ಐರ್ಲಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಯಿತು. ಹೀಗಾಗಿ ಟೀಮ್ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಕೊನೆಯ ಪಂದ್ಯ ಮಳೆಗೆ ಆಹುತಿಯಾದರೂ ಕಮ್ಬ್ಯಾಕ್ ಮಾಡಿದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಲ್ಲದೆ ನಾಯಕನಾಗಿಯೂ ಮಿಂಚಿದ ಜಸ್ಪ್ರೀತ್ ಬೂಮ್ರಾ ಹರ್ಷ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಇದು ಜಸ್ಪ್ರೀತ್ ಬೂಮ್ರಾ ಪಾಲಿಗೆ ಸಾಮಾನ್ಯ ಸರಣಿಯಾಗಿರಲಿಲ್ಲ. ಸುದೀರ್ಘ 10 ತಿಂಗಳುಗಳ ಕಾಲ ಕ್ರಿಕೆಟ್ನಿಂದ ದೂರವುಳಿದಿದ್ದ ಅವರು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡು ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. ಈ ಹಂತದಲ್ಲಿ ಏಷ್ಯಾಕಪ್ ಟೂರ್ನಿ ಹಾಗೂ ವಿಶ್ವಕಪ್ ಸಮೀಪದಲ್ಲಿದ್ದು ಬೂಮ್ರಾಗೆ ಫಾರ್ಮ್, ಫಿಟ್ನೆಸ್ ಸಾಬೀತುಪಡಿಸುವ ಸವಾಲು ಮುಂದಿತ್ತು. ಇದೀಗ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಬೂಮ್ರಾ ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಿ ಗಮನಸೆಳೆದಿದ್ದಾರೆ.

ಈ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಎರಡು ಪಂದ್ಯಗಳಲ್ಲಿ 8 ಓವರ್ಗಳ ಬೌಲಿಂಗ್ ಮಾಡಿದ್ದು 4 ವಿಕೆಟ್ಗಳನ್ನು ಸಂಪಾದಿಸಿದ್ದಾರೆ. ಅದು ಕೂಡ ಕೇವಲ 4ರ ಸರಾಸರಿಯಲ್ಲಿ ಎನ್ನುವುದು ಗಮನಾರ್ಹ. ಈ ಊಲಕ ತಾನು ದೊಡ್ಡ ಟೂರ್ನಿಗೆ ಸಂಪೂರ್ಣ ಸಜ್ಜು ಎನ್ನುವುದನ್ನು ಸಾರಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆ ಕೂಡ ಈಗ ಹೆಚ್ಚಾಗಿದೆ. ಇನ್ನು ನಾಯಕತ್ವವನ್ನು ಕೂಡ ಈ ಸರಣಿಯಲ್ಲಿ ಅದ್ಭುತವಾಗಿ ನಿಭಾಯಿಸಿ ಶಹ್ಬಾಶ್ ಎನಿಸಿಕೊಂಡಿದ್ದಾರೆ.
"ಯುವ ಆಟಗಾರರ ಪಡೆಯನ್ನು ಮುನ್ನಡೆಸುವುದು ನಿಜಕ್ಕೂ ಸಾಕಷ್ಟು ಆನಂದ ನೀಡುತ್ತದೆ. ಎಲ್ಲರೂ ಕೂಡ ಸಾಕಷ್ಟು ಹಸಿವಿನಿಂದ ಕೂಡಿದ್ದಾರೆ. ಆಟ ಇನ್ನು ಆರಂಭವಾಬೇಕಿದ್ದರೂ, ಹವಾಮಾನ ಪೂರಕವಾಗಿಲ್ಲದಿದ್ದರೂ ಎಲ್ಲರಿಗೂ ಆಡುವ ಕಾತುರವಿತ್ತು. ಅದು ಬಹಳ ಸಕಾರಾತ್ಕವಾದ ಅಂಶ" ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.
"ನಿಮಗೆ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಸಿಕ್ಕಾಗ, ಯಾವುದೇ ಆಟಗಾರನಾಗಿದ್ದರೂ ಅದನ್ನು ಮಾಡಲು ಇಷ್ಟಪಡುತ್ತಾನೆ. ನಾನು ಕೂಡ ಅದಕ್ಕೆ ಭಿನ್ನವಾಗಿರಲಿಲ್ಲ. ಇದೊಂದು ನನಗೆ ದೊರೆತ ಗೌರವ. ಅಲ್ಲದೆ ಸಾಕಷ್ಟು ಮಜವಾಗಿಯೂ ಇತ್ತು. ನೀವು ನಾಯಕನಾಗಿದ್ದಾಗ ಸಾಕಷ್ಟು ಜವಾಬ್ಧಾರಿ ನಿಮಗಿರುತ್ತದೆ. ಆಟಗಾರನಾಗಿ ನೀವು ಯಾವಾಗಲೂ ಜವಾಬ್ಧಾರಿ ವಹಿಸಿಕೊಳ್ಳಲು ಇಷ್ಟಪಡುತ್ತೀರಿ. ಯಾವುದೇ ಪರಿಸ್ಥಿತಿಯಲ್ಲಿಯೂ ಜವಾಬ್ಧಾರಿ ವಹಿಸಿಕೊಳ್ಳಲು ಬಯಸುತ್ತೀರಿ. ಈ ಸರಣಿ ನಡೆದ ರೀತಿಯ ಬಗ್ಗೆ ನಾನು ಬಹಳ ಸಂತಸಗೊಂಡಿದ್ದೇನೆ" ಎಂದಿದ್ದಾರೆ ಟೀಮ್ ಇಂಡಿಯಾದ ಹಂಗಾಮಿ ನಾಯಕ ಜಸ್ಪ್ರೀತ್ ಬೂಮ್ರಾ.
ಇನ್ನು ಜಸ್ಪ್ರೀತ್ ಬೂಮ್ರಾ ಏಷ್ಯಾ ಕಪ್ ಸರಣಿಯಲ್ಲಿ ಆಡುವ 17 ಆಟಗಾರರ ಪೈಕಿ ಒಬ್ಬರಾಗಿದ್ದು ಪ್ರಸಿದ್ಧ್ ಕೃಷ್ಣ ಕೂಡ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬೂಮ್ರಾ ವೇಗದ ಬೌಲಿಂಗ್ ವಿಭಾಗವನ್ನುವಮುನ್ನಡೆಸುವ ಜವಾಬ್ಧಾರಿ ವಹಿಸಿಕೊಂಡಿದ್ದು ಭಾರತದ ವೇಗದ ಬೌಲಿಂ್ಗ ವಿಭಾಗ ಸಾಕಷ್ಟು ಬಲಿಷ್ಠವಾಗಿ ಕಾಣಿಸುತ್ತಿದೆ. "ಎಲ್ಲವೂ ಅದ್ಭುತವಾಗಿದ್ದು ಇದಕ್ಕಿಂತ ಹೆಚ್ಚಿನದ್ದೇನೂ ಕೇಳಲು ಸಾಧ್ಯವಿಲ್ಲ" ಎಂದಿದ್ದಾರೆ ಬೂಮ್ರಾ.