
ಜೈಪುರ, ಮೇ 3: ಐಪಿಎಲ್ ತಂಡಗಳಲ್ಲೊಂದಾದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವವನ್ನು ಮತ್ತೆ ಹಿಂದಿನ ನಾಯಕ ಅಜಿಂಕ್ಯ ರಹಾನೆಗೆ ವಹಿಸಲಾಗಿದೆ. ಮೇ 4ರಂದು ನವದೆಹಲಿಯಲ್ಲಿ ನಡೆಯಲಿರುವ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಮೊದಲು ನಾಯಕನ ಜವಾಬ್ದಾರಿ ಹೊತ್ತುಕೊಂಡಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ವಿಶ್ವಕಪ್ ನಿಮಿತ್ತ ತಂಡ ಸೇರಿಕೊಳ್ಳುವುದಕ್ಕಾಗಿ ತವರಿಗೆ ವಾಪಸ್ಸಾಗಿದ್ದಾರೆ. ಹೀಗಾಗಿ ತೆರವಾದ ಸ್ಥಾನಕ್ಕೆ ಮತ್ತೆ ರಹಾನೆಯನ್ನು ಕರೆತರಲಾಗಿದೆ. ಅಂದ್ಹಾಗೆ ಕೆಲ ವಾರಗಳ ಹಿಂದಷ್ಟೇ ರಹಾನೆಯನ್ನು ನಾಯಕತ್ವದಿಂದ ಕೆಳಗಿಳಿಸಿ ಸ್ಮಿತ್ಗೆ ಮಣೆ ಹಾಕಲಾಗಿತ್ತು.
ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯಸ್ಥರಾಗಿರುವ ಝುಬಿನ್ ಭರುಚ ಮಾತನಾಡಿ. 'ಜಿಂಕ್ಸ್ ಯಾವಾಗಲೂ ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಮತ್ತೆ ತಂಡದ ಜವಾಬ್ದಾರಿ ನೀಡಲಾಗಿದೆ' ಎಂದಿದ್ದಾರೆ. ಶನಿವಾರದ (ಮೇ 4) ಪಂದ್ಯ ಡೆಲ್ಲಿಗೆ ಔಪಚಾರಿಕವಾದರೆ, ರಾಜಸ್ಥಾನ್ಗೆ ಪ್ಲೇ ಆಫ್ ಎಡೆಗಿನ ಅದೃಷ್ಟ ಪರೀಕ್ಷೆಗಿರುವ ಕಡೇ ಅವಕಾಶವಾಗಿದೆ.