
ಮೈಸೂರು, ಸೆಪ್ಟೆಂಬರ್ 7: ಕೆಪಿಎಲ್ 2018ನೇ ಆವೃತ್ತಿಯಲ್ಲಿ ಬಿಜಾಪುರ್ ಬುಲ್ಸ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಭರತ್ ಚಿಪ್ಲಿ ನಾಯಕತ್ವದ ಬಿಜಾಪುರ್ ಬುಲ್ಸ್, ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್ ಭರ್ಜರಿ ಜಯ ಸಾಧಿಸಿತು.
ಸೆಪ್ಟೆಂಬರ್ 6ರ ಗುರುವಾರ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿಜಾಪುರ್ ಎದುರು ರಾಬಿನ್ ಉತ್ತಪ್ಪ ಬಳಗ ಹೀನಾಯ ಸೋಲನುಭವಿಸಿತು. ಬ್ಲಾಸ್ಟರ್ಸ್ ನೀಡಿದ್ದ 102 ಸುಲಭ ರನ್ ಗುರಿಯನ್ನು ಬೆನ್ನತ್ತಿದ ಬುಲ್ಸ್ 13.5 ಓವರ್ ನಲ್ಲಿ 3 ವಿಕೆಟ್ ಕಳೆದು 106 ರನ್ ಪೇರಿಸುವುದರೊಂದಿಗೆ 7 ವಿಕೆಟ್ ಗಳಿಂದ ಗೆಲುವನ್ನಾಚರಿಸಿತು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಬೆಂಗಳೂರು ಬ್ಲಾಸ್ಟರ್ಸ್ ಆರಂಭದಿಂದಲೂ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿ ಹೇಳಿತು. 20 ಓವರ್ ಮುಕ್ತಾಯಕ್ಕೆ ಬೆಂಗಳೂರು ಎಲ್ಲಾ ವಿಕೆಟ್ ಕಳೆದು 101 ರನ್ ಪೇರಿಸಿತು. ಕೆಬಿ ಪವನ್ 22, ಮನೋಜ್ ಭಂಡಾಜೆ 18, ಅರ್ಷದೀಪ್ ಸಿಂಗ್ 14 ರನ್ ಪೇರಿಸಿದ್ದು ಬಿಟ್ಟರೆ ಉಳಿದ ಎಲ್ಲರೂ 9ರೊಳಗೆ ಔಟಾದರು.
ಬಿಜಾಪುರ್ ತಂಡದ ಪರ ಎಂಜಿ ನವೀನ್ 43, ಭರತ್ ಚಿಪ್ಲಿ 19, ಮೀರ್ ಕೌನೈನ್ ಅಬ್ಬಾಸ್ ಅಜೇಯ 15, ಕೆಎನ್ ಭರತ್ ಅಜೇಯ 21 ರನ್ ಸೇರಿಸಿದ್ದು ತಂಡಕ್ಕೆ ಎರಡನೇ ಬಾರಿಗೆ ಚಾಂಪಿಯನ್ಸ್ ಪಟ್ಟವನ್ನು ತಂದಿತು. ಬೆಂಗಳೂರು ಇನ್ನಿಂಗ್ಸ್ ವೇಳೆ ಬುಲ್ಸ್ ನ ಕೆಪಿ ಅಪ್ಪಣ್ಣ 3, ಭವೇಶ್ ಗುಲೇಚಾ ಮತ್ತು ಎಂಜಿ ನವೀನ್ ತಲಾ 2 ವಿಕೆಟ್ ಕೆಡವಿ ಕಾಡಿದರು.
ಪ್ರಶಸ್ತಿ ಪಂದ್ಯದಲ್ಲಿ ನವೀನ್ ಎಂಜಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ನಾಯಕ ಭರತ್ ಚಿಪ್ಲಿ ಸರಣಿ ಶ್ರೇಷ್ಠರೆನಿಸಿದರು. ಈ ಕೆಪಿಎಲ್ ಆವೃತ್ತಿಯಲ್ಲಿ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯೂ ಭರತ್ ಚಿಪ್ಲಿ ಪಾಲಾಯಿತು. ಇನ್ನು ಸರಣಿಯ ಬೆಸ್ಟ್ ಫೀಲ್ಡರ್ ಆಗಿ ಸ್ಟುವರ್ಟ್ ಬಿನ್ನಿ ಗುರುತಿಸಿಕೊಂಡರೆ, ಪರ್ಪಲ್ ಕ್ಯಾಪ್ (ಬೌಲಿಂಗ್ ಗಾಗಿ) ಮಹೇಶ್ ಪಟೇಲ್, ಆರೆಂಜ್ ಕ್ಯಾಪ್ (ಬ್ಯಾಟಿಂಗ್ ಗಾಗಿ) ಭರತ್ ಚಿಪ್ಲಿ ಪಡೆದುಕೊಂಡರು.