
ಆರಂಭಿಕ ಸ್ಥಾನಕ್ಕೆ ತೀವ್ರ ಪೈಪೋಟಿ
ಟೀಮ್ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕೆ ಮೊದಲೇ ಸಾಕಷ್ಟು ಸ್ಪರ್ಧೆ ಇದೆ. ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಮೂವರು ಕೂಡ ಆರಂಭಿಕರಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರಲ್ಲಿ ಯಾರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಎಂಬುದು ಮ್ಯಾನೇಜ್ಮೆಂಟ್ಗೆ ಸವಾಲಿನ ಸಂಗತಿಯಾಗಿದೆ. ಈಗ ಇಶಾನ್ ಕಿಶನ್ ಕೂಡ ಈ ಸ್ಪರ್ಧೆಗೆ ಸೇರಿಕೊಂಡಿದ್ದಾರೆ.

ಶಿಖರ್ ಅಸ್ಥಿರ ಪ್ರದರ್ಶನ
ಈ ಮಧ್ಯೆ ಟೀಮ್ ಇಂಡಿಯಾ ಪರವಾಗಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಸುದೀರ್ಘ ಕಾಲದಿಂದ ರೋಹಿತ್ ಶರ್ಮಾಗೆ ಜೊತೆಯಾಗಿದ್ದ ಶಿಖರ್ ಧವನ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಧವನ್ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಇದೇ ಅಸ್ಥಿರತೆ ಮುಂದುವರಿದರೆ ಧವನ್ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಸ್ಥಾನ ಉಳಿಸಿಕೊಳ್ಳುವುದು ಅಸಾಧ್ಯವಾಗಲಿದೆ.

ಮೂರನೇ ಆಯ್ಕೆಯಾದ ಧವನ್
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಸ್ವತಃ ಟೀಮ್ ಇಂಡಿಯಾ ನಾಯಕ ಮಾತನಾಡುತ್ತಾ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭಾರತದ ಮೊದಲ ಆಯ್ಕೆಯ ಆರಂಭಿಕ ಆಟಗಾರರು ಎಂಬ ಮಾತನ್ನು ಹೇಳಿದ್ದರು. ಶಿಖರ್ ಮೂರನೇ ಆರಂಭಿಕನಾಗಿ ಇದ್ದು ರೋಹಿತ್ ಅಥವಾ ರಾಹುಲ್ ಗಾಯಗೊಂಡರೆ ಅಥವಾ ವಿಶ್ರಾಂತಿ ನೀಡಿದರೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದರು.

ರಾಹುಲ್ಗೂ ಎಚ್ಚರಿಕೆಯ ಗಂಟೆ
ಇನ್ನು ಟೀಮ್ ಇಂಡಿಯಾ ಪರವಾಗಿ ಸೀಮಿತ ಓವರ್ಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ತಂಡದಲ್ಲಿ ಸ್ಥಿರವಾದ ಪ್ರದರ್ಶನ ನೀಡುತ್ತಿದ್ದ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ರಾಹುಲ್ 1 ರನ್ ಗಳಿಸಿದ್ದರೆ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಸಿದ್ದರು. ತಂಡದ ಪ್ರತಿ ಸ್ಥಾನಕ್ಕೂ ತೀವ್ರ ಪೈಪೋಟಿ ಇರುವ ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅವಕಾಶಗಳು ದೂರವಾಗಬಹುದು. ಟಿ20 ಮಾದರಿಯಲ್ಲಿ 2ನೇ ಶ್ರೇಯಾಂಕದಲ್ಲಿರುವ ಕೆಎಲ್ ರಾಹುಲ್ ಫಾರ್ಮ್ಗೆ ಮರಳುವುದು ಕಷ್ಟವಲ್ಲ. ಆದರೆ ಇದು ಎಚ್ಚರಿಕೆಯಂತೂ ಹೌದು..


Click it and Unblock the Notifications
