ಕೆಪಿಎಲ್: ಬಳ್ಳಾರಿ ಟಸ್ಕರ್ಸ್ ವಿರುದ್ಧ ಉತ್ತಪ್ಪ ಪಡೆಗೆ ರೋಚಕ ಗೆಲುವು

ಬೆಂಗಳೂರು, ಆಗಸ್ಟ್ 17: ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ನ ಮೂರನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಬಳ್ಳಾರಿ ಟಸ್ಕರ್ಸ್ ವಿರುದ್ಧ ಆರು ರನ್ಗಳ ರೋಚಕ ಗೆಲುವು ಸಾಧಿಸಿತು.
ಕೊನೆಯ ಓವರ್ನಲ್ಲಿ ಬಳ್ಳಾರಿ ತಂಡಕ್ಕೆ 11 ರನ್ಗಳ ಅವಶ್ಯಕತೆಯಿತ್ತು. ವಿ. ಕೌಶಿಕ್ ಮೊದಲ ಎಸೆತದಲ್ಲಿ ಒಂದು ರನ್ ನೀಡಿದರೆ, ಎರಡನೆಯ ಎಸೆತದಲ್ಲಿ ಟಿ. ಪ್ರದೀಪ್ ಅವರ ವಿಕೆಟ್ ಪಡೆದರು. ಮರು ಎಸೆತದಲ್ಲಿಯೇ ಸಿ.ಎ. ಕಾರ್ತಿಕ್ ಬೌಲ್ಡ್ ಆದರು. ಬಳಿಕ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ ನೀಡುವ ಮೂಲಕ ಕೌಶಿಕ್ ತಂಡಕ್ಕೆ ಜಯ ತಂದಿತ್ತರು.
169 ರನ್ಗಳ ಗುರಿ ಬೆನ್ನತ್ತಿದ ಬಳ್ಳಾರಿ ತಂಡ ಎರಡನೆಯ ಓವರ್ನಲ್ಲಿಯೇ ಸ್ವಪ್ನಿಲ್ ಯೆಳವೆ ವಿಕೆಟ್ ಕಳೆದುಕೊಂಡಿತು. ಬಳಿಕ ರೋಹನ್ ಕದಂ ಮತ್ತು ದೇವದತ್ ಪಡಿಕ್ಕಲ್ ಆಸರೆಯಾದರು. ಇಬ್ಬರೂ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಬಳ್ಳಾರಿ ತಂಡ ಸಂಕಷ್ಟಕ್ಕೆ ಸಿಲುಕಿತು.
ನಂತರ ಬಂದ ಅಭಿನವ್ ಮನೋಹರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪವನ್ ದೇಶಪಾಂಡೆ ಬೌಲಿಂಗ್ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದರು. ಕೇವಲ 28 ಎಸೆತಗಳಲ್ಲಿ ಅವರು 61 ರನ್ ಗಳಿಸಿದರು. ಅದರಲ್ಲಿ 4 ಬೌಂಡರಿ, 5 ಸಿಕ್ಸರ್ಗಳಿದ್ದವು.
ನಾಯಕ ಸಿ.ಎಂ. ಗೌತಮ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದಿದ್ದರೂ, ಅಭಿನವ್ ಜತೆಗೆ ನಾಲ್ಕು ಓವರ್ಗಳಲ್ಲಿ 46 ರನ್ಗಳ ಜತೆಯಾಟ ನೀಡಿದರು.
ಬಳಿಕ ಅಬ್ರಾರ್ ಖಾಜಿ 22 (22) ಅವರಿಗೆ ಉತ್ತಮ ಸಾಥ್ ನೀಡಿದರು. ಮನೋಜ್ ಭಾಂಡಗೆ ಬೌಲಿಂಗ್ನಲ್ಲಿ ಖಾಜಿ ವಿಕೆಟ್ ಒಪ್ಪಿಸುತ್ತಿದ್ದಂತೆಯೇ ಬಳ್ಳಾರಿ ಸತತವಾಗಿ ವಿಕೆಟ್ ಕಳೆದುಕೊಂಡಿತು. ಅದೇ ಓವರ್ನಲ್ಲಿ ಅಭಿನವ್ ಮನೋಹರ್ ಕೂಡ ಔಟಾದರು. ಅಲ್ಲಿಗೆ ಬಳ್ಳಾರಿಯ ಗೆಲುವಿನ ಆಸೆ ಕಮರಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು.
ಆರಂಭಿಕ ಆಘಾತ ಅನುಭವಿಸಿದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಅರ್ಶದೀಪ್ ಸಿಂಗ್ ಬ್ರಾರ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸ್ಪರ್ಧಾತ್ಮಕ ಸ್ಕೋರ್ ದಾಖಲಿಸುವಲ್ಲಿ ಸಫಲವಾಯಿತು.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ಸಿ.ಎಂ. ಗೌತಮ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಬಳ್ಳಾರಿ ತಂಡದ ಬೌಲರ್ಗಳು ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಮೊದಲ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಗಳಿಸಿದ್ದ ಬೆಂಗಳೂರು ತಂಡದ ನಾಯಕ ರಾಬಿನ್ ಉತ್ತಪ್ಪ ಹಾಗೂ ಆರಂಭಿಕ ಆಟಗಾರ ಕೆ.ಬಿ. ಪವನ್ ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ 67 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಬೆಂಗಳೂರು ತಂಡಕ್ಕೆ ಬ್ರಾರ್ ನೆರವಾದರು. 34 ಎಸೆತಗಳಲ್ಲಿ 68 ರನ್ ಚಚ್ಚಿದ ಅವರ ಇನ್ನಿಂಗ್ಸ್ನಲ್ಲಿ 8 ಭರ್ಜರಿ ಸಿಕ್ಸರ್ಗಳಿದ್ದವು.
ಅವರಿಗೆ ಚೇತನ್ ವಿಲಿಯಂ ಮತ್ತು ಭರತ್ ದೇವರಾಜ್ ಉತ್ತಮ ಸಾಥ್ ನೀಡಿದರು.
ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ ತಂಡ, ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಇದು ಮೊದಲನೆಯ ಪಂದ್ಯವಾಗಿತ್ತು.
ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ 228 ರನ್ಗಳನ್ನು ಚಚ್ಚಿಹಾಕಿತ್ತು. ಬಳ್ಳಾರಿ ತಂಡದ ನಾಯಕ ಸಿ.ಎಂ. ಗೌತಮ್ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಮಾಡುವ ಧೈರ್ಯ ಮಾಡಿದರು. ಅವರ ಉದ್ದೇಶ ಆರಂಭದಲ್ಲಿ ಯಶ ಕಂಡರೂ, ಕೊನೆಯಲ್ಲಿ ಬೌಲರ್ಗಳು ದುಬಾರಿಯಾದರು.
ಸಂಕ್ಷಿಪ್ತ ಸ್ಕೋರ್
ಬೆಂಗಳೂರು ಬ್ಲಾಸ್ಟರ್ಸ್: 168/8 (20) ಅರ್ಶದೀಪ್ ಸಿಂಗ್ ಬ್ರಾರ್ 68, ಚೇತನ್ ವಿಲಿಯಂ 22, ಭರತ್ ದೇವರಾಜ್ 19. ಟಿ. ಪ್ರದೀಪ್ 24/3, ಕಾರ್ತಿಕ್ ಸಿ.ಎ 25/1
ಬಳ್ಳಾರಿ ಟಸ್ಕರ್ಸ್: 161/8 (20) ರೋಹನ್ ಕದಂ 31, ಅಭಿನವ್ ಮನೋಹರ್ 61, ಅಬ್ರಾರ್ ಖಾಜಿ 22. ಮನೋಜ್ ಭಾಂಡಗೆ 36/3 ಭರತ್ ದೇವರಾಜ್ 25/2, ವಿ. ಕೌಶಿಕ್ 20/2
ಫಲಿತಾಂಶ: ಬೆಂಗಳೂರು ಬ್ಲಾಸ್ಟರ್ಸ್ ತಂಡಕ್ಕೆ ಏಳು ರನ್ ಗೆಲುವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications