
ನಾಗ್ಪುರ್, ಫೆಬ್ರವರಿ 16: ಕರ್ನಾಟಕದ ಬಳಿಕ ವರ್ಷವೊಂದರಲ್ಲಿ ರಣಜಿ ಮತ್ತು ಇರಾನಿ ಕಪ್ ಎರಡನ್ನೂ ಯಶಸ್ವಿಯಾಗಿ ಉಳಿಸಿಕೊಂಡ ಎರಡನೇ ತಂಡವಾಗಿ ಫೈಝ್ ಫಝಲ್ ನಾಯಕತ್ವದ ವಿದರ್ಭ ತಂಡ ಗುರುತಿಸಿಕೊಂಡಿದೆ. ನಾಗ್ಪುರದಲ್ಲಿ ನಡೆದ ಇರಾನಿ ಕಪ್ ವಿಶ್ರಾಂತ ಭಾರತ ಮತ್ತು ವಿದರ್ಭ ನಡುವಣ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿತಾದರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ವಿದರ್ಭವನ್ನು ವಿಜೇತ ಎಂದು ಘೋಷಿಸಿದ್ದರಿಂದ ಫಝಲ್ ಬಳಗ ಈ ಹೆಗ್ಗಳಿಕೆಗೆ ಪಾತ್ರವಾಯಿತು.
ವಿದರ್ಭ ಪರ ಗಣೇಶ್ ಸತೀಶ್ ಮೊದಲ ಇನ್ನಿಂಗ್ಸ್ನಲ್ಲಿ 48 ರನ್ ಮತ್ತು ದ್ವಿತೀಯ ಇನ್ನಿಂಗ್ಸ್ನಲ್ಲಿ 87 ರನ್ ಬಾರಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ತಂಡಕ್ಕೆ ನೆರವಾದರು. ವಿದರ್ಭದ ಆರಂಭಿಕ ಇನ್ನಿಂಗ್ಸ್ನಲ್ಲಿ 102 ರನ್ ಬಾರಿಸಿದ ಅಕ್ಷಯ್ ಕಾರ್ನೆವಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡರು.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಅಜಿಂಕ್ಯ ರಹಾನೆ ನಾಯಕತ್ವದ ವಿಶ್ರಾಂತ ಭಾರತ ತಂಡ, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 95, ಹನುಮ ವಿಹಾರಿ 114 ರನ್ ನೆರವಿನೊಂದಿಗೆ ಮೊದಲ ಇನ್ನಿಂಗ್ಸ್ನಲ್ಲಿ 330 ರನ್ ಗಳಿಸಿತು. ದ್ವಿತೀಯ ಇನ್ನಿಂಗ್ಸ್ನಲ್ಲೂ ವಿಹಾರಿಯ 180 ರನ್ ಕೊಡುಗೆಯೊಂದಿಗೆ 3 ವಿಕೆಟ್ ನಷ್ಟಕ್ಕೆ 374 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು.
ಇನ್ನಿಂಗ್ಸ್ ಆರಂಭಿಸಿದ ರಣಜಿ ಚಾಂಪಿಯನ್ ವಿದರ್ಭ 425 ರನ್ನೊಂದಿಗೆ 95 ರನ್ ಮುನ್ನಡೆ ಸಾಧಿಸಿತು. ಸಂಜಯ್ ರಘುನಾಥ್ 65, ಅಕ್ಷಯ್ ವಾಡೆಕರ್ 73, ಅಕ್ಷಯ್ ಕಾರ್ನೆವಾರ್ 102 ರನ್ ಬಾರಿಸಿ ತಂಡ ಮುನ್ನಡೆಗೆ ನೆರವು ನೀಡಿದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ವಿದರ್ಭಕ್ಕೆ 280 ರನ್ ಗುರಿ ನೀಡಲಾಗಿತ್ತು. ಆದರೆ ವಿದರ್ಭ 5 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತು.
ವಿದರ್ಭದ ಗಣೇಶ್ ಅವರು 5ನೇ ವಿಕೆಟ್ ಒಪ್ಪಿಸಿದ್ದರಿಂದ ಪಂದ್ಯ ಡ್ರಾ ಅನ್ನಿಸಿಕೊಂಡಿತಾದರೂ ಆರಂಭಿಕ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ಆಧಾರದಲ್ಲಿ ವಿದರ್ಭ ತಂಡವನ್ನು ಜಯಶಾಲಿ ಎಂದು ತೀರ್ಮಾನಿಸಲಾಯಿತು.