ಮೈಸೂರು, ನ.11: ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಎ ಗುಂಪಿನ ರಣಜಿ ಪಂದ್ಯದಲ್ಲಿ ಒಡಿಶಾ ವಿರುದ್ಧ ಕರ್ನಾಟಕ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಆಸೆ ಜೀವಂತ ಇರಿಸಿಕೊಂಡಿದೆ. ಈ ಗೆಲುವಿನೊಂದಿಗೆ 7 ಅಂಕ ಗಳಿಸಿ ಒಟ್ಟಾರೆ 21 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ವಿನಯ್ ಪಡೆ ಎರಡನೇ ಸ್ಥಾನಕ್ಕೇರಿದೆ.
ಹಾಲಿ ಚಾಂಪಿಯನ್ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 6ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಒಡಿಶಾ ತಂಡವನ್ನು 232ರನ್ನಿಗೆ ಕಟ್ಟಿ ಹಾಕಿದೆ. ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 400/9 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. ಒಡಿಶಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 104 ಸ್ಕೋರಿಗೆ ಆಲೌಟ್ ಆಗಿ ಇನ್ನಿಂಗ್ಸ್ ಹಾಗೂ 64ರನ್ ಗಳಿಂದ ಸೋಲು ಕಂಡಿತು. [ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ]

ಕೊನೆ ದಿನದಲ್ಲಿ ಕರ್ನಾಟಕಕ್ಕೆ ಗೆಲ್ಲಲು 9 ವಿಕೆಟ್ ಗಳ ಅಗತ್ಯವಿತ್ತು. ಸ್ಟುವರ್ಟ್ ಬಿನ್ನಿ ಮಾರಕ ಬೌಲಿಂಗ್ ದಾಳಿ ನಡೆಸಿ 11 ಓವರ್ ಗಳಲ್ಲಿ 4/34 ವಿಕೆಟ್ ಪಡೆದು 36.1 ಓವರ್ ಗಳಲ್ಲೇ ಒಡಿಶಾ 104ಸ್ಕೋರಿಗೆ ಆಲೌಟ್ ಆಗುವಂತೆ ಮಾಡಿದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 400/9 ಡಿಕ್ಲೇರ್ (ರಾಬಿನ್ ಉತ್ತಪ್ಪ 148, ಮಾಯಾಂಕ್ ಅಗರವಾಲ್ 78, ಕರುಣ್ ನಾಯರ್ 73, ಬಸಂತ್ ಮೊಹಾಂತಿ 2/58)
ಒಡಿಶಾ 232 (ಪೊದ್ದಾರ್ 153, ಶ್ರೇಯಸ್ ಗೋಪಾಲ್ 4/75) ಹಾಗೂ 104 (ಸ್ಟುವರ್ಟ್ ಬಿನ್ನಿ 3/34)
ಫಲಿತಾಂಶ ಕರ್ನಾಟಕಕ್ಕೆ ಇನ್ನಿಂಗ್ಸ್ ಹಾಗೂ 64ರನ್ ಗಳಿಂದ ಜಯ. (ಒನ್ ಇಂಡಿಯಾ ಸುದ್ದಿ)