ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ ಪಡೆಯನ್ನು ಭಾರೀ ಅಂತರದಿಂದ ಸೋಲಿಸಿದೆ. ಎಲ್ಲಾ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಪಾಕ್ ಪಡೆ ನಿರೀಕ್ಷಿಸದ ಆಘಾತವನ್ನು ನೀಡಿದೆ. ಯಾವ ಹಂತದಲ್ಲಿಯೂ ಭಾರತಕ್ಕೆ ಸವಾಲೇ ಆಗದ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಬರೊಬ್ಬರಿ 228 ರನ್ಗಳ ಅಂತರದ ಭಾರೀ ಸೋಲು ಅನುಭವಿಸಿದೆ.
ಈ ಸೋಲಿನ ಬಳಿಕ ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ಅಲ್ಲಿನ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವಿಟ್ಟರ್ನಲ್ಲಿ ಪಾಕ್ ಅಭಿಮಾನಿಗಳ ಕಾಲೆಳೆದಿದ್ದು ಪಾಕ್ ಅಭಿಮಾನಿಗಳ ಸೋಲಿನ ಗಾಯಕ್ಕೆ ಉಪ್ಪುಸವರಿದಂತಾಗಿದೆ. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದೆ.

ಪಾಕಿಸ್ತಾನ ತಂಡದ ಸೋಲಿನ ಬಳಿಕ ಪಾಕಿಸ್ತಾನದ ಅಭಿಮಾನಿಗಳನ್ನು ಉದ್ದೇಶಿಸಿ ಇರ್ಫಾನ್ ಪಠಾಣ್ "ಬಹಳಷ್ಟು ಮೌನವಿದೆ.. ಈ ಬಾರಿ ನೆರೆಹೊರೆಯವರು ಟಿವಿ ಜೊತೆಗೆ ಮೊಬೈಲ್ ಫೋನ್ಗಳನ್ನು ಕೂಡ ಒಡೆದಿರುವಂತೆ ಕಾಣಿಸುತ್ತಿದೆ" ಎಂದು ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಪಾಕಿಸ್ತಾನದ ಅಭಿಮಾನಿಗಳನ್ನು ಕೆಣಕಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರೊಇಯೆಗಳು ಬರುತ್ತಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಅಬ್ಬರಿಸಿದೆ. ಮೊದಲಿಗೆ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಭರ್ಜರಿ ಶಥಕದ ಜೊತೆಯಾಟ ನೀಡಿ ಭರ್ಧರ ಬುನಾದಿ ಹಾಕಿದ್ದರು. ಈ ಇಬ್ಬರು ಆಟಗಾರರು ಕೂಡ ತಲಾ ಅರ್ದ ಶತಕ ಸಿಡಿಸಿ ಔಟಾದ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅದ್ಭುತವಾದ ಜೊತೆಯಾಟ ನೀಡಿದರು. ಇಬ್ಬರು ಆಟಗಾರರು ಕೂಡ ಅಜೇಯ ಶತಕ ಸಿಡಿಸಿ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದಾರೆ. ಪಾಕಿಸ್ತಾನಕ್ಕೆ ಗೆಲ್ಲಲು ಭಾರತ ಭರ್ಜರಿ 357 ರನ್ಗಳ ಗುರಿಯನ್ನು ನಿಗದಿಪಡಿಸಿತ್ತು.
ಈ ಮೊತ್ತವನ್ನುಬೆನ್ನಟ್ಟಲು ಆರಂಭಿಸಿದ ಪಾಕಿಸ್ತಾನ ತಂಡ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನಕ್ಕೆ ಕಂಗಾಲಾಯಿತು. ವೇಗಿ ಜಸ್ಪ್ರೀತ್ ಬೂಮ್ರಾ ಅವರಿಂದ ಆರಂಭವಾದ ಪಾಕ್ ದಾಂಡಿಗರನ್ನು ಬೇಟೆಯಾಡುವ ಪೈಪೋಟಿಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದು ಸ್ಪಿನ್ನರ್ ಕುಲ್ದೀಪ್ ಯಾದವ್. ಪಾಕಿಸ್ತಾನದ ಐವರು ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಐದು ವಿಕೆಟ್ಗಳ ಗೊಂಚಲು ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಕೂಡ ಇಲ್ಲಿ ತಲಾ ಒಂದೊಂದು ವಿಕೆಟ್ ಸಂಪಾದಿಸಿದರು. ಈ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 128 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಶರಣಾಗಿದೆ.