಲಕ ಈ ಇಬ್ಬರು ಆಟಗಾರರಿಗೆ ಶಾಕ್ ನೀಡಲು ಸಿಎಸ್ಕೆ ಫ್ರಾಂಂಚೈಸಿ ಸಿದ್ಧವಾಗಿದೆ. ಆದರೆ ಇದರ ಜೊತೆಗೆ ಈ ಇಬ್ಬರು ಆಟಗಾರರು ಮತ್ತೊಂದು ಕಾರಣಕ್ಕೆ ಚಿಂತಿಸಬೇಕಾದ ಪ್ರಸಂಗ ಉಂಟಾಗಿದೆ. ಈ ಬಾರಿಯ ಆವೃತ್ತಿಂದ ಹೊರಗುಳಿಯುವ ನಿರ್ಧಾರವನ್ನು ಸ್ವತಃ ಈ ಆಟಗಾರರೇ ತೆಗೆದುಕೊಂಡಿದ್ದರಾದರೂ ಮುಂದಿನ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಬಗ್ಗೆ ಕರಿ ನೆರಳು ಆವರಿಸಿದಂತೆ ಕಂಡು ಬರುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ಅವರ ಹೆಸರನ್ನು ಕಿತ್ತು ಹಾಕಿದ ಬಳಿಕ ಸಿಎಸ್ಕೆ ಮ್ಯಾನೇಜ್ಮೆಂಟ್ ಒಪ್ಪಂದವನ್ನೇ ಅಂತ್ಯಗೊಳಿಸುವ ಬಗ್ಗೆ ವರದಿಯಾಗಿತ್ತು. ಆದರೆ ಈಗ ಈ ಇಬ್ಬರು ಆಟಗಾರರು ಮುಂದಿನ ವರ್ಷದ ಐಪಿಎಲ್ ಆವೃತ್ತಿಯಿಂದಲೂ ಹೊರಗುಳಿಯುವ ಆತಂಕದಲ್ಲಿದ್ದಾರೆ.