
ಬೆಂಗಳೂರು, ಸೆಪ್ಟೆಂಬರ್ 21: ಗುಜರಾತ್ ನ ವಡೋದರದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯಕ್ಕೆ ಕರುಣ್ ನಾಯರ್ ಅವರು ನಾಯಕತ್ವವನ್ನು ವಹಿಸಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಆಡುವ ಬೋರ್ಡ್ ಪ್ರೆಸಿಡೆಂಟ್ಸ್ XI ಆಟಗಾರರಲ್ಲಿ ಮಯಾಂಕ್ ಅಗರ್ವಾಲ್ ಕೂಡ ಸೇರಿಕೊಂಡಿದ್ದಾರೆ. ಅಭ್ಯಾಸ ಪಂದ್ಯ ಸೆಪ್ಟೆಂಬರ್ 29, 30ರಂದು ನಡೆಯಲಿದೆ.
ಇತ್ತೀಚೆಗೆ ಮುಗಿದ ಭಾರತ-ಇಂಗ್ಲೆಂಡ್ ಟೆಸ್ಟ್ ವೇಳೆ ಕರುಣ್ ನಾಯರ್ ಕೂಡ ತಂಡದಲ್ಲಿದ್ದರು. ಆದರೆ ಕರ್ನಾಟಕ ತಂಡದ ಈ ಮಧ್ಯಮ ಕ್ರಮಾಂಕದ ಆಟಗಾರನಿಗೆ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲೂ ಆಡುವ 11 ಆಟಗಾರರಲ್ಲಿ ಸ್ಥಾನ ದೊರೆತಿರಲಿಲ್ಲ.
ಇಂಗ್ಲೆಂಡ್ ನ ಓವಲ್ ಸ್ಟೇಡಿಯಂನಲ್ಲಿ ನಡೆದಿದ್ದ ಕೊನೆಯ ಮತ್ತು ಔಪಚಾರಿಕ ಟೆಸ್ಟ್ ನಲ್ಲಿ ಭಾರತ ತಂಡದಲ್ಲಿ ನಾಯರ್ ಬದಲು ಗದೆ ಹನುಮ ವಿಹಾರಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ತಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದು ಚರ್ಚೆಗೀಡಾಗಿದ್ದೂ ನಡೆದಿತ್ತು.
ಮತ್ತೊಬ್ಬ ಕರ್ನಾಟದಕ ಆಟಗಾರ ಮಯಾಂಕ್ ಅಗರ್ವಾಲ್ ಗೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಲಭಿಸಿರದ ಬಗ್ಗೆಯೂ ಕ್ರೀಡಾ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಮಯಾಂಕ್ ಉತ್ತಮ ಸಾಧನೆ ಹೊಂದಿದ್ದರೂ ಅವರನ್ನು ಕಡೆಗಣಿಸಲಾಗಿದೆ ಎಂದು ಅನೇಕ ಮಂದಿ ಬೇಸರ ವ್ಯಕ್ತಪಡಿಸಿದ್ದರು. ಈ ಬಾರಿ ಇಬ್ಬರಿಗೂ ಅವಕಾಶ ನೀಡಲಾಗಿದೆ.
ಬೋರ್ಡ್ ಪ್ರೆಸಿಡೆಂಟ್ಸ್ XI ತಂಡ : ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಹನುಮ ವಿಹಾರಿ, ಕರುಣ್ ನಾಯರ್ (ನಾಯಕ), ಶ್ರೀಯಸ್ ಐಯ್ಯರ್, ಅಂಕಿತ್ ಬಾವ್ನೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಲಜ್ ಸಕ್ಸೇನಾ, ಸೌರಭ್ ಕುಮಾರ್, ಬಸಿಲ್ ಥಂಪಿ, ಆವೇಶ್ ಖಾನ್, ಕೆ ವಿಘ್ನೇಶ್, ಇಶಾನ್ ಪೋರೆಲ್.