
ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಶ್ರೀಘ್ರದಲ್ಲೇ ಲಂಕಾ ತಂಡ ಪ್ರಕಟ
ಕೊಲಂಬೊ, ಏಪ್ರಿಲ್ 18: ಎಡಗೈ ಆರಂಭಿಕ ಬ್ಯಾಟ್ಸ್ಮನ್ ದಿಮುತ್ ಕರುಣಾರತ್ನೆ ಅವರನ್ನು ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕನಾಗಿ ಲಂಕಾ ಕ್ರಿಕೆಟ್ ಮಂಡಳಿ ಬುಧವಾರ ನೇಮಕ ಮಾಡಿದೆ. ಇದರೊಂದಿಗೆ ಮುಂಬರುವ ವಿಶ್ವಕಪ್ನಲ್ಲಿ ದ್ವೀಪ ರಾಷ್ಟ್ರವನ್ನು ಕರುಣಾರತ್ನೆ ಮುನ್ನಡೆಸುವುದು ಖಾತ್ರಿಯಾಗಿದೆ.
ಕಳೆದ ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದ ಕರುಣಾರತ್ನೆ ಈವರೆಗೆ ಆಡಿರುವುದು ಕೇವಲ 17 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಮಾತ್ರ. ಆದರೆ, ಲಿಸ್ಟ್ "ಎ' ಹಂತದಲ್ಲಿ 120 ಪಂದ್ಯಗಳನ್ನು ಆಡಿರುವ ಅವರು 6 ಶತಕಗಳೊಂದಿಗೆ 34.34ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಶ್ರೀಲಂಕಾ ವಿಶ್ವಕಪ್ಗೆ ತನ್ನ ಪ್ರಾಥಮಿಕ ತಂಡವನ್ನು ಇನ್ನು ಪ್ರಕಟಿಸಿಲ್ಲ. ಇದೀಗ ನೂತನ ನಾಯಕನ ನೇಮಕವಾಗಿದ್ದು, ವಿಶ್ವಕಪ್ನಲ್ಲಿ ಆಡುವ ಅಂತಿಮ 15 ಆಟಗಾರರ ಪಟ್ಟಿಯನ್ನು ಲಂಕಾ ಕ್ರಿಕೆಟ್ ಮಂಡಳಿ ಶೀಘ್ರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಗಮನಾರ್ಹ ಸಾಧನೆ ಮಾಡಿರುವ 30 ವರ್ಷದ ಅನುಭವಿ ಆಟಗಾರ ದಿಮುತ್, ಕಳೆದ ಬಾರಿ ಐಸಿಸಿ ವಾರ್ಷಿಕ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಿ ಐತಿಹಾಸಿಕ ಟೆಸ್ಟ್ ಸರಣಿ ವೈಟ್ವಾಷ್ ಗೆಲುವು ದಾಖಲಿಸಿದ್ದರು.
ಅಂದಹಾಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಶ್ರೀಲಂಕಾ ತಂಡ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದು, ಆಗಿಂದ್ದಾಗೆ ನಾಯಕನ ಬದಲಾವಣೆಯೂ ಹೆಚ್ಚಾಗಿದೆ. ಕಳೆದ ನಾಲ್ಕು ಸರಣಿಗಳಲ್ಲಿ 3 ವಿಭಿನ್ನ ನಾಯಕರನ್ನು ಶ್ರೀಲಂಕಾ ತಂಡ ಕಂಡಿದೆ. ಏಂಜಲೊ ಮ್ಯಾಥ್ಯೂಸ್, ದಿನೇಶ್ ಚಾಂದಿಮಾಲ್ ಮತ್ತು ಲಸಿತ್ ಮಾಲಿಂಗ ಇತ್ತೀಚೆಗೆ ಶ್ರೀಲಂಕಾ ತಂಡವನ್ನು ಮುನ್ನಡೆಸಿದ್ದರು.
ಕುಡಿದು ವಾಹನ ಚಲಾಯಿಸಿದ್ದ ಕರುಣಾರತ್ನೆ
ಶ್ರೀಲಂಕಾ ಒಡಿಐ ಕ್ರಿಕೆಟ್ ತಂಡದ ನೂತನ ನಾಯಕ ದಿಮುತ್ ಕರುಣಾರತ್ನೆ ಇತ್ತೀಚೆಗೆ ತಮ್ಮ ಡ್ರೈವಿಂಗ್ ಲೈಸನ್ಸ್ ಕಳೆದುಕೊಂಡಿದ್ದರು. ಕುಡಿದು ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಅವರ ಚಾಲನಾ ಪರವಾನಗಿಯನ್ನು ಅಮಾನತು ಗೊಳಿಸಲಾಗಿತ್ತು.