ಭಾನುವಾರ, ಸೆಪ್ಟೆಂಬರ್ 10ರಂದು 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ, ಆಟವನ್ನು ಸ್ಥಗಿತಗೊಳಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಉಳಿದ ಆಟ ಮುಂದುವರೆಯಲಿದೆ.
ಭಾನುವಾರ ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್ಗಳಲ್ಲಿ 2 ವಿಕೆಟ್ಗೆ 147 ರನ್ ಗಳಿಸಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದೇ ವೇಳೆ ಪಂದ್ಯದಲ್ಲಿ ನಾಲ್ಕು ತಿಂಗಳ ಸುದೀರ್ಘ ವಿಶ್ರಾಂತಿಯ ನಂತರ, ಸ್ಪರ್ಧಾತ್ಮಕ ಕ್ರಿಕೆಟ್ಗೆ ಪುನರಾಗಮನ ಮಾಡಿದ ಭಾರತದ ವಿಕೆಟ್ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಅಪರೂಪದ ಸಾಧನೆ ಮಾಡಿದರು.
ಪಾಕಿಸ್ತಾನ ವಿರುದ್ಧದ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರು ಏಕದಿನ ಕ್ರಿಕೆಟ್ನಲ್ಲಿ 2000 ರನ್ಗಳನ್ನು ಪೂರೈಸಿದರು.
ಕೆಎಲ್ ರಾಹುಲ್ ಕೇವಲ 53 ಇನ್ನಿಂಗ್ಸ್ಗಳಲ್ಲಿ 2000 ರನ್ಗಳ ಸಾಧನೆ ಮಾಡುವ ಮೂಲಕ ತಮ್ಮ ಸಹ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದರು. ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇಬ್ಬರೂ 53 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದಂತಾಗಿದೆ.
ಆದಾಗ್ಯೂ, ಏಕದಿನ ಸ್ವರೂಪದಲ್ಲಿ ಇನ್ನೂ ವೇಗವಾಗಿ 2,000 ರನ್ಗಳನ್ನು ತಲುಪಿದ ಮೂವರು ಭಾರತೀಯ ಆಟಗಾರರು ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಕೇವಲ 48 ಇನ್ನಿಂಗ್ಸ್ಗಳಲ್ಲಿ 2,000 ರನ್ಗಳ ಮೈಲುಗಲ್ಲನ್ನು ಸಾಧಿಸಿದ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅಗ್ರಸ್ಥಾನದಲ್ಲಿದ್ದರೆ, ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕೂಡ 52 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕುರಿತು ಮಾತನಾಡುವುದಾದರೆ, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಬ್ಯಾಟರ್ಗಳಾದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಜೋಡಿ 16.4 ಓವರ್ಗಳಲ್ಲಿ 121 ರನ್ಗಳ ಜೊತೆಯಾಟ ನೀಡುವ ಮೂಲಕ ಭದ್ರ ಬುನಾದಿ ಒದಗಿಸಿದರು.
ಮೊದಲ ವಿಕೆಟ್ ಜೊತೆಯಾಟದ ಸಮಯದಲ್ಲಿ ಭಾರತದ ಈ ಆರಂಭಿಕ ಜೋಡಿ ವೈಯಕ್ತಿಕ ಅರ್ಧಶತಕ ಗಳಿಸಿದರು. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 50ನೇ ಅರ್ಧಶತಕ ಸಿಡಿಸಿದರೆ, ಯುವ ಬ್ಯಾಟರ್ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್ನಲ್ಲಿ ತಮ್ಮ 8ನೇ ಅರ್ಧಶತಕ ಬಾರಿಸಿದರು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನದ ಸ್ಪಿನ್ನರ್ ಶಾದಾಬ್ ಖಾನ್ ವಿರುದ್ಧ ಮೂರು ಸಿಕ್ಸರ್ ಬಾರಿಸಿ ಪ್ರಾಬಲ್ಯ ಸಾಧಿಸಿದರೆ, ಶಾಹೀನ್ ಅಫ್ರಿದಿ ಅವರ ಮೊದಲ ಮೂರು ಓವರ್ಗಳಲ್ಲಿ ಶುಭ್ಮನ್ ಗಿಲ್ ಆರು ಬೌಂಡರಿಗಳನ್ನು ದಾಖಲಿಸಿದರು.
ಅಂತಿಮವಾಗಿ, 17ನೇ ಓವರ್ನಲ್ಲಿ ಶಾದಾಬ್ ಖಾನ್ ಅವರ ಬೌಲಿಂಗ್ನಲ್ಲಿ ರೋಹಿತ್ ಶರ್ಮಾ ಅವರ ಔಟಾಗುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ನೀಡಿದರು. ಇನ್ನು ಶಾಹೀನ್ ಅಫ್ರಿದಿ ನಂತರದ ಓವರ್ನಲ್ಲಿ ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿ ತಂಡಕ್ಕೆ ಎರಡನೇ ವಿಕೆಟ್ ತಂದುಕೊಟ್ಟರು.