
ಮೈಸೂರು, ಆಗಸ್ಟ್ 30: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಕೆಪಿಎಲ್ 16ನೇ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡ ಶಿವಮೊಗ್ಗ ಲಯನ್ಸ್ ಎದುರು 5 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಬಳಿಕ 5 ಪಾಯಿಂಟ್ ಗಳೊಂದಿಗೆ ಬೆಳಗಾವಿ ಪಾಯಿಂಟ್ ಟೇಬಲ್ ನಲ್ಲಿ ಮೂರನೇ ಸ್ಥಾನದಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಶಿವಮೊಗ್ಗ ಲಯನ್ಸ್ 20 ಓವರ್ ಗೆ 8 ವಿಕೆಟ್ ಕಳೆದು 163 ರನ್ ಪೇರಿಸಿ ಪ್ಯಾಂಥರ್ಸ್ ಗೆ 164 ರನ್ ಗುರಿ ನೀಡಿತ್ತು. ಚೇಸಿಂಗ್ ಗೆ ಇಳಿದ ಬೆಳಗಾವಿ ಪ್ಯಾಂಥರ್ಸ್ ನಿಂದ ಆರಂಭಿಕ ಆಟಗಾರ ದಿಕ್ಷಾಂಶು ನೇಗಿ 54 (49) ರನ್ ನೆರವಿನೊಂದಿಗೆ 20 ಓವರ್ ಗಳಲ್ಲಿ 5 ವಿಕೆಟ್ ಕಳೆದು 166 ರನ್ ಪೇರಿಸಿ ಗೆಲುವಿನ ಗೆರೆ ದಾಟಿತು.
ಶಿವಮೊಗ್ಗ ಪರ ಅನಿರುದ್ಧ ಜೋಶಿ ಸಿಡಿಸಿದ್ದ ಅರ್ಥ ಶತಕ (54/32) ವ್ಯರ್ಥವಾಯಿತು. ನಿಹಾಲ್ ಉಲ್ಲಾಳ್ 34, ಅಭಿಮನ್ಯು ಮಿಥುನ್ 23 ರನ್ ತಂಡದ ನೆರವಿಗೆ ಬಾರದೆ ಹೋಯಿತು. ಬೆಳಗಾವಿ ಪರ ನೇಗಿ ಹೊರತುಪಡಿಸಿ ಸ್ಟುವರ್ಟ್ ಬಿನ್ನಿ 32, ಡಿ ಅವಿನಾಶ್ 35 ರನ್ ಬಾರಿಸಿದ್ದು ಪ್ಲಸ್ಸಾಗಿ ಪರಿಣಮಿಸಿತು. ಬೆಳಗಾವಿಯ ದಿಕ್ಷಾಂಶು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.