ನಾಯಕತ್ವಕ್ಕಾಗಿ ರೋಹಿತ್, ರಾಹುಲ್ ಮಧ್ಯ ಪೈಪೋಟಿ ಶುರು; ಅನುಮಾನ ಮೂಡಿಸಿದ ರಾಹುಲ್ನ ಆ ಹೇಳಿಕೆ!

ಕಳೆದ ವರ್ಷದ ಆರಂಭದಲ್ಲಿ ಏಕದಿನ, ಟಿ ಟ್ವೆಂಟಿ ಹಾಗೂ ಟೆಸ್ಟ್ ಈ ಮೂರೂ ಮಾದರಿಯ ಕ್ರಿಕೆಟ್ನಲ್ಲಿಯೂ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ ಈ ವರ್ಷದ ಜನವರಿ ತಿಂಗಳಿನಲ್ಲಿ ಈ ಎಲ್ಲಾ ತಂಡಗಳ ನಾಯಕತ್ವವನ್ನು ಕಳೆದುಕೊಂಡು ಸದ್ಯ ತಂಡದಲ್ಲಿ ಓರ್ವ ಆಟಗಾರನಾಗಿ ಮಾತ್ರ ಉಳಿದುಕೊಂಡಿದ್ದಾರೆ. ಹೌದು, ಮೊದಲಿಗೆ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಸ್ವಇಚ್ಛೆಯಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿತ್ತು.
ಹೀಗೆ ಭಾರತ ಏಕದಿನ ಹಾಗೂ ಟಿ ಟ್ವೆಂಟಿ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ತ್ಯಜಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡದ ನಾಯಕತ್ವದಿಂದ ಹೊರಬಿದ್ದ ನಂತರ ಕೊಹ್ಲಿ ಜಾಗಕ್ಕೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಬಿಸಿಸಿಐ ನೇಮಿಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದಲೇ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಕಣಕ್ಕಿಳಿಯಬೇಕಿತ್ತು.
ಆದರೆ ಪ್ರವಾಸಕ್ಕೂ ಮುನ್ನ ಗಾಯದ ಸಮಸ್ಯೆಗೆ ಒಳಗಾದ ರೋಹಿತ್ ಶರ್ಮಾ ಸದ್ಯ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಇತ್ತಿಚೆಗಷ್ಟೇ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾಗ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಇದೀಗ ಏಕದಿನ ತಂಡದ ನಾಯಕನಾಗಿಯೂ ಕೂಡ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೀಗೆ ಕೆಎಲ್ ರಾಹುಲ್ ನಾಯಕನಾಗಿರುವ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ವಿಷಯಗಳ ಕುರಿತು ಅಭಿಪ್ರಾಯಗಳನ್ನು ತಿಳಿಸಿದ ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ನಾಯಕತ್ವದ ಬಗ್ಗೆ ಕೂಡ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ನಾಯಕನಾಗಿ ತಂಡವನ್ನು ಮುನ್ನಡೆಸಲು ಸಿದ್ಧ ಎಂದ ರಾಹುಲ್
ಇನ್ನು ಕೆಎಲ್ ರಾಹುಲ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದಾಗ ನಾಯಕನಾಗಿ ಟೀಮ್ ಇಂಡಿಯಾವನ್ನು ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಮುನ್ನಡೆಸಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಕೆ ಎಲ್ ರಾಹುಲ್ "ತಂಡವನ್ನು ನಾಯಕನಾಗಿ ಮುನ್ನಡೆಸುವುದು ಎಲ್ಲರಿಗೂ ಸಹ ವಿಶೇಷವಾಗಿರುತ್ತದೆ ಹಾಗೂ ಇದರಿಂದ ನಾನು ಹೊರತಾಗಿಲ್ಲ. ಒಂದುವೇಳೆ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸುವಂತಹ ದೊಡ್ಡ ಜವಾಬ್ದಾರಿ ನನಗೆ ಸಿಕ್ಕರೆ ಖಂಡಿತಾ ಸಿದ್ಧನಿದ್ದೇನೆ" ಎಂದು ಹೇಳಿಕೆಯನ್ನು ನೀಡಿದ್ದಾರೆ.

ನಾಯಕತ್ವಕ್ಕೆ ಸಿದ್ಧ ಎಂದು ರೋಹಿತ್ ಶರ್ಮಾಗೆ ಪೈಪೋಟಿ ನೀಡಿದ್ರಾ ಕೆಎಲ್ ರಾಹುಲ್?
ಸದ್ಯ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದ ನಂತರ ಆ ಸ್ಥಾನಗಳಿಗೆ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಬಿಸಿಸಿಐ ನೇಮಿಸಿದೆ. ಹಾಗೂ ಇತ್ತೀಚೆಗಷ್ಟೇ ಬಿಸಿಸಿಐನ ಅಧಿಕಾರಿಯೋರ್ವರು ಮಾತನಾಡಿ ಭಾರತ ಟೆಸ್ಟ್ ತಂಡಕ್ಕೂ ಕೂಡಾ ರೋಹಿತ್ ಶರ್ಮಾ ಅವರೇ ನಾಯಕನಾಗಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಕೆಎಲ್ ರಾಹುಲ್ ಭಾರತದ ಟೆಸ್ಟ್ ತಂಡದ ನಾಯಕನಾಗಲು ಸಿದ್ಧ ಎಂಬ ಹೇಳಿಕೆಯನ್ನು ನೀಡುವುದರ ಮೂಲಕ ರೋಹಿತ್ ಶರ್ಮಾ ಅವರಿಗೆ ಪರೋಕ್ಷವಾಗಿ ಪೈಪೋಟಿ ನೀಡಿದ್ದಾರೆ ಎಂಬ ಅಭಿಪ್ರಾಯಗಳು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ವ್ಯಕ್ತವಾಗುತ್ತಿದೆ.

ಉಪನಾಯಕನಿಗೆ ನಾಯಕ ಪಟ್ಟ ನೀಡುವುದು ವಾಡಿಕೆ
ಟೀಮ್ ಇಂಡಿಯಾದಲ್ಲಿ ಹೆಚ್ಚಾಗಿ ಉಪನಾಯಕ ಸ್ಥಾನವನ್ನು ನಿರ್ವಹಿಸುತ್ತಿರುವ ಆಟಗಾರನೇ ಮುಂದಿನ ನಾಯಕ ಎಂಬ ವಾಡಿಕೆ ಇದೆ. ಈ ಹಿಂದೆ ಸಾಕಷ್ಟು ಬಾರಿ ಉಪ ನಾಯಕನ ಸ್ಥಾನದಲ್ಲಿದ್ದ ಆಟಗಾರರು ನಂತರದ ದಿನಗಳಲ್ಲಿ ನಾಯಕನ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದರು. ಹೀಗಾಗಿ ಸದ್ಯ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ ಅವರೇ ಭಾರತದ ಮುಂದಿನ ಟೆಸ್ಟ್ ನಾಯಕ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆ ಎಲ್ ರಾಹುಲ್ ಏಕಾಏಕಿ ಭಾರತ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹೊರಲು ಸಿದ್ಧ ಎಂದು ನೀಡಿರುವ ಹೇಳಿಕೆ ಇದೀಗ ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಅಸಮಾಧಾನವನ್ನುಂಟುಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications