ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಯುವ ತಂಡ ಕಣಕ್ಕೆ ಇಳಿಯಲಿದೆ. ದಶಕಗಳ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಶ್ವಿನ್ ಇಲ್ಲದ ತಂಡ ಮೈದಾನಕ್ಕೆ ಇಳಿಯಲಿದೆ. ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕತ್ವ ಸ್ಥಾನವನ್ನು ಶುಭಮನ್ ಗಿಲ್ ತುಂಬಿದ್ದಾರೆ. ಆದರೆ ಈ ಪಟ್ಟದ ಮೇಲೆ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಕಣ್ಣು ನೆಟ್ಟಿದ್ದರು. ಈಗ ಯಾರ್ಕರ್ ಸ್ಪೇಷಲಿಸ್ಟ್ ಈ ಬಗ್ಗೆ ಮೌನ ಮುರಿದಿದ್ದಾರೆ.
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತರಾದ ಮೇಲೆ, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಾನೇ ಮೊದಲ ಆಯ್ಕೆ ಎಂದು ತಿಳಿಸಿದ್ದರು. ಆದರೆ ಕೆಲಸದ ಹೊರೆಯಿಂದಾಗಿ ಈ ಪ್ರಸ್ಥಾಪವನ್ನು ತಿರಸ್ಕರಿಸಿದೆ ಎಂದು ಸ್ಕೈ ಸ್ಪೋರ್ಟ್ಸ್ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ರೋಹಿತ್ ಶರ್ಮಾ ನಾಯಕರಾಗಿದ್ದಾಗ ತಂಡದ ಉಪನಾಯಕನ ಜವಾಬ್ದಾರಿಯನ್ನು ಜಸ್ಪ್ರಿತ್ ಬುಮ್ರಾ ಹೊತ್ತುಕೊಂಡಿದ್ದರು. ಹೀಗಾಗಿ ಇವರೇ ತಂಡದ ಮುಂದಿನ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿತ್ತು. ಆದರೆ ಬಾರ್ಡರ್ ಗವಾಸ್ಕರ್ ಸರಣಿಯ ಐದನೇ ಪಂದ್ಯದಲ್ಲಿ ವೇಗಿ ಬುಮ್ರಾ ಅವರಲ್ಲಿ ಕಾಣಿಸಿಕೊಂಡ ಬೆನ್ನು ನೋವು ಎಲ್ಲ ಆಸೆಗಳಿಗೆ ಪೆಟ್ಟು ನೀಡಿದೆ.

ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ, ದಿನೇಶ್ ಕಾರ್ತಿಕ್ ಅವರೊಂದಿಗಿನ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ರೋಹಿತ್, ವಿರಾಟ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ನಾನು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರ ಜೊತೆ ಮಾತನಾಡಿದ್ದೇ. ನಾನು ನನ್ನ ವೈದ್ಯರ ಜೊತೆ ಈ ಬಗ್ಗೆ ಚರ್ಚೆಯನ್ನು ನಡೆಸಿದ ಬಳಿಕವೇ ಮಹತ್ವದ ತೀರ್ಮಾನಕ್ಕೆ ಬರಬೇಕಾಯಿತು. ಇಂಗ್ಲೆಂಡ್ ಪ್ರವಾಸದಲ್ಲಿ ಐದೂ ಟೆಸ್ಟ್ ಪಂದ್ಯಗಳನ್ನು ನನಗೆ ಆಡಲು ಆಗುವುದಿಲ್ಲ ಎಂಬುದು ಧೃಡ ಪಟ್ಟಬಳಿಕವೇ, ನಾನು ಬಿಸಿಸಿಐಗೆ ಕರೆ ಮಾಡಿ ತಿಳಿಸಿದೆ. ನಾನು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲ ಪಂದ್ಯಗಳನ್ನೂ ಸಹ ಆಡಲು ಆಗದು. ಹೀಗಾಗಿ ನಾಯಕತ್ವ ವಹಿಸಿಕೊಳ್ಳಲು ನಾನು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.
ತಂಡಕ್ಕೆ ಇಬ್ಬರು ನಾಯಕರು ಇರಬೇಕು ಎಂದು ನಾನು ಬಯಸುವುದಿಲ್ಲ. ಬಿಸಿಸಿಐ ಆ ಸ್ಥಾನಕ್ಕಾಗಿ ನನ್ನನ್ನು ಪರಿಶೀಲಿಸಿತು. ಆದರೆ ಐದೂ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾನು ಕೇವಲ ಮೂರು ಪಂದ್ಯ ಆಡುವುದಾಗಿ ತಿಳಿಸಿದ್ದೆ. ಅಷ್ಟೇ ಅಲ್ಲದೆ ಎರಡು ಪಂದ್ಯಕ್ಕೆ ಬೇರೆ ನಾಯಕ, ಮೂರು ಪಂದ್ಯಕ್ಕೆ ಬೇರೆ ನಾಯಕ. ಇದು ತಂಡಕ್ಕೆ ಸರಿಯಲ್ಲ. ನಾನು ಯಾವಾಗಲು ತಂಡವನ್ನು ಮೊದಲು ಇಡಲು ಬಯಸುವೆ. ನಾಯಕನಾಗಿ ಮಾತ್ರ ಅಲ್ಲದೆ ಆಟಗಾರನಾಗಿ ತಂಡದಲ್ಲಿ ಇರುವುದು ಮುಖ್ಯ. ಮೂರು ಸ್ವರೂಪಗಳನ್ನು ನಿಯಮಿತವಾಗಿ ಆಡಲು ದೇಹ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.

"ನಾನು ಇನ್ನು ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಿದೆ. ನನ್ನ ಭವಿಷ್ಯದ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ನಾನು ತಂಡದ ಪರ ಇನ್ನು ಹೆಚ್ಚು ವರ್ಷಗಳ ಕಾಲ ಕ್ರಿಕೆಟ್ ಆಡಬೇಕು ಎಂದು ಮನದಲ್ಲಿಟ್ಟುಕೊಂಡು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ನನಗೆ ನಾಯಕತ್ವಕ್ಕಿಂತ ಕ್ರಿಕೆಟ್ ಹೆಚ್ಚು ಇಷ್ಟ. ಆದ್ದರಿಂದ ನಾನು ಕ್ರಿಕೆಟಿಗನಾಗಿ ಮತ್ತು ಭಾರತೀಯ ತಂಡಕ್ಕೆ ಆಟಗಾರನಾಗಿ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ ಎಂದು ವೇಗಿ ಬುಮ್ರಾ ತಿಳಿಸಿದ್ದಾರೆ.