ಚೆನ್ನೈ, ಆಗಸ್ಟ್ 03: ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಟೀಂ ಇಂಡಿಯಾದ ನಾಯಕರಾಗಿರುವ ವಿರಾಟ್ ಕೊಹ್ಲಿಗೆ ಮೊದಲ ಬಾರಿಗೆ ಕಠಿಣ ಸವಾಲು ಎದುರಾಗಿದೆ. ಶ್ರೀಲಂಕಾ ಪ್ರವಾಸ ಸವಾಲಾಗಿ ಪರಿಣಮಿಸಲಿದ್ದು, ಕೊಹ್ಲಿಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸೆಹ್ವಾಗ್ ಆಟವನ್ನು ನೋಡಿ ಕಲಿಯುವಂತೆ ಸೂಚಿಸಿದ್ದಾರೆ.
ಬಾಂಗ್ಲಾದೇಶ ಪ್ರವಾಸದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ನಾಯಕತ್ವದ ಪಾಠ ಸರಿಯಾಗಿ ಕಲಿಯದ ಕೊಹ್ಲಿ ಅವರು ಈಗ ಲಂಕಾ ಪಿಚ್ ಗಳಲ್ಲಿ ಯಶಸ್ವಿಯಾಗಲು ಸಾಕಷ್ಟು ಶ್ರಮ ಪಡಬೇಕಿದೆ. 'ನಾಯಕರಾಗಿ ನನಗೆ ಮತ್ತು ತಂಡಕ್ಕೆ ಲಂಕಾ ಪ್ರವಾಸ ಸವಾಲಾಗಿದೆ' ಎಂದು ಕೊಹ್ಲಿ ಬಿಸಿಸಿಐನ ವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.[ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ]
ಸೆಹ್ವಾಗ್ ಆಟ ನೋಡಿ: ಗಾಲೆಯಲ್ಲಿ 2008ರಲ್ಲಿ ಅಜಂತಾ ಮೆಂಡಿಸ್ ಹಾಗೂ ಲಂಕಾ ಸ್ಪಿನ್ ಪಡೆಯನ್ನು ದಿಟ್ಟವಾಗಿ ಎದುರಿಸಿದ ಸೆಹ್ವಾಗ್ ಅವರು 201ರನ್ ಬಾರಿಸಿದ್ದನ್ನು ಈಗಿನ ತಂಡಕ್ಕೆ ತೋರಿಸಬೇಕಿದೆ ಎಂದು ಕೊಹ್ಲಿಗೆ ದ್ರಾವಿಡ್ ಅವರು ಸಲಹೆ ನೀಡಿದ್ದಾರೆ.

ಅಜಂತಾ ಮೆಂಡಿಸ್ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಎಲ್ಲರನ್ನು ಕಾಡುತ್ತಿದ್ದರು. ಈ ಸಂದರ್ಭದಲ್ಲಿ ವೀರೂ ಭಾಯಿ ತೋರಿದ ಆಟ ಎಲ್ಲರಿಗೂ ಮಾದರಿಯಾಯಿತು 329 ರನ್ ಗಳ ಪೈಕಿ ಸೆಹ್ವಾಗ್ 201ರನ್ ಗಳಿಸಿದರು, ಎಂಟು ಜನ ಬ್ಯಾಟ್ಸ್ ಮನ್ ಡಬಲ್ ಡಿಜಿಟ್ ತಲುಪಿರಲಿಲ್ಲ ಎಂದು ದ್ರಾವಿಡ್ ಅವರು ನನಗೆ ಹೇಳಿದ್ದಾರೆ. ಹೀಗಾಗಿ ಸೆಹ್ವಾಗ್ ಬಳಸಿದ ತಂತ್ರಗಳು, ಗಾಲೆ ಪಿಚ್ ಬಗ್ಗೆ ಅರಿಯಲು ಈ ಇನ್ನಿಂಗ್ಸ್ ಸೂಕ್ತ ಎಂದು ತಿಳಿದು ಬಂದಿದೆ ಎಂದು ಕೊಹ್ಲಿ ವಿವರಿಸಿದರು.[ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾದಿಂದ ಲಂಕಾ ಪ್ರವಾಸ]
ಸ್ಪಿನ್ ತಂತ್ರಕ್ಕೆ ಮಣೆ: ಭಾರತ ಈ ಬಾರಿ ಸ್ಪಿನ್ನರ್ ಬಳಕೆ ಹೆಚ್ಚಾಗಿ ಮಾಡಲಿದೆ. ಜೊತೆಗೆ ಸ್ಪಿನ್ನರ್ ಗಳನ್ನು ಆಡುವುದು ಹೇಗೆ ಎಂಬ ತಂತ್ರವನ್ನು ದ್ರಾವಿಡ್ ಅವರಿಂದ ಕಲಿತು ಬಂದಿದ್ದೇನೆ. ಟೀಂ ಇಂಡಿಯಾದ ಆಟಗಾರರಿಗೆ ಈ ಪ್ರವಾಸ ಒಳ್ಳೆ ಪಾಠವಾಗಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಮುಂಬರುವ ಲಂಕಾ ಪ್ರವಾಸದ ಎರಡನೆ ಟೆಸ್ಟ್ನಲ್ಲಿ ಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಮಾರ ಸಂಗಕ್ಕರ ನಿವೃತ್ತರಾಗಲಿದ್ದಾರೆ. ಈ ಕಾರಣದಿಂದಾಗಿ ಈ ಪ್ರವಾಸ ಹೆಚ್ಚು ಕುತೂಹಲ ಕೆರಳಿಸಿದೆ. (ಪಿಟಿಐ)