
ಐಪಿಎಲ್ ಹರಾಜು ಪ್ರಕ್ರಿಯೆ ವಿಚಾರವಾಗಿ ಸಾಕಷ್ಟು ಚರ್ಚೆಗಳು ಲೆಕ್ಕಾಚಾರಗಳು ಬಿರುಸಿನಿಂದ ನಡೆಯುತ್ತಿದೆ. ಯಾವೆಲ್ಲಾ ಆಟಗಾರರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್ ಆರ್ಸಿಬಿ ತಂಡದ ಪ್ರಮುಖ ಆಟಗಾರನಾಗಿದ್ದ ಯುಜುವೇಂದ್ರ ಚಾಹಲ್ ಹರಾಜಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಸಿಬಿ ತಂಡಕ್ಕೆ ವಾಪಾಸಾಗುವ ಅವಕಾಶ ದೊರೆತರೆ ನಾನು ಖಂಡಿತಾ ಬಹಳಷ್ಟು ಸಂತಸಪಡಲಿದ್ದೇನೆ ಎಂದಿದ್ದಾರೆ ಚಾಹಲ್. ಇದೇ ಸಂದರ್ಭದಲ್ಲಿ ಅವರು ತಾನು ಹರಾಜಿನ ವಿಚಾರವಾಗಿ ಮುಕ್ತವಾಗಿದ್ದು ಯಾವ ತಂಡ ತನ್ನನ್ನು ಕೊಂಡುಕೊಳ್ಳಲು ಬಯಸುತ್ತದೋ ಅದಕ್ಕೆ ನಾನು ನನ್ನ ಸಂಪೂರ್ಣ ನ್ಯಾಯವನ್ನು ಒದಗಿಸಲಿದ್ದೇನೆ ಎಂದಿದ್ದಾರೆ ಚಾಹಲ್.
"ಆರ್ಸಿಬಿ ತಂಡದೊಂದಿಗಿನ 8 ವರ್ಷಗಳ ಪ್ರಯಾಣ ಅಮೋಘವಾಗಿದೆ. ಈ ಬಾರಿ ರೈಟ್ ಟು ಮ್ಯಾಚ್ ಅವಕಾಶವಿಲ್ಲ. ಹೀಗಾಗಿ ನಾನು ಯಾವ ತಂಡ ನನ್ನನ್ನು ಖರೀದಿಸುತ್ತದೋ ಆ ತಂಡಕ್ಕೆ ಹೋಗಲಿದ್ದೇನೆ. ಈ ಬಾರಿ ರೈಟ್ಟು ಮ್ಯಾಚ್ ಅವಕಾಶವಿಲ್ಲದ ಕಾರಣ ನಾನು ಬೇರೆ ತಂಡಕ್ಕೆ ಮೊದಲ ಬಾರಿಗೆ ಹೋಗಲೂ ಬಹುದು. ನಾನು ಯಾವ ತಂಡಕ್ಕೆ ಹೋಗಲೂ ಸಿದ್ಧನಿದ್ದೇನೆ. ವೃತ್ತಿಪರ ಆಟಗಾರನಾಗಿ ನೀವು ಯಾವ ತಂಡದ ಪರವಾಗಿಯೂ ಆಡಲು ಸಿದ್ಧವಾಗಿರಬೇಕು" ಎಂದಿದ್ದಾರೆ ಯುಜುವೇಂದ್ರ ಚಾಹಲ್.
"ಖಂಡಿತವಾಗಿಯೂ ನಾನು ಆರ್ಸಿಬಿ ತಂಡಕ್ಕೆ ಮರಲಲು ಸಾಕಷ್ಟು ಉತ್ಸಾಹಗೊಂಡಿದ್ದೇನೆ. ಹಾಗಂದ ಮಾತ್ರಕ್ಕೆ ಬೇರೆ ತಂಡದ ಪಾಲಾದರೆ ನಾನು ನಿರಾಶನಾಗುವುದಿಲ್ಲ. ಎಲ್ಲರು ಕೂಡ ಹೊಸ ತಂಡವನ್ನು ಕಟ್ಟುತ್ತಿದ್ದಾರೆ. ಯಾರು ನನ್ನನ್ನು ಪಡೆದುಕೊಂಡರೂ ನನಗೆ ಯಾವುದೇ ಸಮಸ್ಯೆಯಿಲ್ಲ. ನಾನು ನನ್ನ 100% ನೀಡಲು ಸಿದ್ಧವಾಗಿದ್ದೇನೆ" ಎಂದು ಚಾಹಲ್ ಹರಾಜಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚಾಹಲ್ ಈ ಬಾರಿಯ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಯ ಆಟಗಾರರ ಪಟ್ಟಿಯಲ್ಲಿ ತಮ್ಮನ್ನು ಸೇರಿಸಿಕೊಂಡಿದ್ದಾರೆ.
ಇನ್ನು ಚಾಹಲ್ ತನ್ನ ನಾಯಕನಾಗಿದ್ದ ವಿರಾಟ್ ಕೋಹ್ಲಿಯ ಬಗ್ಗೆಯೂ ವಿಶೇಷ ಮಾತುಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಅದು ನನ್ನ ಯಶಸ್ಸಿಗೆ ಕಾರಣವಾಗಿದೆ ಎಂದಿದ್ದಾರೆ. ಅಲ್ಲದೆ ಮಾಜಿ ನಾಯಕ ಯಾವತ್ತಿಗೂ ಆತನ ವಿಚಾರಗಳನ್ನು ನನ್ನ ಮೇಲೆ ಹೇರುತ್ತಿರಲಿಲ್ಲ. ನನ್ನ ಮೇಲೆ ಕೋಹ್ಲಿ ಹೊಂದಿದ್ದ ಭರವಸೆ ನನಗೆ ನನ್ನ ಜವಾಬ್ಧಾರಿಯನ್ನು ನಿರ್ವಹಿಸಲು ಸುಲಭವಾಯಿತು ಎಂದಿದ್ದಾರೆ ಚಾಹಲ್.
ಯುಜುವೇಂದ್ರ ಚಾಹಲ್ ಸುದೀರ್ಘ ಕಾಲದಿಂದ ಆರ್ದಿಬಿ ತಂಡದ ಭಾಗವಾಗಿದ್ದಾರೆ. 2014ರಿಂದ ಅವರ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಆರ್ಸಿಬಿ ಪರವಾಗಿ ಚಾಹಲ್ 113 ಪಂದ್ಯಗಳಲ್ಲಿ ಆಡಿದ್ದು 139 ವಿಕೆಟ್ ಪಡೆದುಕೊಂಡಿದ್ದಾರೆ. ಆರ್ಸಿಬಿಯ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣ ಭಾರತದ ಇತರ ಮೈದಾನಗಳಿಗೆ ಹೋಲಿಸಿದರೆ ಸಣ್ಣ ಬೌಂಡರಿಯನ್ನು ಹೊಂದಿದೆ. ಹಾಗಿದ್ದರೂ ಚಾಹಲ್ ತಮ್ಮ ಅದ್ಭುತ ಬೌಲಿಂಗ್ನಿಂದ ಈ ಮೈದಾನದಲ್ಲಿಯೂ ಯಶಸ್ಸು ಸಾಧಿಸಿದ್ದಾರೆ.
ಈ ಸಂದರ್ಭದಲಲ್ಇ ಚಾಹಲ್ ವಿರಾಟ ಕೊಹ್ಲಿ ಯಾವಾಗಲೂ ಆಟಗಾರರಿಗೆ ಬೆಂಬಲವಾಗಿ ನಿಲ್ಲುವಂತಾ ನಾಯಕ ಎಂದು ಪ್ರಶಂಸಿಸಿದ್ದಾರೆ. "ಕೊಹ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆತ ಯಾವತ್ತೂ ನನ್ನನ್ನು ಬದಲಾಯಿಸುವ ಪ್ರಯತ್ನ ಮಾಡಲಿಲ್ಲ. ಈ ರೀತಿಯಾಗಿ ಬೌಲಿಂಗ್ ಮಾಡು ಹಾಗೆ ಮಾಡು ಎಂದು ಯಾವತ್ತೂ ಅವರು ಹೇಳಲಿಲ್ಲ. ಆತನಲ್ಲಿ ಯಾವಾಗಲೂ ಎರಡು ಯೋಜನೆಗಳು ಇರುತ್ತಿತ್ತು. ಅದರಲ್ಲಿ ಮೊದಲನೆಯದ್ದು ನನ್ನದು ಆಗಿತ್ತು" ಎಂದು ನಾಯಕನ ಬಗ್ಗೆ ಚಾಹಲ್ ಹೇಳಿಕೆ ನೀಡಿದ್ದಾರೆ. ಯುಜುವೇಂದ್ರ ಚಾಹಲ್ ಆರ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.