
ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಪಂದ್ಯವೊಂದನ್ನ ಜಯಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಭಾರತದ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ 40.3 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು. ನಂತರ ಧವನ್ (113 ಎಸೆತಗಳಲ್ಲಿ 81 ರನ್, ಔಟಾಗದೆ 9 ಬೌಂಡರಿ) ಹಾಗೂ ಶುಭಮನ್ ಗಿಲ್ (72 ಎಸೆತಗಳಲ್ಲಿ 82 ರನ್, 10 ಬೌಂಡರಿ ಹಾಗೂ 1 ಸಿಕ್ಸರ್ ಔಟಾಗದೆ) ಅಮೋಘ ಆಟವಾಡಿ ಭಾರತ ಸುಲಭ ಗೆಲುವು ದಾಖಲಿಸಿತು.
190 ರನ್ಗಳ ಗುರಿಯನ್ನು 30.5 ಓವರ್ಗಳಲ್ಲಿ ತಲುಪಿದ ಭಾರ 10 ವಿಕೆಟ್ಗಳ ಬೃಹತ್ ಅಂತರದಿಂದ ಜಯಗಳಿಸಿತು. ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ಪಂದ್ಯವನ್ನು ಗೆದ್ದಿದೆ.
ಈ ಪಂದ್ಯದಲ್ಲಿ ದೀಪಕ್ ಚಹಾರ್ ಪಂದ್ಯಶ್ರೇಷ್ಠರಾದರು. ಅವರು ಕಂಬ್ಯಾಕ್ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡುರವ ಮೂಲಕ ಮೂರು ನಿರ್ಣಾಯಕ ವಿಕೆಟ್ಗಳನ್ನು ಪಡೆದರು ಮತ್ತು ಜಿಂಬಾಬ್ವೆಯ ಕುಸಿತಕ್ಕೆ ಕಾರಣರಾದ್ರು. ಆದರೆ, ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಓಪನರ್ ಆಗಿ ಕಣಕ್ಕೆ ಇಳಿಯದಿದ್ದಕ್ಕೆ ನೆಟ್ಟಿಗರು ಖಾರವಾಗಿ ಪ್ರಶ್ನಿಸಿದ್ದಾರೆ.
ಜಿಂಬಾಬ್ವೆಯನ್ನ ಅಭ್ಯಾಸ ಪಂದ್ಯವಾಗಿ ಪರಿಗಣಿಸಿದ್ದೀರಾ ?
ಈ ಸರಣಿಗೆ ಆರಂಭದಲ್ಲಿ ಧವನ್ ನಾಯಕನಾಗಿ ಆಯ್ಕೆಯಾಗಿದ್ದರೂ, ನಂತರ ಕೆಎಲ್ ರಾಹುಲ್ ಫಿಟ್ನೆಸ್ ಸಾಧಿಸಿದ ನೆಪದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದರು. ಧವನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ರಾಹುಲ್ ಗೆ ನಾಯಕತ್ವ ನೀಡಲಾಯಿತು. ಆದರೆ ಧವನ್ ಅವರನ್ನು ಉಪನಾಯಕರನ್ನಾಗಿ ಮಾಡಲಾಯಿತು. ಈ ಸರಣಿಗೆ ಕೆಎಲ್ ರಾಹುಲ್ ಅವರನ್ನು ಬಿಸಿಸಿಐ ತೆಗೆದುಕೊಳ್ಳಲು ಪ್ರಮುಖ ಕಾರಣವೆಂದರೆ ಅವರು ಏಷ್ಯಾ ಕಪ್ ಮತ್ತು ಟಿ 20 ವಿಶ್ವಕಪ್ಗೆ ಮೊದಲು ಸಾಕಷ್ಟು ಪಂದ್ಯದ ಅಭ್ಯಾಸವನ್ನು ಪಡೆಯಲಿ ಎಂಬುವುದಾಗಿದೆ.
ಏಕೆಂದರೆ ಕಳೆದ ಕೆಲವು ತಿಂಗಳಿನಿಮದ ಹೊರಗುಳಿದಿರುವ ಕೆ.ಎಲ್ ರಾಹುಲ್ ಐಪಿಎಲ್ 2022ರ ಸೀಸನ್ ಬಳಿಕ ಯಾವೊಂದು ಪಂದ್ಯವನ್ನು ಆಡಿರಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಇಂಜ್ಯುರಿಯಿಂದ ತಂಡದಿಂದ ಹೊರಬಿದ್ದರು.
ಇಷ್ಟಾದರೂ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಮ್ಯಾನೇಜ್ಮೆಂಟ್ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಅವರನ್ನು ಆರಂಭಿಕರಾಗಿ ಕಳುಹಿಸಿ ಕೆಎಲ್ ರಾಹುಲ್ ಅವರನ್ನು ನಾಲ್ಕನೇ ಸ್ಥಾನಕ್ಕೆ ಸೀಮಿತಗೊಳಿಸಿತು. ಆರಂಭಿಕರು ವಿಕೆಟ್ ಒಪ್ಪಿಸಿದೇ ತಂಡವನ್ನ ಗೆಲುವಿನ ದಡ ತಲುಪಿಸಿದ ಕಾರಣ ರಾಹುಲ್ ಬ್ಯಾಟಿಂಗ್ ಮಾಡಲು ಆಗಲಿಲ್ಲ. ಇದ್ರಿಂದಾಗಿ ಅವರನ್ನು ನಾಲ್ಕನೇ ಸ್ಥಾನಕ್ಕೆ ಇಳಿಸಿದ್ದರ ಕುರಿತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖ್ಯಾತ ಕಾಮೆಂಟೇಟರ್ ಹರ್ಷಾ ಭೋಗ್ಲೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಎಲ್ ರಾಹುಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಬೇಕು ಎಂದು ಅವರು ನಂಬಿದ್ದಾರೆ. ಅವರಿಗೆ ಸಾಕಷ್ಟು ಅಭ್ಯಾಸದ ಅಗತ್ಯವಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಬ್ಯಾಟಿಂಗ್ ಮಾಡಬೇಕು ಎಂದು ಭೋಗ್ಲೆ ಹೇಳಿದ್ದಾರೆ.
ನೆಟ್ಟಿಗರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬ್ಯಾಟಿಂಗ್ ಕ್ರಮಾಂಕವು ಅರ್ಥಹೀನವಾಗಿದ್ದು, ರಾಹುಲ್ ಅವರನ್ನು ಆರಂಭಿಕರಾಗಿ ಕಳುಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬ ನೆಟಿಜನ್ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ಗೆ ಬ್ಯಾಟಿಂಗ್ ಅಭ್ಯಾಸ ಬೇಕು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮಾಡಬೇಕಾದರೆ ಓಪನಿಂಗ್ ಮಾಡಬೇಕು ಎಂದಿದ್ದಾರೆ.