
ತಂಡಕ್ಕೆ ಆಸರೆಯಾದ ಕೆಎಲ್ ರಾಹುಲ್
ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಅಗ್ರ ಬ್ಯಾಟರ್ ಗಳು ಕೈಕೊಟ್ಟರು. ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮತ್ತೆ ರನ್ ಗಳಿಸುವಲ್ಲಿ ವಿಫಲರಾದರು, ವಿರಾಟ್ ಕೊಹ್ಲಿ ಕೂಡ ಬೇಗನೆ ಪೆವಿಲಿಯನ್ ಸೇರಿಕೊಂಡರು. ನಾಯಕ ರೋಹಿತ್ ಶರ್ಮಾ ಕೂಡ ಹೆಚ್ಚಿನ ರನ್ ಗಳಿಸಲಿಲ್ಲ. ನಂತರ ಬಂದ ಶ್ರೇಯಸ್ ಅಯ್ಯರ್ ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಕೆಎಲ್ ರಾಹುಲ್ ಭಾರತದ ಪರವಾಗಿ ಅಮೂಲ್ಯ ರನ್ ಗಳಿಸಿದರು.
70 ಎಸೆತಗಳಲ್ಲಿ 73 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಕೆಎಲ್ ರಾಹುಲ್ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 186 ರನ್ ಗಳಿಗೆ ಆಲ್ಔಟ್ ಆಯಿತು.

ಕ್ಯಾಚ್ ಕೈ ಬಿಟ್ಟು ಟೀಕೆಗೆ ಗುರಿಯಾದ ಕೆಎಲ್ ರಾಹುಲ್
ಈ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ ಆರಂಭದಲ್ಲಿ ಆಘಾತ ಅನುಭವಿಸಿತು. ನಜ್ಮುಲ್ ಹೊಸೈನ್ ಶಾಂಟೊ ಶೂನ್ಯಕ್ಕೆ ಔಟ್ ಆದರು. ಲಿಟ್ಟನ್ ದಾಸ್ ಮತ್ತು ಶಕೀಬ್ ಅಲ್ ಹಸನ್ ಉತ್ತಮ ಜೊತೆಯಾಟದ ಮೂಲಕ ಬಾಂಗ್ಲಾದೇಶಕ್ಕೆ ಸುಲಭ ಗೆಲುವಿನ ಭರವಸೆ ಮೂಡಿಸಿದರು.
4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದ್ದ ಬಾಂಗ್ಲಾದೇಶ ಸುಲಭವಾಗಿ ಜಯ ಸಾಧಿಸುವ ಉತ್ಸಾಹದಲ್ಲಿತ್ತು. ಆದರೆ ನಂತರ 136 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಮೆಹಿದಿ ಹಸನ್ ಮತ್ತು ಮುಸ್ತಾಫಿಜುರ್ ರೆಹಮಾನ್ ಎಚ್ಚರಿಕೆಯ ಆಟವಾಡಲು ಆರಂಭಿಸಿದರು. ಬಾಂಗ್ಲಾದೇಶ 150 ರನ್ ಗಳಿಸಿದ್ದಾಗ ಮೆಹಿದಿ ಹಸನ್ ನೀಡಿದ ಕ್ಯಾಚ್ ಅನ್ನು ಕೆಎಲ್ ರಾಹುಲ್ ಕೈಬಿಟ್ಟರು. ಈ ಕ್ಯಾಚ್ ಹಿಡಿದಿದ್ದರೆ ಭಾರತ ಸುಲಭವಾಗಿ ಪಂದ್ಯವನ್ನು ಗೆದ್ದುಕೊಳ್ಳಬಹುದಿತ್ತು. ಕ್ಯಾಚ್ ಕೈ ಬಿಟ್ಟ ಕಾರಣಕ್ಕೆ ಕೆಎಲ್ ರಾಹುಲ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ದಾಖಲೆಯ ಜೊತೆಯಾಟ ಆಡಿದ ಮುಸ್ತಾಫಿಜುರ್ - ಮೆಹಿದಿ
ಕೊನೆಯ ವಿಕೆಟ್ಗೆ ಬಾಂಗ್ಲಾದೇಶಕ್ಕೆ ಗೆಲುವಿಗಾಗಿ 52 ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಭಾರತ ಗೆಲುವು ಸಾಧಿಸುತ್ತದೆ ಎನ್ನುವ ವಿಶ್ವಾಸದಲ್ಲಿತ್ತು. ಆದರೆ, ಮುಸ್ತಾಫಿಜುರ್ ಮತ್ತು ಮೆಹಿದಿ ಹಸನ್ ಎಚ್ಚರಿಕೆಯಿಂದ ಆಟವಾಡಿದರು.
ಮೆಹಿದಿ ಹಸನ್ 39 ಎಸೆತಗಳಲ್ಲಿ 38 ರನ್ ಗಳಿಸಿದರು. ಮುಸ್ತಾಫಿಜುರ್ ರೆಹಮಾನ್ ವಿಕೆಟ್ ಉಳಿಸಿಕೊಂಡು ಎಚ್ಚರಿಕೆಯಿಂದ 10 ಗಳಿಸಿದರು.10ನೇ ವಿಕೆಟ್ಗೆ ದಾಖಲೆಯ 52 ರನ್ಗಳ ಜೊತೆಯಾಟ ಆಡುವ ಮೂಲಕ ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟರು.


Click it and Unblock the Notifications
