
ವೆಸ್ಟ್ ಇಂಡೀಸ್ನ ಸ್ಟಾರ್ ಆಲ್ರೌಂಡರ್ ಕೆಕೆಆರ್ ತಂಡದ ಪ್ರಮುಖ ಆಟಗಾರ ಆ್ಯಂಡ್ರೆ ರಸೆಲ್ ಜೊತೆಗೆ ಖುದ್ದಾಗಿ ಮಾತನಾಡಿದ್ದು ಎಲ್ಲಾ ಭಿನ್ನಾಭಿಪ್ರಾಯಗಳೂ ಬಗೆಹರಿದಿದೆ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ವರ್ಷದ ಕೆಕೆಆರ್ ಪ್ರದರ್ಶನವನ್ನು ಉಲ್ಲೇಖಿಸಿ ರಸೆಲ್ ಇತ್ತೀಚೆಗೆ ಅಸಮಾಧಾನದ ಮಾತುಗಳನ್ನಾಡಿದ್ದರು.
ರಸೆಲ್ 2019ರ ಐಪಿಎಲ್ ಅಭಿಯಾನದಲ್ಲಿ ತಂಡದ "ಕೆಟ್ಟ ನಿರ್ಧಾರಗಳ" ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಂಡದಲ್ಲಿನ ಅರೋಗ್ಯಕರವಲ್ಲದ ವಾತಾವರಣವೇ ಈ ಫಲಿತಾಂಶಕ್ಕೆ ಕಾರಣ ಎಂದು ಅವರು ಇತ್ತೀಚೆಗೆ ಬಹಿರಣಗವಾಗಿ ದೂಷಿಸಿದ್ದರು. ಈ ವಿಚಾರವಾಗಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ.
ಆ್ಯಂಡ್ರೆ ರಸೆಲ್ ಅವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲಾಗಿದೆ ಮತ್ತು ಇಬ್ಬರ ಮಧ್ಯೆ ಯಾವುದೇ ಕೆಟ್ಟ ಅಭಿಪ್ರಾಯಗಳು ಇಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಟೂರ್ನಿಯಲ್ಲಿ ಕೆಕೆಆರ್ ತಂಡ ಪ್ಲೇಆಫ್ ಹಂತಕ್ಕೂ ಅರ್ಹತೆಗಳಿಸುವಲ್ಲಿ ವಿಫಲವಾಗಿ ಐದನೇ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿತ್ತು.
ಅವರಿಗೆ ನನ್ನೊಂದಿಗೆ ಅಸಮಾಧಾನವಿರಲಿಲ್ಲ, ತಂಡದ ಪ್ರದರ್ಶನ ಕಳಪೆಯಾಗಿದ್ದರಿಂದ ಅವರು ನೊಂದಿದ್ದರು. ಅವರ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಎಂದು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಆರ್ಕೆ ಯುಟ್ಯೂಬ್ ಚಾನೆಲ್ ಜೊತೆಗಿನ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದು ಅದನ್ನು ಪರಿಹರಿಸಿಕೊಳ್ಳುವುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಮುಂದೆ ಬಂದು ಆ ವಿಚಾರವಾಗಿ ಮಾತುಕತೆಯನ್ನು ನಡೆಸಬೇಕಾಗುತ್ತದೆ. ಕೆಲವು ಸಲ ಈ ಮಾತುಕತೆ ಕಠಿಣವಾಗಿರುತ್ತದೆ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.