ಭರವಸೆಯ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್ ಅವರ ಬಿಗುವಿನ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಅಹಮದಾಬಾದ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಿನದ ಗೌರವವನ್ನು ತಮ್ಮದಾಗಿಸಿಕೊಂಡಿದೆ. ಶುಭಮನ್ ಗಿಲ್ ಪಡೆ ಮೊದಲ ಇನಿಂಗ್ಸ್ನಲ್ಲಿ 41 ರನ್ಗಳ ಹಿನ್ನಡೆ ಅನುಭವಿಸುತ್ತಿದೆ.
ಟಾಸ್ ಗೆಲ್ಲುತ್ತಿದ್ದಂತೆ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ 162 ರನ್ಗಳಿಗೆ ಪ್ರವಾಸಿ ತಂಡ ಆಲೌಟ್ ಆಯಿತು. ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಆರಂಭಿಸಿದ್ದು, ಈ ವೇಳೆ 2 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿದೆ. ಇನಿಂಗ್ಸ್ ಮುನ್ನಡೆ ಸಾಧಿಸಲು ಭಾರತಕ್ಕೆ ಇನ್ನು 41 ರನ್ಗಳ ಅವಶ್ಯತೆ ಇದೆ.

ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಆರಂಭ ಉತ್ತಮವಾಗಿತ್ತು. ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಎಚ್ಚರಿಕೆಯ ಆಟವನ್ನು ಆಡಿದರು. ಈ ವೇಳೆ ಜೈಸ್ವಾಲ್ ಕಲಾತ್ಮಕ ಆಟದ ಪ್ರದರ್ಶನ ನೀಡಿದರು. ಒಟ್ಟು 7 ಬೌಂಡರಿ ಬಾರಿಸಿದ ಜೈಸ್ವಾಲ್ 36 ರನ್ಗಳಿಗೆ ಔಟ್ ಆದರು. ಇವರು ಜೇಡನ್ ಸೀಲ್ಸ್ ಎಸೆತದಲ್ಲಿ ಕಟ್ ಮಾಡಲು ಹೋದಾಗ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಜೈಸ್ವಾಲ್ ವಿಕೆಟ್ ಬೀಳುತ್ತಿದ್ದಂತೆ ಕ್ರೀಸ್ಗೆ ಬಂದ ಸಾಯಿ ಸುದರ್ಶನ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇವರು 7 ರನ್ ಬಾರಿಸಿದ್ದಾಗ ರೋಸ್ಟನ್ ಚೇಸ್ ಎಸೆತದಲ್ಲಿ ಔಟ್ ಆದರು.
ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, ಕೆಎಲ್ ರಾಹುಲ್ ಅವರಿಗೆ ಸಾಥ್ ನೀಡಲು ಬಂದರು. ಈ ಜೋಡಿ ಸಹ ಆರಂಭದಲ್ಲಿ ಕೆಟ್ಟ ಎಸೆತಗಳನ್ನು ಎದುರಿಸುತ್ತಾ ಸಾಗಿತು. ಅಲ್ಲದೆ ಭಾರತದ ಪರ ಭರವಸೆಯ ಬೆಳಕು ಮೂಡಿಸಿತು. ಕರ್ನಾಟಕದ ಕೆಎಲ್ ರಾಹುಲ್ 6 ಬೌಂಡರಿ ನೆರವಿನಿಂದ ಅಜೇಯ 53 ರನ್ ಬಾರಿಸಿದರೆ, ಶುಭಮನ್ ಗಿಲ್ ಅಜೇಯ 18 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಹುಲ್ ಹಾಗೂ ಗಿಲ್ ಎರಡನೇ ದಿನದಾಟದ ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವನ್ನು ಆಡಿ ತಂಡದ ಮುನ್ನಡೆಯನ್ನು ಹೆಚ್ಚಿಸುವ ಅನಿವಾರ್ಯತೆ ಇದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ಗುರುವಾರದಿಂದ ಅಹಮದಾಬಾದ್ನಲ್ಲಿ ಆರಂಭವಾಗಿದೆ. ಈ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳ ಕೊರತೆ ಎದ್ದು ಕಾಣುತ್ತಿತ್ತು. ದಸರಾ ಹಬ್ಬದ ಸಂಭ್ರಮದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಪದ್ಯವನ್ಮು ವೀಕ್ಷಿಸಲು ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಎರಡು ಬಾರಿ ಆಡಿರುವ ಭಾರತ, ಈ ಬಾರಿ ಮತ್ತೊಮ್ಮೆ ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ಕಾಣುತ್ತಿದೆ.