
ವಡೋದರಾ, ಜೂನ್ 30: ಕೊರೊನಾವೈರಸ್ ಲಾಕ್ಡೌನ್ನಿಂದಾಗಿ ಮೂರು ತಿಂಗಳ ಕಾಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಮತ್ತೆ ಮೈದಾನಕ್ಕಿಳಿದಿದ್ದಾರೆ. ಮಂಗಳವಾರ (ಜೂನ್ 30) ಪಾಂಡ್ಯ ಹೊರಾಂಗಣ ಅಭ್ಯಾಸ ಪುನರಾರಂಭಿಸಿದ್ದಾರೆ.
ದೇಸಿ ಕ್ರಿಕೆಟ್ನಲ್ಲಿ ಬರೋಡಾ ತಂಡದಲ್ಲಿ ಆಡುವ ಕೃನಾಲ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಣ್ಣ. ಒಟ್ಟು 18 ಟಿ20ಐ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 'ಮೈದಾನದಲ್ಲಿ ಓಡಿ ಅಭ್ಯಾಸ ನಡೆಸುವ ಮೂಲಕ ನಾನು ನನ್ನ ದಿನವನ್ನು ಆರಂಭಿಸಿದ್ದೇನೆ. ಮತ್ತೆ ಹೊರ ಬಂದಿರುವುದು ಖುಷಿ ನೀಡಿದೆ,' ಎಂದು ಕೃನಾಲ್ ಟ್ವೀಟ್ ಮಾಡಿದ್ದಾರೆ.
ಎಲ್ಲಾ ಭಾರತೀಯ ಕ್ರಿಕೆಟಿಗರ ಹಾಗೆ ಕೃನಾಲ್ ಪಾಂಡ್ಯ ಕೂಡ ವಡೋದರದ ತನ್ನ ನಿವಾಸದಲ್ಲಿ ಮಾರ್ಚ್ 25ರಿಂದಲೂ ಕಾಲ ಕಳೆದಿದ್ದರು. ಕೋವಿಡ್-19ನಿಂದಾಗಿ ಭಾರತ ದೇಶದಾದ್ಯಂತ ಲಾಕ್ಡೌನ್ ಜಾರಿಯಾಗಿದ್ದರಿಂದ ಕೃನಾಲ್ಗೂ ಮೈದಾನಕ್ಕಿಳಿಯಲು ಆಗಿರಲಿಲ್ಲ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಿಂದ ಮಾನ್ಯತೆ ಪಡೆದ ಆಟಗಾರರಲ್ಲಿ, ಕೊರೊನಾ ಬಳಿಕ ಮೈದಾನಕ್ಕಿಳಿದ ಮೊದಲ ಆಟಗಾರನಾಗಿ ಭಾರತದ ವೇಗಿ ಶಾರ್ದೂಲ್ ಠಾಕೂರ್ ಗುರುತಿಸಿಕೊಂಡಿದ್ದರು. ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿನ ಬೋಯ್ಸರ್ ಮೈದಾನದಲ್ಲಿ ಶಾರ್ದೂಲ್ ನೆಟ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದರು.