
ಬೆಂಗಳೂರು, ನವೆಂಬರ್ 18: 41 ರಣಜಿ ಚಾಂಪಿಯನ್ ಆಗಿರುವ ಮುಂಬೈ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಕರುಣ್ ನಾಯರ್, ಅರ್ ಸಮರ್ಥ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ನವೆಂಬರ್ 20ರಿಂದ 23ರವರೆಗೆ ಬೆಳಗಾವಿಯ ಆಟೋ ನಗರದ ಕೆಎಸ್ಸಿಎ ಮೈದಾನದಲ್ಲಿ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ.
ಕರುಣ್ ನಾಯರ್ ಮತ್ತು ಆರ್. ಸಮರ್ಥ್ ಬದಲಿಗೆ ಮಿರ್ ಕೌನೇನ್ ಅಬ್ಬಾಸ್ ಮತ್ತು ಲಿಯಾನ್ ಖಾನ್ ಅವರನ್ನು ರಾಜ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಹಾಲಿ ಚಾಂಪಿಯನ್ ವಿದರ್ಭ ವಿರುದ್ಧದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಗಳಿಸಿ ಶುಭಾರಂಭ ಮಾಡಿರುವ ವಿನಯ್ ಕುಮಾರ್ ತಂಡದಲ್ಲಿ ಸ್ಟಾರ್ ಆಟಗಾರರು ಆಡುತ್ತಿಲ್ಲ. ಕೆಎಲ್ ರಾಹುಲ್, ಮನೀಶ್ ಪಾಂಡೆ, ಕೆ ಗೌತಮ್ ಹಾಗೂ ಮಾಯಾಂಕ್ ಅಗರವಾಲ್ ಅವರು ಭಾರತ ಹಾಗೂ ಭಾರತ 'ಎ' ಪರ ಆಡಲು ಆಯ್ಕೆಯಾಗಿದ್ದಾರೆ.
ಕರ್ನಾಟಕ ತಂಡ: ವಿನಯ್ ಕುಮಾರ್ (ನಾಯಕ), ಡಿ. ನಿಶ್ಚಲ್, ಪವನ್ ದೇಶಪಾಂಡೆ, ಸಿದ್ಧಾರ್ಥ್ ಕೆವಿ, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಮಿಥುನ್, ಪ್ರಸಿದ್ಧ ಕೃಷ್ಣ, ಜೆ. ಸುಚಿತ್, ರೋನಿತ್ ಮೋರೆ, ಶಿಶಿರ್ ಭವಾನಿ, ಬಿಆರ್ ಶರತ್, ಶರತ್ ಶ್ರೀನಿವಾಸ್, ಮಿರ್ ಕೌನೇನ್ ಅಬ್ಬಾಸ್, ಲಿಯಾನ್ ಖಾನ್.
ಇದೇ ಮೊದಲ ಬಾರಿ ಬೆಳಗಾವಿ ಮೈದಾನದಲ್ಲಿ ರಣಜಿ ಪಂದ್ಯದಲ್ಲಿ ಡಿಜಿಟಲ್ ಸ್ಕೋರ್ ಬೋರ್ಡ್ ಬಳಕೆ ಮಾಡಲಾಗುತ್ತಿದೆ. ಡಿಸೆಂಬರ್ನಲ್ಲಿ 19 ವಯೋಮಿತಿಯ ಕರ್ನಾಟಕ-ಪಶ್ಚಿಮ ಬಂಗಾಳ ತಂಡಗಳ ನಡುವಿನ ಪಂದ್ಯವೂ ಇಲ್ಲಿ ನಡೆಯಲಿದೆ ಎಂದು ಅವಿನಾಶ ಪೋತದಾರ್ ಹೇಳಿದರು.