ಹುಬ್ಬಳ್ಳಿ, ಆಗಸ್ಟ್ 23: ಹುಬ್ಬಳ್ಳಿಯಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಯಾಗಿರುವ ಕಾರಣ ಪಂದ್ಯಗಳನ್ನು ಮೈಸೂರಿನಲ್ಲಿ ನಡೆಸಲು ಕೆಎಸ್ಸಿಎ ನಿರ್ಧರಿಸಿದೆ. ಮಳೆ ಮತ್ತು ತೇವ ಮೈದಾನದ ಕಾರಣ ಎರಡು ಪಂದ್ಯಗಳು ರದ್ದಾದ ಬಳಿಕ ಕೆಎಸ್ಸಿಎ ಈ ನಿರ್ಧರವನ್ನು ಕೈಗೊಂಡಿದೆ.
ಕೆಪಿಎಲ್ಗೆ ಮಳೆ ಕಾಟ: ಏಳನೇ ಪಂದ್ಯ ಕೂಡ ರದ್ದು
ನಿಲ್ಲದ ಮಳೆಯ ಕಾರಣ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಆಗಸ್ಟ್ 21ರ ಬೆಳಗಾವಿ ಪ್ಯಾಂಥರ್ಸ್ ಮತ್ತು ಬಿಜಾಪುರ್ ಬುಲ್ಸ್ ಪಂದ್ಯ ರದ್ದಾಗಿತ್ತು. ಆಗಸ್ಟ್ 22ರ ಹುಬ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ಪಂದ್ಯವೂ ಮಳೆಗೆ ಅಹುತಿಯಾಗಿತ್ತು.
ಆರು ಮತ್ತು ಏಳನೇ ಪಂದ್ಯ ರದ್ದುಗೊಂಡ ಬಳಿಕ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪುರ ಬುಲ್ಸ್ ನಡುವಣ ಎಂಟನೇ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯಬೇಕಿತ್ತು. ಆದರೆ ಅದಕ್ಕೂ ಮಳೆ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ಆಗಸ್ಟ್ 25ರ ಶನಿವಾರದಿಂದ ಕೆಪಿಎಲ್ ಪಂದ್ಯಗಳು ಮೈಸೂರಿನಲ್ಲಿ ನಡೆಯಲಿವೆ.
ಆಗಸ್ಟ್ 23 (ಹುಬ್ಳಿ-ಬೆಳಗಾವಿ) ಮತ್ತು 24ಕ್ಕೆ (ಬಿಜಾಪುರ್-ಮೈಸೂರು) ನಡೆಯಬೇಕಿದ್ದ ಪಂದ್ಯವನ್ನು ಮೈಸೂರಿಗೆ ವರ್ಗಾಯಿಸಲಾಗಿದೆ. ಆಗಸ್ಟ್ 31ಕ್ಕೆ ಮೈಸೂರಿನಲ್ಲಿ ಈ ಪಂದ್ಯಗಳು ನಡೆಯಲಿವೆ. ಆಗಸ್ಟ್ 28ರಿಂದ ಪಂದ್ಯಗಳು ಮೈಸೂರು ತಾಣದಲ್ಲಿ ಆರಂಭಗೊಳ್ಳುವುದರಲ್ಲಿತ್ತು. ಉಳಿದಂತೆ ಮೈಸೂರಿನಲ್ಲಿ ವೇಳಾಪಟ್ಟಿಯಂತೆ ಪಂದ್ಯಗಳು ನಡೆಯಲಿವೆ.