
ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಮಹತ್ವರ ಬದಲಾವಣೆಗಳನ್ನು ಕಾಣಬಹುದು. ಪ್ರಮುಖ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಕೆಲವು ಯುವ ಆಟಗಾರರಿಗೆ ಆಯ್ಕೆಗಾರರು ಅವಕಾಶ ಮಾಡಿಕೊಟ್ಟಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಸಾಧಾರಣ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ತಂಡದಲ್ಲಿ ಕೆಲವೊಂದು ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗಿದೆ. ಐಪಿಎಲ್ ಸೇರಿದಂತೆ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಉದಯೋನ್ಮುಖ ಆಟಗಾರರಿಗೆ ಈ ಬಾರಿ ಅವಕಾಶ ನೀಡಲಾಗಿದೆ. ದ್ವಿಪಕ್ಷೀಯ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಎಲ್ಲಾ ಅವಕಾಶಗಳನ್ನು ಹೊಂದಿರುವ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ.
ಆದಾಗ್ಯೂ, ಕೆಲವು ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ರು ಸಹ ಅವಕಾಶಗಳನ್ನು ಪಡೆದಿಲ್ಲ. ಅರ್ಷ್ದೀಪ್ ಸಿಂಗ್, ರವಿ ಬಿಷ್ನೋಯ್, ಚೇತನ್ ಸಕಾರಿಯಾ, ದೇವದತ್ ಪಡಿಕ್ಕಲ್, ಶೆಲ್ಡನ್ ಜಾಕ್ಸನಂತಹ ಭವಿಷ್ಯದ ತಾರೆಗಳು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಬಹುದು ಎಂದು ನಿರೀಕ್ಷೆಯನ್ನಿಟ್ಟುಕೊಂಡಿದ್ದರು. ಆದರೆ ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿ ಇವರನ್ನ ಕಡೆಗಣಿಸಿದಂತಿದೆ.
ಇನ್ನು ಬಿಸಿಸಿಐ ಕುರಿತು ಮುನಿಸಿಕೊಂಡವರಲ್ಲಿ ಗುಜರಾತ್ ಆಲ್ರೌಂಡರ್ ಜಯದೇವ್ ಉನಾದ್ಕಟ್ ಕೂಡ ಒಬ್ಬರು. ಉನಾದ್ಕಟ್ ಇತ್ತೀಚೆಗೆ ಸೊಗಸಾದ ರೀತಿಯಲ್ಲಿ ಬ್ಯಾಟಿಂಗ್ ಮಾಡುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ವೀಡಿಯೋದಲ್ಲಿ ಅವರು ಕೆಲವು ಅತ್ಯುತ್ತಮ ಶಾಟ್ಗಳನ್ನು ಪ್ರದರ್ಶಿಸಿದ್ದಾರೆ.
ಈ ವೀಡಿಯೋವನ್ನ ಹರಿಬಿಟ್ಟಿದ್ದರೆ ಇಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಆದರೆ ವೀಡಿಯೋ ಜೊತೆಗೆ ನೀಡಿರುವ ಶೀರ್ಷಿಕೆಯು ಬಿಸಿಸಿಐ ನಿರ್ಧಾರವನ್ನು ಕೆಣಕಿದಂತಿದೆ. ಇವರ ಶೀರ್ಷಿಕೆಯು ಉದ್ದೇಶ ಪೂರ್ವಕವಾಗಿ ನೀಡಿದಂತಿದೆ.
ಬಿಸಿಸಿಐ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಿದ ನಂತರ ಕಾಣಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಅವರ ಬೆನ್ನಿನ ಶಸ್ತ್ರಚಿಕಿತ್ಸೆಯ ನಂತರ ಅವರು ಬೌಲಿಂಗ್ ಮಾಡುವ ಸಾಮರ್ಥ್ಯ ತಗ್ಗಿದೆ. ಹೀಗಾಗಿ ಟೀಂ ಇಂಡಿಯಾ ವೇಗದ ಬೌಲಿಂಗ್ ಆಲ್ರೌಂಡರ್ ಹುಡುಕಾಟದಲ್ಲಿದೆ. ಹೀಗಾಗಿ ಕಳೆದ ಐಪಿಎಲ್ ಸೀಸನ್ನಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್ಗೆ ತಂಡದಲ್ಲಿ ಸ್ಥಾನ ಒದಗಿಸಲಾಗಿದೆ. ಇದರಿಂದಾಗಿ ಮನನೊಂದಂತೆ ಕಂಡಿರುವ ಉನಾದ್ಕಟ್, ''ಬ್ಯಾಟಿಂಗ್ ಮಾಡುವ ಇನ್ನೊಬ್ಬ ವೇಗದ ಬೌಲರ್'' ಎಂದು ಬಿಸಿಸಿಐಗೆ ಟಾಂಗ್ ನೀಡಿದ್ದಾರೆ.
ಉನಾದ್ಕಟ್ ಶೀರ್ಷಿಕೆಯಲ್ಲಿ ಬಿಸಿಸಿಐ ಅನ್ನು ಟ್ಯಾಗ್ ಮಾಡದೇ ಇದ್ದರೂ ಸಹ , ಈ ಮಾತು ಪರೋಕ್ಷವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ತಿಳಿಸಿದಂತಿದೆ.
ಉನಾದ್ಕತ್ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸೌರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ಅಲ್ಲಿ ಅವರು ಸುಲ್ತಾನ್ಪುರದಲ್ಲಿ ಹೈದರಾಬಾದ್ ವಿರುದ್ಧ ಅದ್ಭುತ ಅರ್ಧಶತಕದೊಂದಿಗೆ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ತೋರಿಸಿದರು. ಈ ಬಾರಿ ಅವರ ನಾಯಕತ್ವದಲ್ಲಿ, ಸೌರಾಷ್ಟ್ರ ತನ್ನ ಐದು ಪಂದ್ಯಗಳಲ್ಲಿ ನಾಲ್ಕು ವಿಜಯಗಳನ್ನು ಗಳಿಸುವ ಮೂಲಕ ಎಲೈಟ್ ಗುಂಪಿನ E ನಲ್ಲಿ ಎರಡನೇ ಸ್ಥಾನ ಗಳಿಸಿತು.
ನವೆಂಬರ್ 16 ರಂದು ದೆಹಲಿಯಲ್ಲಿ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಉನಾದ್ಕಟ್ ತಂಡವು ಕರ್ನಾಟಕವನ್ನು ಎದುರಿಸಲು ಸಜ್ಜಾಗಿದೆ. ಏತನ್ಮಧ್ಯೆ, ಉನಾದ್ಕತ್ ಮತ್ತೊಮ್ಮೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಕೊಡುಗೆ ನೀಡುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ.
ಈ ವರ್ಷದ ಆರಂಭದಲ್ಲಿ ಉನಾದ್ಕತ್ ಅವರು ಶ್ರೀಲಂಕಾ ಪ್ರವಾಸದಿಂದ ಮಿಸ್ ಆದಾಗ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ರು. ಆ ಪ್ರವಾಸದಲ್ಲಿ ಭಾರತದ ಎರಡನೇ ತಂಡವು ಶಿಖರ್ ಧವನ್ ಮುಂದಾಳತ್ವದಲ್ಲಿ ಮುನ್ನಡೆಯಿತು. ಆ ಸಂದರ್ಭದಲ್ಲಿ ಟೀಂ ಇಂಡಿಯಾದ ಮೊದಲ ತಂಡವು ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತು.