
ಮೈಸೂರು, ಸೆಪ್ಟಂಬರ್ 1: ಆಗಸ್ಟ್ 23ರಂದು ಮುಂದೂಡಲ್ಪಟ್ಟಿದ್ದ ಹುಬ್ಳಿ ಟೈಗರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ನಡುವಿನ 9ನೇ ಪಂದ್ಯದಲ್ಲಿ ಹುಬ್ಳಿ ಟೈಗರ್ಸ್ 44 ರನ್ ಜಯ ಸಾಧಿಸಿದೆ. ಹುಬ್ಬಳ್ಳಿ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿದ್ದು, ಮೈಸೂರಿನಲ್ಲಿ ಸೆ. 1ರಂದು ನಡೆಸಲು ನಿರ್ಧರಿಸಲಾಗಿತ್ತು.
ಟಾಸ್ ಸೋಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಹುಬ್ಳಿ ಟೈಗರ್ಸ್ ಅಭಿಷೇಕ್ ರೆಡ್ಡಿ ಅವರ ಅಮೋಘ ಅರ್ಧಶತಕ (74 ರನ್) ನೆರವಿನೊಂದಿಗೆ 20 ಓವರ್ ಗಳಲ್ಲಿ 5 ವಿಕೆಟ್ ಕಳೆದು 182 ರನ್ ಪೇರಿಸಿ ಎದುರಾಳಿಗೆ 183 ರನ್ ಗುರಿ ನೀಡಿತ್ತು. ಚೇಸಿಂಗ್ ಇಳಿದ ಬೆಳಗಾವಿ ಪ್ಯಾಂಥರ್ಸ್ 19 ಓವರ್ ಗೆ ಎಲ್ಲಾ ವಿಕೆಟ್ ಕಳೆದು 138 ರನ್ ಪೇರಿಸಿ ಶರಣಾಯಿತು.
ಹುಬ್ಳಿ ಪರ ಪ್ರವೀನ್ ಡೂಬೆ 40, ನಾಯಕ ವಿನಯ್ ಕುಮಾರ್ 21 ರನ್ ಪೇರಿಸಿ ತಂಡವನ್ನು ಬೆಂಬಲಿಸಿದರು. ಬೆಳಗಾವಿಯಿಂದ ಪ್ರಣವ್ ಭಾಟಿಯಾ 32 ರನ್ ಬಾರಿಸಿದ್ದು ಬಿಟ್ಟರೆ ಉಳಿದವರಾರೂ 24 ರನ್ ಗೆರೆ ದಾಟಲಿಲ್ಲ. ಎಂ ನಿಧೀಶ್ 23, ಎಸ್ ರಕ್ಷಿತ್ 20 ರನ್ ನೀಡಿದ್ದೇ ಹೆಚ್ಚೆನಿಸಿತು. ಹುಬ್ಳಿಯ ಅಭಿಷೇಕ್ ಪಂದ್ಯಶ್ರೇಷ್ಠರೆನಿಸಿದರು.
ಈ ಪಂದ್ಯದೊಂದಿಗೆ 9 ಅಂಕಗಳೊಂದಿಗೆ ಹುಬ್ಳಿ ಟೈಗರ್ಸ್ ಪಾಯಿಂಟ್ ಟೇಬಲ್ ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಬೆಂಗಳೂರು ಕೂಡ 9 ಅಂಕಗಳನ್ನು ಹೊಂದಿದ್ದು, ರನ್ ರೇಟ್ ಆಧಾರದಲ್ಲಿ ಅಗ್ರ ಸ್ಥಾನದಲ್ಲಿದೆ. ಬೆಂಗಳೂರು ಈಗಾಗಲೇ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ ಬೆಂಗಳೂರಿಗಿಂತ ಕೆಳಗಿರುವ ಹುಬ್ಳಿ, ಮೈಸೂರು, ಬಿಜಾಪುರ್ ಸೆಮಿಫೈನಲ್ ಪ್ರವೇಶಿಸಿದೆ.