
ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಕಳಪೆ ಫಾರ್ಮ್ ಮುಂದುವರಿದಿದೆ. ಪದೇ ಪದೇ ಸುಲಭವಾಗಿ ವಿಕೆಟ್ ಕಳೆದುಕೊಳ್ಳುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಕೂಡ ಭಾರೀ ನಿರಾಸೆ ಅನುಭವಿಸುತ್ತಿದ್ದಾರೆ. ಅಭಿಮಾನಿಗಳು ಕೂಡ ಈ ಕಳಪೆ ಫಾರ್ಮ್ ಬಗ್ಗೆ ಭಾರೀ ಬೇಸರವನ್ನು ವ್ಯಕ್ತಪಡಿಸುತ್ತಿದ್ದು ಕೊಹ್ಲಿ ಫಾರ್ಮ್ ಕಳೆದುಕೊಳ್ಳಲು ಕಾರಣಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಮಂಗಳವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ನಡೆಸಿ ವಿಕೆಟ್ ಕಳೆದುಕೊಂಡರು. ರಾಜಸ್ಥಾನ್ ರಾಯಲ್ಸ್ ನೀಡಿದ 145 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡದ ಪರವಾಗಿ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರು. ಆದರೆ ಕೊಹ್ಲಿ 10 ಎಸೆತಗಳಲ್ಲಿ 9 ರನ್ಗಳನ್ನು ಮಾಡಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭವಾದ ಆರ್ಸಿಬಿಯ ಪತನ ಸೋಲಿನೊಂದಿಗೆ ಅಂತ್ಯವಾಯಿತು.
ವಿರಾಟ್ ಕೊಹ್ಲಿಯ ಈ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿ ಈಗ ದುಸ್ವಪ್ನದಲ್ಲಿದ್ದಾರೆ. ಈ ದುಸ್ವಪ್ನ ಅಂತ್ಯವಾಗಲಿದೆ ಎಂದಿದ್ದಾರೆ ಆಕಾಶ್ ಚೋಪ್ರ. "ವಿರಾಟ್ ಕೊಹ್ಲಿ ದುಸ್ವಪ್ನದಲ್ಲಿ ಬದುಕುತ್ತಿದ್ದಾರೆ. ಕೆಲ ಸಮಯಗಳಲ್ಲಿ ಈ ದುಸ್ವಪ್ನ ಅಂತ್ಯವಾಗಲಿದೆ. ಕೋಟ್ಯಂತರ ಜನರ ಮುಂದೆ ಈ ದುಸ್ವಪ್ನ ಅಂತ್ಯವಾಗಲಿದೆ. ಈ ಕ್ಷಣದಲ್ಲಿ ವಿರಾಟ್ ಕೊಹ್ಲಿಯಾಗಿರುವುದು ಬಹಳ ಕಠಿಣ" ಎಂದಿದ್ದಾರೆ ಆಕಾಶ್ ಚೋಪ್ರ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಿರುವ ವಿರಾಟ್ ಕೊಹ್ಲಿ ಈ ಬಾರಿ ರನ್ಗಳಿಸಲು ಅಕ್ಷರಶಃ ಪರದಾಡುತ್ತಿದ್ದಾರೆ. 2008ರಲ್ಲಿ ವಿರಾಟ್ ಕೊಹ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಬಳಿಕ ಇದು ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆವೃತ್ತಿಯಾಗಿದೆ. ಆಡಿರುವ 9 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 16ರ ಸರಾಸರಿಯಲ್ಲಿ ಗಳಿಸಿದ್ದು ಕೇವಲ 128 ರನ್ ಮಾತ್ರ.
2019ರ ನವೆಂಬರ್ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳಿಸಲು ಸತತವಾಗಿ ವಿಫಲವಾಗಿದ್ದಾರೆ. ಅಂದು ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ ಬಳಿಕ ಮತ್ತೊಂದು ಅಂತಾ ಪ್ರದರ್ಶನ ಕೊಹ್ಲಿ ಬ್ಯಾಟ್ನಿಂದ ಬಂದಿಲ್ಲ. ಆ ಕಳಪೆ ಫಾರ್ಮ್ ಈಗ ಐಪಿಎಲ್ನಲ್ಲಿಯೂ ಮುಂದುವರಿದಿದ್ದು ಅಭಿಮಾನಿಗಳ ಪಾಲಿಗೆ ಚಿಂತೆ ಹೆಚ್ಚಿಸಿದೆ.
"ವಿರಾಟ್ ಕೊಹ್ಲಿ ಇಂದು ಎಡ್ಜ್ ಆಗಿ ವಿಕೆಟ್ ಕಳೆದುಕೊಂಡರು. ಅದರಲ್ಲಿ ಆತಂಕಪಟುವಂತದ್ದು ಏನೂ ಇಲ್ಲ. ಅವರ ಬ್ಯಾಟ್ನಿಂದ ಒಂದೆರಡು ಉತ್ತಮ ಬೌಂಡರಿಗಳು ಬಂದವು. ಅವರು ಎಲ್ಲಾ ರೀತಿಯಿಂದಲೂ ಪ್ರಯತ್ನಗಳನ್ನು ಪಡುತ್ತಿದ್ದಾರೆ. ಚೆಂಡಿನ ವಿರುದ್ಧ ಕಠಿಣವಾಗಿ ಸವಾರಿ ಮಾಡುತ್ತಿದ್ದಾರೆ. ಆತ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಆದರೆ ಅದು ಅವರಿಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ರಾಯಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಆರ್ಸಿಬಿ 29 ರನ್ಗಳಿಂದ ಕಳೆದುಕೊಂಡಿದೆ. ಅಗ್ರ ಕ್ರಮಾಂಕದ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದಲೂ ಆರ್ಸಿಬಿಗೆ ಯಾವುದೇ ನೆರವು ದೊರೆಯದ ಕಾರಣದಿಂದಾಗಿ ಆರ್ಆರ್ ನಿಡಿದ್ದ ಸುಲಭ ಸವಾಲನ್ನು ಮೀರಿ ನಿಲ್ಲಲು ಅಸಾಧ್ಯವಾಯಿತು. ಹೀಗಾಗಿ ಆರ್ಸಿಬಿ ಸತತ ಎರಡನೇ ಸೋಲು ಅನುಭವಿಸಿದೆ.