
ವೈಝಾಗ್, ಮೇ 09: ಐಪಿಎಲ್ 2019ರ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ ಅನುಭವಿಸಿದ ಸೋಲಿಗೆ ನಾಯಕ ಕೇನ್ ವಿಲಿಯಮ್ಸನ್ ಕಾರಣ ತಿಳಿಸಿದ್ದಾರೆ.
ಇಲ್ಲಿನ ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ಗಳ ರೋಚಕ ಜಯ ದಾಖಲಿಸಿ ಎಲಿಮಿನೇಟರ್ 2 ಪಂದ್ಯಕ್ಕೆ ಅರ್ಹತೆ ಪಡೆಯಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್, "ಇದು ನಮ್ಮ ತಂಡದ ಶ್ರೇಷ್ಠ ಪ್ರದರ್ಶನವಲ್ಲ, ಹೀಗಾಗಿ ಡೆಲ್ಲಿ ತಂಡಕ್ಕೆ ಈ ಗೆಲುವು ಅರ್ಹ,'' ಎಂದು ಹೇಳಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್ಸ್ಟೋವ್ ಅವರ ಬ್ಯಾಟಿಂಗ್ ಕೊರತೆ ಎದುರಿಸಿ ತನ್ನ ಪಾಲಿನ 20 ಫವರ್ಗಳಲ್ಲಿ 162 ರನ್ಗಳ ಸವಾಲಿನ ಮೊತ್ತ ದಾಖಲಿಸಲಷ್ಟೇ ಶಕ್ತಗೊಂಡಿತು. ಬಳಿಕ ಗುರಿ ಬೆನ್ನತ್ತಿದ ಕ್ಯಾಪಿಟಲ್ಸ್, ಕೊನೆಯ ಓವರ್ನಲ್ಲಿ ತಿಣುಕಾಟ ನಡೆಸಿ 2 ವಿಕೆಟ್ಗಳ ಜಯ ದಾಖಲಿಸುವಲ್ಲಿ ಯಶಸ್ವಿಯಾಯಿತು.
"ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಲ್ಲ ಪಿಚ್ ಇದು. ಮೊದಲ ಹಂತದ ಮುಕ್ತಾಯಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆವು. ಈ ಮೊತ್ತ ಕಠಿಣವಾಗಿರುತ್ತದೆ ಎಂಬುದನ್ನು ಅರಿತಿದ್ದೆ. ಏಕೆಂದರೆ ಪವರ್ ಪ್ಲೇ ಬಳಿಕ ಗುರಿ ಬೆನ್ನತ್ತಿ ಹೊರಡುವುದು ಅಷ್ಟು ಸುಲಭದ ಕೆಲಸವಲ್ಲ. ಎದುರಾಳಿಯನ್ನು ಕಟ್ಟಿಹಾಕುವ ಉತ್ತಮ ಅವಕಾಶ ನಮ್ಮ ಬಳಿ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಹಲವು ಬಾರಿ ಇಂಥದ್ದೇ ತಪ್ಪನ್ನು ಮಾಡಿರುವುದು ಬೇಸರದ ಸಂಗತಿ,'' ಎಂದು ವಿಲಿಯಮ್ಸನ್ ತಂಡದ ಸೋಲಿಗೆ ಕಾರಣವನ್ನು ವಿವರಿಸಿದ್ದಾರೆ.
ಪಂದ್ಯದಲ್ಲಿ ಪೃಥ್ವಿ ಶಾ (38 ಎಸೆತಗಳಲ್ಲಿ 56 ರನ್) ಮತ್ತು ರಿಷಭ್ ಪಂತ್ (21 ಎಸೆತಗಳಲ್ಲಿ 49 ರನ್) ಭರ್ಜರಿ ಬ್ಯಾಟಿಂಗ್ ನಡೆಸಿ ಡೆಲ್ಲಿ ತಂಡದ ಗೆಲುವಿನ ರೂವಾರಿಗಳಾದರು. ಆದರೂ, ಇನಿಂಗ್ಸ್ ಅಂತ್ಯದಲ್ಲಿ ಸತತ ವಿಕೆಟ್ಗಳನ್ನು ಒಪ್ಪಿಸಿದರ ಪರಿಣಾಮ ಕ್ಯಾಪಿಟಲ್ಸ್ ಪಡೆ ತೆವಳುತ್ತಾ ಗುರಿ ಮುಟ್ಟುವಂತಾಯಿತು.