ಹುಬ್ಬಳ್ಳಿ, ಆಗಸ್ಟ್ 21: ಕೆಪಿಎಲ್ ಆವೃತ್ತಿಯ ಆರನೇ ಪಂದ್ಯ ಮಳೆಯ ಕಾರಣ ಒಂದೂ ಎಸೆತ ಆಡಲು ಸಾಧ್ಯವಾಗದೆ ರದ್ದಾಗಿದೆ.
ಹುಬ್ಬಳ್ಳಿಯಲ್ಲಿ ಸುರಿದ ಮಳೆಯಿಂದಾಗಿ ಬೆಳಗಾವಿ ಪ್ಯಾಂಥರ್ಸ್ ಮತ್ತು ಬಿಜಾಪುರ ಬುಲ್ಸ್ ತಂಡಗಳ ನಡುವಣ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ.
ಪಂದ್ಯ ಶುರುವಾಗಬೇಕಿದ್ದ ಸಂಜೆ 6.30ರವರೆಗೂ ಮಳೆ ಸುರಿದಿತ್ತು. ಬಳಿಕ ವರುಣನ ಅಬ್ಬರ ಕಡಿಮೆಯಾಗಿದ್ದರಿಂದ ಪಿಚ್ಗೆ ಹೊದಿಸಿದ್ದ ಹೊದಿಕೆಗಳನ್ನು ತೆರವುಗೊಳಿಸಲಾಯಿತು. ಮಳೆ ನಿಂತಿದ್ದರಿಂದ ಪಂದ್ಯ ಆರಂಭವಾಗುವ ಭರವಸೆ ಮೂಡಿಸಿತ್ತು.

ಆದರೆ, ಮೈದಾನ ತೀವ್ರವಾಗಿ ಒದ್ದೆಯಾಗಿದ್ದರಿಂದ ಆಡಲು ಪೂರಕವಾಗಿರಲಿಲ್ಲ. ಎರಡು ಅವಧಿಗಳಲ್ಲಿ ಮೈದಾನ ಪರಿಶೀಲಿಸಲಾಯಿತು. ಮೈದಾನದ ಎಲ್ಲೆಡೆ ನೀರು ನಿಂತಿದ್ದರಿಂದ ಆಟ ಆರಂಭಿಸಲು ಸಾಧ್ಯವಾಗಲಿಲ್ಲ.
ಕೊನೆಗೆ ಅಂಪೈರ್ಗಳಾದ ವಿಕಾಸ್ ಲುಂಡ್ ಮತ್ತು ಅಭಿಜಿತ್ ಬೆಂಗೇರಿ, ಪಂದ್ಯದ ರೆಫರಿ ವಿನಾಯಕ್ ಕುಲಕರ್ಣಿ ಅವರೊಂದಿಗೆ ಚರ್ಚಿಸಿ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡರು.
ಪಂದ್ಯ ರದ್ದುಗೊಂಡಿದ್ದರಿಂದ ಉಭಯ ತಂಡಗಳಿಗೂ ತಲಾ ಒಂದು ಅಂಕವನ್ನು ಹಂಚಲಾಯಿತು.
ಬೆಳಗಾವಿ ಪ್ಯಾಂಥರ್ಸ್ ಮತ್ತು ಬಿಜಾಪುರ ಬುಲ್ಸ್ ತಂಡಗಳು ಇದಕ್ಕೂ ಮೊದಲು ಆಡಿದ ತಲಾ ಒಂದೊಂದು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದವು.