ಸೋಮವಾರ, ಸೆಪ್ಟೆಂಬರ್ 11ರಂದು ಕೊಲಂಬೊದಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 228 ರನ್ಗಳ ದಾಖಲೆಯ ಗೆಲುವು ಸಾಧಿಸಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಎಲ್ಲ ವಿಭಾಗದಲ್ಲಿಯೂ ಪ್ರಾಬಲ್ಯ ಸಾಧಿಸಿತು ಮತ್ತು ಇದು ಏಕದಿನ ಪಂದ್ಯವಾಗಿದ್ದರೂ, ಮಳೆಯಿಂದಾಗಿ ಪಂದ್ಯವನ್ನು ಭಾನುವಾರ ಮತ್ತು ಮೀಸಲು ದಿನವಾದ ಸೋಮವಾರವೂ ಆಡಲಾಯಿತು.

ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಭಾರತ ತಂಡದ ಬಲಗೈ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅವರು ಪಾಕಿಸ್ತಾನದ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ತಮ್ಮ ಸೇರ್ಪಡೆ ಹೇಗಾಯಿತು ಎಂಬ ಕುತೂಹಲಕಾರಿ ಸಂಗತಿಯನ್ನು ಹಂಚಿಕೊಂಡರು.
ಗಮನಾರ್ಹಗಿ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 228 ರನ್ಗಳ ದಾಖಲೆಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕೆಎಲ್ ರಾಹುಲ್ ಅದ್ಭುತ ಶತಕದ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಪುನರಾಗಮನ ಮಾಡಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಬೆನ್ನು ಸೆಳೆತವನ್ನು ಅನುಭವಿಸಿದ ನಂತರ ಕೆಎಲ್ ರಾಹುಲ್ ಅವರನ್ನು ಆಡುವ ಬಳಗದಲ್ಲಿ ಸೇರಿಸಲಾಯಿತು. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಸೇರ್ಪಡೆಯ ಬಗ್ಗೆ ಪಂದ್ಯ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮುನ್ನ ಹೇಳಿದರು ಎಂದು ಕೆಎಲ್ ರಾಹುಲ್ ಬಹಿರಂಗಪಡಿಸಿದ್ದಾರೆ.

"ಪಾಕಿಸ್ತಾನ ವಿರುದ್ಧ ಪಂದ್ಯದ ಟಾಸ್ಗೆ 5 ನಿಮಿಷಗಳ ಮೊದಲು ರಾಹುಲ್ ದ್ರಾವಿಡ್ ಭಾಯ್ ಕರೆದು ನಾನು ಆಡುತ್ತಿದ್ದೇನೆ ಎಂದು ಹೇಳಿದರು. ನಾನು ಆಡುವ ಯೋಚನೆ ಇಟ್ಟುಕೊಂಡು ಬಂದಿರಲಿಲ್ಲ. ಏಕೆಂದರೆ ನಾನು ವಾಟರ್ ಬಾಯ್ ಆಗುತ್ತೇನೆ ಎಂದು ನಾನು ಭಾವಿಸಿದ್ದೆ. ನನ್ನ ವೃತ್ತಿಜೀವನದಲ್ಲಿ ನನಗೆ ವಿಚಿತ್ರವಾದ ಸಂಗತಿ ಸಂಭವಿಸಿತು," ಎಂದು ಕೆಎಲ್ ರಾಹುಲ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಆಟಗಾರ ಕೆಎಲ್ ರಾಹುಲ್ ಪಾಕಿಸ್ತಾನ ವಿರುದ್ಧ ತಮ್ಮ ಪುನರಾಗಮನ ಪಂದ್ಯದಲ್ಲಿ ಎದುರಿಸಿದ 106 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 12 ಬೌಂಡರಿಗಳ ಸಮೇತ ಅಜೇಯ 111 ರನ್ ಬಾರಿಸಿದರು. ಇದರ ಜೊತೆಗೆ ವಿರಾಟ್ ಕೊಹ್ಲಿ ಅವರೊಂದಿಗೆ ಮುರಿಯದ ಮೂರನೇ ವಿಕೆಟ್ಗೆ 233 ರನ್ಗಳ ದಾಖಲೆ ಜೊತೆಯಾಟ ನಿರ್ಮಿಸಿ ಭಾರತವನ್ನು 356 ರನ್ಗಳ ಬೃಹತ್ ಮೊತ್ತಕ್ಕೆ ಮುನ್ನಡೆಸಿದರು.
ಪಾಕಿಸ್ತಾನ ತಂಡದ 357 ರನ್ಗಳ ಚೇಸಿಂಗ್ ವೇಳೆ ಭಾರತೀ ಬೌಲರ್ಗಳು ಭಯಾನಕವಾಗಿ ಕಾಡಿದರು. ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಎಂಟು ಓವರ್ಗಳ ಕೋಟಾದಲ್ಲಿ ಕೇವಲ 25 ರನ್ಗಳನ್ನು ಬಿಟ್ಟುಕೊಟ್ಟು 5-ವಿಕೆಟ್ಗಳ ಸಾಧನೆ ಮಾಡಿದರು.
ಅಲ್ಲದೆ, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಪಡೆದು ಬದ್ಧ ಎದುರಾಳಿ ತಂಡವನ್ನು 128 ರನ್ಗಳಿಗೆ ನಿಯಂತ್ರಿಸಿದರು.