
ದೇಶೀಯ ಕ್ರಿಕೆಟ್ನಲ್ಲಿ ಪೃಥ್ವಿ ಶಾ, ಸರ್ಫರಾಜ್ ಅಬ್ಬರ
ಸದ್ಯ ದೇಶೀಯ ಕ್ರಿಕೆಟ್ ಮಾದರಿಯಲ್ಲಿ ಕಳೆದ ಹಲವು ವರ್ಷಗಳಿಂದ ಅದ್ಭುತ ಪ್ರದರ್ಶನದ ಮೂಲಕ ಅಬ್ಬರಿಸುತ್ತಿರುವ ಆಟಗಾರರೆಂದರೆ ಸರ್ಫರಾಜ್ ಖಾನ್ ಹಾಗೂ ಪೃಥ್ವಿ ಶಾ. ಎಲ್ಲಾ ಮಾದರಿಯಲ್ಲಿಯೂ ಈ ಆಟಗಾರರು ಮಿಂಚುಹರಿಸುತ್ತಿದ್ದು ರಣಜಿ ಟ್ರೋಫಿಯಲ್ಲಿ ರನ್ ಮಳೆ ಹರಿಸುತ್ತಿದ್ದಾರೆ. ಕಳೆದ ಎರಡ್ಮೂರು ಆವೃತ್ತಿಗಳಲ್ಲಿ ಈ ಇಬ್ಬರು ಆಟಗಾರರು ಕೂಡ ತಮ್ಮ ಅತ್ಯುನ್ನತ ಫಾರ್ಮ್ ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರಿಗೆ ಭಾರತ ತಂಡದಲ್ಲಿ ಸ್ಥಾನ ದೊರೆಯಬೇಕು ಎಂಬ ಅಭಿಪ್ರಾಯಗಳು ಸಾಕಷ್ಟು ಸಮಯಗಳಿಂದ ಕೇಳಿ ಬರುತ್ತಿದೆ.

ಟಿ20 ತಂಡದಲ್ಲಿ ಪೃಥ್ವಿ ಶಾಗೆ ಸ್ಥಾನ, ಟೆಸ್ಟ್ ತಂಡದಲ್ಲಿ ಸೂರ್ಯ ಇಶಾನ್ಗೆ ಕರೆ
ಈ ಮಧ್ಯೆ ನ್ಯೂಜಿಲೆಂಡ್ ವಿರುದ್ಧದ ಟಿ20 ತಂಡದಲ್ಲಿ ಯುವ ಆಟಗಾರ ಪೃಥ್ವಿ ಶಾ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬರೊಬ್ಬರಿ 537 ದಿನಗಳ ಬಳಿಕ ಯು ಆಟಗಾರ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿರುವ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಶಾನ್ ಕಿಶನ್ಗೆ ಕೂಡ ಈ ತಂಡದಲ್ಲಿ ಅವಕಾಶ ದೊರೆತಿದೆ.

ಅಭಿಮಾನಿಗಳ ಬೇಸರಕ್ಕೆ ಕಾರಣವಾದ ಸರ್ಫರಾಜ್ ನಿರ್ಲಕ್ಷ್ಯ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಪ್ರಕಟಿಸಿರುವ ತಂಡದಲ್ಲಿ ಮುಂಬೈನ ಸರ್ಫರಾಜ್ಗೆ ಅವಕಾಶ ದೊರೆಯದಿರುವ ಬಗ್ಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ಆವೃತ್ತಿಗಳಿಂದ ರಣಜಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಈ ಬಾರಿಯ ರಣಜಿ ಆವೃತ್ತಿಯಲ್ಲಿ ಮುಂಬೈ ಪರವಾಗಿ ಆಡಿರುವ ಐದು ಪಂದ್ಯಗಳಲ್ಲಿ ಭರ್ಜರಿ 431 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಒಂದು ಅರ್ಧ ಶತಕ ಸೇರಿದೆ. ಕಳೆದ ಆವೃತ್ತಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 982 ರನ್ಗಳನ್ನು ಬಾರಿಸಿ ಅಬ್ಬರಿಸಿದ್ದರು. 122.75ರ ಸರಾಸರಿಯಲ್ಲಿ ಅವರು ಬ್ಯಾಟಿಂಗ್ ಮಾಡಿದ್ದರು. ಹೀಗಾಗಿ ಸರ್ಫರಾಜ್ ಖಾನ್ ಅವರನ್ನು ನಿರ್ಲಕ್ಷ್ಯ ಮಾಡಿ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಆಯ್ಕೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಣಜಿಗೆ ಮಾಡಿದ ಅವಮಾನ
ಸರ್ಫರಾಜ್ ಅಹ್ಮದ್ ನಿರ್ಲಕ್ಷಯ ಮಾಡಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಕಾಮೆಂಟೇಟರ್ ಹರ್ಷ ಭೋಗ್ಲೆ "ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಖಾನ್ಗೆ ಇದು ಖಂಡಿತವಾಗಿಯೂ ಅರಗಿಸಿಕೊಳ್ಳಲು ಬಹಳ ಕಷ್ಟವಾಗಲಿದೆ. ಇದಕ್ಕಿಂತ ಹೆಚ್ಚಿನದ್ದನ್ನು ಮಾಡಿಲು ಅಸಾಧ್ಯ"ಎಂದಿದ್ದಾರೆ. ಇನ್ನೊಬ್ಬರು ಅಭಿಮಾನಿ "ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿಕೊಂಡಿರುವುದು ರಣಜಿ ಟ್ರೋಫಿಗೆ ಮಾಡಿರುವ ಅವಮಾನ. ರಣಜಿಯಲ್ಲಿ ಅಬ್ಬರಿಸುತ್ತಿರುವ ಆ ಯುವ ಆಟಗಾರ ತಂಡದಲ್ಲಿ ಸ್ಥಾನ ಪಡೆಯಲು ಅತ್ಯಂತ ಅರ್ಹ. ಆಯ್ಕೆ ಮಂಡಳಿಯಿಂದ ಮತ್ತೊಮ್ಮೆ ಆಘಾತಕಾರಿ ನಿರ್ಧಾರ" ಎಂದು ಸರ್ಫರಾಜ್ ಉದ್ದೇಶಿಸಿ ಮಾತನಾಡಿದ್ದಾರೆ.


Click it and Unblock the Notifications












