
ಮೈಸೂರು, ಸೆಪ್ಟೆಂಬರ್ 6: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭರತ್ ಚಿಪ್ಲಿ ನಾಯಕತ್ವದ ಬುಜಾಪುರ್ ಬುಲ್ಸ್ ತಂಡ ಹುಬ್ಳಿ ಟೈಗರ್ಸ್ ಎದುರು 9 ವಿಕೆಟ್ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಿನಯ್ ಕುಮಾರ್ ನಾಯಕತ್ವದ ಹುಬ್ಳಿ ಟೈಗರ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದು 134 ರನ್ ಪೇರಿಸಿತು. 135 ರನ್ ಗುರಿ ಬೆನ್ನತ್ತಿದ ಬಿಜಾಪುರ್ ಬುಲ್ಸ್ 14.5 ಓವರ್ ಗಳಲ್ಲಿ 1 ವಿಕೆಟ್ ಕಳೆದು 136 ರನ್ ಪೇರಿಸುವುದರೊಂದಿಗೆ ಸುಲಭ ಜಯ ಸಾಧಿಸಿತು.
ಬುಲ್ಸ್ ಆರಂಭಿಕರಾದ ಎಂಜಿ ನವೀನ್ ಅಜೇಯ 62, ನಾಯಕ ಭರತ್ ಚಿಪ್ಲಿ 73 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಟೈಗರ್ಸ್ ಇನ್ನಿಂಗ್ಸ್ ವೇಳೆಯೂ ಬುಲ್ಸ್ ಬೌಲರ್ ಗಳಾದ ನವೀನ್ ಮತ್ತು ಕೆ ಅಪ್ಪಣ್ಣ ತಲಾ ಎರಡು ವಿಕೆಟ್ ಕಬಳಿಸಿ ರನ್ ಕದಿಯುವಿಕೆಗೆ ತಡೆಯೊಡ್ಡಿದರು.
ಸೆಪ್ಟೆಂಬರ್ 6 ರಂದು ಕೆಪಿಎಲ್ ಪ್ರಶಸ್ತಿ ಸುತ್ತಿನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಬಿಜಾಪುರ್ ಬುಲ್ಸ್ ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯ ಮೈಸೂರಿನಲ್ಲೇ ನಡೆಯಲಿದ್ದು ಸಂಜೆ 6.30ಕ್ಕೆ ಪಂದ್ಯ ಆರಂಭವಾಗಲಿದೆ.