
ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಆರೋಪಗಳು ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಲೇ ಇವೆ. ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಸುದ್ದಿಗೋಷ್ಟಿಯೊಂದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಗಳ ವಿರುದ್ಧ ನೇರಾನೇರ ಉತ್ತರಗಳನ್ನು ನೀಡುವುದರ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. ಅದೇ ರೀತಿ ಇದೀಗ ಭಾರತ ಕ್ರಿಕೆಟ್ ಕಂಡ ಉತ್ತಮ ವಿಕೆಟ್ ಕೀಪರ್ಗಳಲ್ಲಿ ಒಬ್ಬರಾಗಿರುವ ವೃದ್ಧಿಮಾನ್ ಸಹಾ ಕೂಡ ಬಿಸಿಸಿಐ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಹೌದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ನಿವೃತ್ತಿ ತೆಗೆದುಕೊಳ್ಳುವಂತೆ ಸಲಹೆಯನ್ನು ನೀಡಿದ್ದರು ಮತ್ತು ತಾನು ಬಿಸಿಸಿಐನ ಅಧ್ಯಕ್ಷನಾಗಿರುವವರೆಗೂ ತಂಡದಲ್ಲಿ ನಿನಗೆ ಸ್ಥಾನ ಖಚಿತ ಎಂದು ಹೇಳಿದ್ದ ಸೌರವ್ ಗಂಗೂಲಿ ಇದೀಗ ಬದಲಾಗಿದ್ದಾರೆ ಎಂಬ ಹೇಳಿಕೆಗಳನ್ನು ನೀಡಿದ್ದ ವೃದ್ದಿಮಾನ್ ಸಹಾ ವಿವಾದಗಳನ್ನು ಹುಟ್ಟುಹಾಕಿದ್ದಾರೆ.
ಹೀಗೆ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ವಿರುದ್ಧ ಮಾತನಾಡಿರುವ ವೃದ್ದಿಮಾನ್ ಸಾಹ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡುವುದರ ಮೂಲಕ ಪತ್ರಕರ್ತನೋರ್ವ ತನ್ನ ವಿರುದ್ಧ ಬೆದರಿಕೆಗಳನ್ನು ಹಾಕಿದ್ದರು ಎಂದು ಆರೋಪಿಸಿ ತನ್ನ ಮತ್ತು ಪತ್ರಕರ್ತರ ನಡುವೆ ನಡೆದಿದ್ದ ಮೊಬೈಲ್ ಚಾಟಿಂಗ್ ಚಿತ್ರಗಳನ್ನು ಹಂಚಿಕೊಂಡಿದ್ದರು. ಹೀಗೆ ವೃದ್ಧಿಮಾನ್ ಸಹಾ ಮಾಡಿದ್ದ ಟ್ವೀಟ್ ಕುರಿತು ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದರು. ವೃದ್ಧಿಮಾನ್ ಸಹಾ ಪರ ಮಾತನಾಡಿದ ವೀರೇಂದ್ರ ಸೆಹ್ವಾಗ್ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಹಾಗೂ ಈ ಕುರಿತಾಗಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಪ್ರತಿಕ್ರಿಯೆಯನ್ನು ನೀಡಿ ಈ ರೀತಿಯ ಬೆದರಿಕೆಯನ್ನು ಹಾಕಿದ್ದ ಆ ಪತ್ರಕರ್ತನ ಹೆಸರನ್ನು ವೃದ್ದಿಮಾನ್ ಸಹಾ ಬಹಿರಂಗಪಡಿಸಬೇಕು ಮತ್ತು ವೃದ್ಧಿಮಾನ್ ಸಹಾಗೆ ಬಿಸಿಸಿಐ ರಕ್ಷಣೆಯನ್ನು ನೀಡಬೇಕು ಎಂದು ಅಭಿಪ್ರಾಯವನ್ನು ತಿಳಿಸಿದ್ದರು.
ಹೀಗೆ ವೃದ್ದಿಮಾನ್ ಸಹಾ ಮಾಡಿದ್ದ ಟ್ವೀಟ್ ಕುರಿತು ಭಾರತದ ಹಲವಾರು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದು, ಇದೀಗ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಟ್ವಿಟರ್ ಮೂಲಕ ವೃದ್ಧಿಮಾನ್ ಸಹಾ ಪರ ಬ್ಯಾಟ್ ಬೀಸಿದ್ದಾರೆ. ಆಟಗಾರನೋರ್ವನಿಗೆ ಪತ್ರಕರ್ತ ಈ ರೀತಿಯ ಬೆದರಿಕೆಗಳನ್ನು ಹಾಕಿರುವುದು ಇದೇ ಮೊದಲೇನಲ್ಲ ಎಂದು ಬರೆದುಕೊಂಡಿರುವ ಇರ್ಫಾನ್ ಪಠಾಣ್ ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಇದೇ ರೀತಿಯ ಘಟನೆಗಳು ನಡೆದಿವೆ ಎಂದಿದ್ದಾರೆ. ಓರ್ವ ಕ್ರಿಕೆಟಿಗ ಫಾರ್ಮ್ ಕಳೆದುಕೊಂಡು ನಿರಂತರವಾಗಿ ನೆಲಕಚ್ಚಿದಾಗ ಈ ರೀತಿಯ ಬೆದರಿಕೆಗಳು ಎದುರಾಗುತ್ತವೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ. ಹಾಗೂ ಈ ರೀತಿಯ ಬೆದರಿಕೆಗಳು ಸ್ವಾಗತಾರ್ಹವಲ್ಲ ಎಂದು ಕೂಡ ಇರ್ಫಾನ್ ಪಠಾಣ್ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ಸಾಲು ಸಾಲು ಆರೋಪಗಳನ್ನು ಮಾಡುತ್ತಾ ಬೇಸರ ಹೊರಹಾಕುತ್ತಿರುವ ವೃದ್ಧಿಮಾನ್ ಸಹಾ ಅವರನ್ನು ಇದಕ್ಕೂ ಮುನ್ನ ಬಿಸಿಸಿಐ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆಚೆ ಹಾಕಿತ್ತು. ಹೌದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗುವ ಮುನ್ನವೇ ವೃದ್ಧಿಮಾನ್ ಸಹಾ ಅವರನ್ನು ಸಂಪರ್ಕಿಸಿದ್ದ ಬಿಸಿಸಿಐ ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣದಿಂದಾಗಿ ಆತನನ್ನು ತಂಡದಿಂದ ಹೊರ ಹಾಕಿರುವುದಾಗಿ ತಿಳಿಸುವುದಲ್ಲದೆ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದರೆ ಮಾತ್ರ ಮತ್ತೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬ ಮಾಹಿತಿಯನ್ನು ಕೂಡ ನೀಡಿತ್ತು. ಹೀಗೆ ಬಿಸಿಸಿಐ ಎಚ್ಚರಿಕೆಯನ್ನು ನೀಡಿದರೂ ಸಹ ರಣಜಿ ಟ್ರೋಫಿಯಲ್ಲಿ ಭಾಗವಹಿಸಲು ವೃದ್ದಿಮಾನ್ ಸಹಾ ಹಿಂದೇಟು ಹಾಕಿದ್ದು ಇದೀಗ ವಿವಾದಗಳಿಗೆ ಸಿಲುಕಿ ಹಾಕಿಕೊಂಡಿದ್ದಾರೆ.