ಮಾರ್ಚ್ 28 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಆರಂಭವಾಗಲಿದೆ. ಈ ಲೀಗ್ನಲ್ಲಿ ಆಡಲು ಆಟಗಾರರು ಸಜ್ಜಾಗುತ್ತಿದ್ದಾರೆ. ಐಪಿಎಲ್ ಪಟ್ಟವನ್ನು ಅಲಂಕರಿಸಲು 10 ತಂಡಗಳು ತಾಲೀಮು ನಡೆಸಿವೆ. ಈ ನಡುವೆ ಎಲ್ಲರ ಕಣ್ಣುಗಳು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಅನುಭವಿ ಆಟಗಾರ ಎಂ.ಎಸ್.ಧೋನಿ ಅವರ ಮೇಲೆ ನೆಟ್ಟಿರಲಿದೆ. ಇದು ಧೋನಿ ಅವರ ಕೊನೆಯ ಐಪಿಎಲ್ ಆವೃತ್ತಿ ಆಗುತ್ತಾ ಎಂಬ ಪ್ರಶ್ನೆಗಳು ಸಹ ಎದ್ದಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟ್ ಆಟಗಾರರು ತಮ್ಮ ತಮ್ಮ ಅನಿಸಿಕೆ ನೀಡಿದ್ದಾರೆ. ಇರ್ಫಾನ್ ಪಠಾಣ್ ಸಹ ತಮ್ಮ ಅನಿಸಿಕೆ ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಆರಂಭದಿಂದಲೂ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುತ್ತಿದ್ದಾರೆ. ಅವರು ಹಳದಿ ಜೆರ್ಸಿಗೆ ಮೌಲ್ಯ ತಂದುಕೊಟ್ಟ ಆಟಗಾರ. ಈ ಪ್ಲೇಯರ್ ಈಗ 19ನೇ ಆವೃತ್ತಿಯ ಐಪಿಎಲ್ ಆಡಲು ಸಜ್ಜಾಗುತ್ತಿದ್ದಾರೆ. ಖ್ಯಾತ ವಿಕೆಟ್ ಕೀಪರ್ ಬ್ಯಾಟರ್ ಕೊನೆಯ ಆವೃತ್ತಿಗೆ ತಯಾರಿ ನಡೆಸುತ್ತಿರಬಹುದು ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಎಂಎಸ್ ಧೋನಿ ಇಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಪೂರ್ಣ ಎಂದು ಹೇಳಿದ್ದಾರೆ.

ಮಾಹಿ ಅವರು ಐಪಿಎಲ್ನಲ್ಲಿ 278 ಪಂದ್ಯಗಳನ್ನು ಆಡಿದ್ದು 5439 ರನ್ ಕಲೆ ಹಾಕಿದ್ದಾರೆ. ಇವರು ಚೆನ್ನೈ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವ ಮುನ್ನ ತಂಡ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಕಳೆದ ಆವೃತ್ತಿಯಲ್ಲಿ ಧೋನಿ ತಮ್ಮ ಸ್ಥಾನವನ್ನು ಋತುರಾಜ್ ಗಾಯಕ್ವಾಡ್ ಅವರಿಗೆ ಬಿಟ್ಟುಕೊಟ್ಟರು.

ಜಿಯೋಹಾಟ್ಸ್ಟಾರ್ ಜೊತೆಗೆ ಮಾತನಾಡಿರುವ ಇರ್ಫಾನ್ ಪಠಾಣ್, ಸಿಎಸ್ಕೆ ಹಾಗೂ ಐಪಿಎಲ್ನ್ನು ಧೋನಿ ಇಲ್ಲದೇ ಊಹಿಸಿಕೊಳ್ಳುವುದು ಕಷ್ಟ. ಇವರು ಎಲ್ಲರನ್ನೂ ಒಟ್ಟುಗೂಡಿಸಿದ ಆಟಗಾರ. ಈ ತಂಡವನ್ನು ಮುಂದಿನ ದಿನಗಳಲ್ಲಿ ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಮುನ್ನಡೆಸಬಹುದು ಎಂದು ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ತಿಳಿಸಿದ್ದಾರೆ.

"ಧೋನಿ ಇಲ್ಲದೆ ಸಿಎಸ್ಕೆ ತಂಡವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಇವರು ಹಳದಿ ಜೆರ್ಸಿಯಲ್ಲಿ ಕೊನೆಯ ಬಾರಿಗೆ ಅಂಗಳಕ್ಕೆ ಇಳಿಯಬಹುದು. ಕೂಲ್ ಕ್ಯಾಪ್ಟನ್ ಇಲ್ಲದೆ ಸಿಎಸ್ಕೆ ಅಪೂರ್ಣ. ಧೋನಿ ಈ ಬಾರಿ ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬ ಬಗ್ಗೆ ತಿಳಿದಿಲ್ಲ. ಇವರ ಇರುವಿಕೆ ಡ್ರೆಸ್ಸಿಂಗ್ ರೂಮ್ನಲ್ಲಿ ಹೊಸ ಚೈತನ್ಯವನ್ನು ನೀಡುತ್ತದೆ. ಇದರಿಂದ ನಿಶ್ಚಿತವಾಗಿ ಸಂಜು ಸ್ಯಾಮ್ಸನ್ ಅವರಿಗೆ ಲಾಭವಾಗುತ್ತದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಧೋನಿ ಅವರ ಫಿಟ್ನೆಸ್, ಬ್ಯಾಟಿಂಗ್ ಕ್ರಮಾಂಕ, ಎಲ್ಲ ಪಂದ್ಯಗಳನ್ನು ಆಡುತ್ತಾರಾ ಎಂಬ ಪ್ರಶ್ನೆಗಳೆ ಸಿಎಸ್ಕೆ ಮ್ಯಾನೇಜ್ಮೆಂಟ್ ಹಂತ ಹಂತವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಖಂಡಿತವಾಗಿಯೂ ತಂಡ ಆರನೇ ಐಪಿಎಲ್ ಟ್ರೋಫಿಯನ್ನು ಎತ್ತುವ ಮೂಲಕ ಧೋನಿ ಅವರಿಗೆ ಪರಿಪೂರ್ಣ ವಿದಾಯ ನೀಡಲು ಯೋಜನೆ ಮಾಡಿಕೊಂಡಿದೆ ಎಂದು ಪಠಾಣ್ ತಿಳಿಸಿದ್ದಾರೆ.