
ಪಂದ್ಯದ ರೋಚಕತೆ ಹೆಚ್ಚಿಸಿದ್ದ ಸಂಘರ್ಷ!
ಜಸ್ಪ್ರೀತ್ ಬೂಮ್ರಾ ಹಾಗೂ ಜೇಮ್ಸ್ ಆಂಡರ್ಸನ್ ನಡುವಿನ ಈ ಕದನದಿಂದಾಗಿ ಪಂದ್ಯದ ಅಂತಿಮ ದಿನದಾಟ ಮತ್ತಷ್ಟು ಚುರುಕು ಪಡೆದುಕೊಂಡಿತ್ತು. ಆದರೆ ಅಂತಿಮವಾಗಿ ಇಂಗ್ಲೆಂಡ್ ತಂಡಕ್ಕೆ ಇದು ತಿರುಗು ಬಾಣವಾಗಿತ್ತು. ಜಸ್ಪ್ರೀತ್ ಬೂಮ್ರಾ ಬ್ಯಾಟಿಂಗ್ಗೆ ಇಳಿದಾಗ ಅವರ ವಿರುದ್ಧ ಇಂಗ್ಲೆಂಡ್ ಹೆಣೆದಿದ್ದ ವ್ಯೂಹವನ್ನು ದಿಟ್ಟವಾಗಿ ಎದುರಿಸಿದ್ದ ಭಾರತದ ವೇಗಿ ಮೊಹಮ್ಮದ್ ಶಮಿ ಜೊತೆಗೆ 9ನೇವಿಕೆಟ್ಗೆ 89 ರನ್ಗಳ ಜೊತೆಯಾಟವನ್ನು ನೀಡಿದ್ದರು. ಬಳಿಕ ಬೌಲಿಂಗ್ನಲ್ಲಿಯೂ ಭಾರತದ ದಾಳಿ ಇಂಗ್ಲೆಂಡ್ ಪಾಲಿಗೆ ಎದುರಿಸುವುದು ಅಸಾಧ್ಯವಾಗಿತ್ತು. ಈ ಕದನದಲ್ಲಿ ಇಂಗ್ಲೆಂಡ್ ಭಾರೀ ಹಿನ್ನಡೆಯನ್ನು ಅನುಭವಿಸಿದ್ದು ಅಂತಿಮವಾಗಿ ಪಂದ್ಯವನ್ನೇ ಸೋಲೊಪ್ಪಿಕೊಂಡಿತ್ತು.

ಬೌನ್ಸರ್ ದಾಳಿಗೆ ಸಿಲುಕಿಕೊಂಡಿದ್ದೆ
"ಹೌದು ನಾನು ಈ ಬೌನ್ಸರ್ ದಾಳಿಗೆ ಸಿಲುಕಿಕೊಂಡಿದ್ದೆ. ಯಾಕೆಂದರೆ ಎಲ್ಲಾ ಬ್ಯಾಟರ್ಗಳು ಕೂಡ ಪಿಚ್ ನಿಧಾನವಾಗಿದೆ ಎಂದು ಹೇಳುತ್ತಿದ್ದರು" ಎಂದು ಆಂಡರ್ಸನ್ ಟೈಲೆಂಡರ್ಸ್ ಪಾಡ್ಕಾಸ್ಟ್ನಲ್ಲಿ ಪ್ರತಿಕ್ರಿಯಿಸುತ್ತಾ ವಿವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ 180 ರನ್ಗಳಿಸಿ ಅಜೇಯವಾಗುಳಿದಿದ್ದ ನಾಯಕ ಜೋ ರೂಟ್ ತನ್ನಲ್ಲಿ ಬಂದು ಬೂಮ್ರಾ ತನ್ನ ಎಂದಿನ ವೇಗದಲ್ಲಿ ಬೌಲಿಂಗ್ ದಾಳಿಯನ್ನು ನಡೆಸುತ್ತಿಲ್ಲ ಎಂದು ತಿಳಿಸಿದ್ದರು ಎಂದು ಆಂಡರ್ಸನ್ ಹೇಳಿಕೊಂಡಿದ್ದಾರೆ.

ಈ ರೀತಿಯ ಅನುಭವ ಯಾವತ್ತೂ ಆಗಿರಲಿಲ್ಲ
"ಆದರೆ ನಾನು ಬೂಮ್ರಾ ಬೌಲಿಂಗ್ ದಾಳಿಯನ್ನು ಎದುರಿಸಿದಾಗ ಮೊದಲ ಎಸೆತವೇ 90 ಮೈಲಿ ವೇಗದಲ್ಲಿತ್ತು. ಅದಕ್ಕೊಂದು ಉದ್ದೇಶವಿದ್ದಂತಿತ್ತು. ಅದು ನನಗೆ ಅನುಭವವಾಗಿತ್ತು. ನನಗೆ ಈ ರೀತಿಯ ಅನುಭವ ನನ್ನ ವೃತ್ತಿ ಜೀವನದಲ್ಲಿ ಯಾವತ್ತೂ ಆಗಿರಲಿಲ್ಲ. ನನಗೆ ಆಗ ಈತ ನನ್ನನ್ನು ಔಟ್ ಮಾಡಲು ಬಯಸುತ್ತಿಲ್ಲ ಎನಿಸಿತ್ತು" ಎಂದು ಆಂಡರ್ಸನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆತ ನನ್ನ ವಿಕೆಟ್ ಪಡೆಯುವ ಉದ್ದೇಶ ಹೊಂದಿರಲಿಲ್ಲ
ಈ ಓವರ್ನಲ್ಲಿ ಬೂಮ್ರಾ ನಾಲ್ಕು ನೋ ಬಾಲ್ಗಳನ್ನು ಕೂಡ ಎಸೆದಿದ್ದರು. "ನನಗೆ ಆತ ನನ್ನನ್ನು ಔಟ್ ಮಾಡುವುದನ್ನು ಬಯಸುತ್ತಿಲ್ಲ ಎಂಬ ಭಾವನೆ ಬಂದಿತ್ತು. ಆ ಓವರ್ನಲ್ಲಿ ಆತ ನನಗೆ ಬಹುಶಃ, 10,11, 12 ಎಸೆತಗಳನ್ನು ಮಾಡಿದ್ದರು. ಆತ ನೋ ಬಾಲ್ನ ಮೇಲೆ ನೋ ಬಾಲ್ಗಳನ್ನು ಹಾಗೂ ಶಾರ್ಟ್ ಎಸೆತಗಳನ್ನು ಎಸೆಯುತ್ತಿದ್ದ. ವಿಕೆಟ್ನ ಮೇಲೆ ಎರಡು ಎಸೆತಗಳನ್ನು ಮಾತ್ರವೇ ಎಸೆದಿದ್ದ ಎನಿಸುತ್ತದೆ. ಆ ಎಸೆತಗಳನ್ನು ನಾನು ಎದುರಿಸಿದ್ದೆ. ಹೀಗಾಗಿ ನನಗೆ ನನ್ನ ವಿಕೆಟ್ ರಕ್ಷಣೆ ಮಾಡಿಕೊಳ್ಳುವುದೇ ಗುರಿಯಾಗಿತ್ತು. ಈ ಮೂಲಕ ಜೋ ರೂಟ್ಗೆ ನಾನು ಸ್ಟ್ರೈಕ್ ದೊರೆಯುವಂತೆ ಮಾಡಲು ಬಯಸಿದ್ದೆ" ಎಂದಿದ್ದಾರೆ ಜೇಮ್ಸ್ ಆಂಡರ್ಸನ್.

ಮತ್ತೊಂದು ಕದನಕ್ಕೆ ಸಿದ್ಧವಾಗಿದೆ ಎರಡೂ ತಂಡಗಳು
ಲಾರ್ಡ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಹಾಗೂ ಸೋಲಿಗೆ ಪ್ರತಿಕಾರವನ್ನು ತೀರಿಸಿಕೊಳ್ಳಲು ಕಾಯುತ್ತಿರುವ ಇಂಗ್ಲೆಂಡ್ ತಂಡಗಳು ಈಗ ಮೂರನೇ ಕದನಕ್ಕೆ ಸಜ್ಜಾಗುತ್ತಿದೆ. ಲೀಡ್ಸ್ ಅಂಗಳದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರದಿಂದ ಆರಂಭವಾಗಲಿದೆ. ಎರಡೂ ತಂಡಗಳ ಜಿದ್ದಾಜಿದ್ದಿನ ಹೋರಾಟ ಈಗ ಸರಣಿಯಲ್ಲಿನ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಟೀಮ್ ಇಂಡಿಯಾ ಲಾರ್ಡ್ಸ್ ಅಂಗಳದಲ್ಲಿ ಗೆಲುವು ಸಾಧಿಸಿದ್ದರೂ ತಂಡದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಯಿದೆ. ಅನುಭವಿ ಚೇತೇಶ್ವರ್ ಪೂಜಾರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ಯಾಪ್ ತೊಡುವ ಸಾಧ್ಯತೆಯಿದೆ. ಬೌಲಿಂಗ್ ವಿಭಾಗದಲ್ಲಿ ತಂಡದ ಸಂಯೋಜನೆ ಹೇಗಿರಬಹುದು ಎಂಬುದು ಕೂಡ ಕುತೂಹಲದ ಪ್ರಶ್ನೆಯಾಗಿದೆ.
ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ/ ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್

ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಬದಲಾವಣೆ
ಇನ್ನು ಇಂಗ್ಲೆಂಡ್ ತಂಡದಲ್ಲಿ ಕೆಲ ಪ್ರಮುಖ ಬದಲಾವಣೆಗಳು ನಡೆಯುವುದು ಖಚಿತ. ಇಂಗ್ಲೆಂಡ್ ತಂಡದಲ್ಲಿ ಸಿಬ್ಲಿ ಹಾಗೂ ಕ್ರಾವ್ಲೆ ಮೂರನೇ ಟೆಸ್ಟ್ನಿಂದ ಹೊರಬಿದ್ದಿರುವ ಕಾರಣದಿಂದಾಗಿ ಆರಂಭಿಕನಾಗಿ ರೋರಿ ಬರ್ನ್ಸ್ಗೆ ಹಸೀಬ್ ಹಮೀದ್ ಸಾಥ್ ನೀಡುವುದು ಬಹುತೇಕ ಸ್ಪಷ್ಟ. ಮತ್ತೊಂದೆಡೆ ಮೂರನೇ ಕ್ರಮಾಂಕಕ್ಕೂ ಒಲ್ಲೀ ಪೋಪ್ ಹಾಗೂ ಡೇವಿಡ್ ಮಲನ್ ಮಧ್ಯೆ ಯಾರಿಗೆ ಅವಕಾಶ ದೊರೆಯಬಹುದು ಎಂಬುದು ಕುತೂಹಲಕ್ಕೆ ಮೂಡಿಸಿದೆ. ಈ ಸ್ಥಾನಕ್ಕೆ ಈ ಇಬ್ಬರು ಆಟಗಾರರು ತೀವ್ರ ಪೈಪೋಟಿ ನಡೆಸಲಿದ್ದಾರೆ. ಉಳಿದಂತೆ ಲಾರ್ಡ್ಸ್ ಟೆಸ್ಟ್ನಲ್ಲಿ ಭುಜದ ಗಾಯಕ್ಕೆ ಒಳಗಾಗಿರುವ ಮಾರ್ಕ್ವುಡ್ ಮೂರನೇ ಟೆಸ್ಟ್ನಲ್ಲಿ ಕಣಕ್ಕಿಳಿಯುವುದಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಸಾಕಿಬ್ ಮಹಮೂದ್ಗೆ ಆಡಲು ಅವಕಾಶ ದೊರೆಯಬಹುದು. ಉಳಿದಂತೆ ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿದ ಆಟಗಾರರು ಹೆಡಿಂಗ್ಲೆಯಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ಸಂಭಾವ್ಯ ತಂಡ: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್/ ಒಲೀ ಪೋಪ್, ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್ಸ್ಟೊ, ಒಲ್ಲಿ ರಾಬಿನ್ಸನ್, ಒಲ್ಲಿ ರಾಬಿನ್ಸನ್, ಮೊಯೀನ್ ಅಲಿ, ಸ್ಯಾಮ್ ಕರನ್, ಸಾಕಿಬ್ ಮಹಮೂದ್ ಮತ್ತು ಜೇಮ್ಸ್


Click it and Unblock the Notifications
