
ನವದೆಹಲಿ, ಜನವರಿ 22: ಭಾರತದ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಅವರು ಮಾನವೀಯ ಗುಣಕ್ಕಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಚಿಕಿತ್ಸೆಗಾಗಿ ಕೃನಾಲ್ ಬ್ಲ್ಯಾಂಕ್ ಚೆಕ್ ನೀಡಿದ್ದಾರೆ.
ದೇಸಿ ಕ್ರಿಕೆಟ್ನಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸಿದ್ದ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ ಆಡಿದ್ದ ಮಾಜಿ ಆಟಗಾರ ಜೇಕಬ್, ಡಿಸೆಂಬರ್ 28ರಂದು ಅಪಘಾತಕ್ಕೀಡಾಗಿದ್ದರು. ಅವರಿಗೆ ಗಂಭೀರ ಗಾಯಗಳಾಗಿತ್ತು. ಕೃತಕ ಉಸಿರಾಟದಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರ್ಟಿನ್ಗೆ ಈಗ ಆರ್ಥಿಕ ನೆರವಿನ ಅಗತ್ಯ ತುಂಬಾ ಇದೆ.
ಹೀಗಾಗಿ ಮಾಜಿ ಆಟಗಾರರ ನೆರವಿಗೆ ಭಾರತದ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಮುಂದಾಗಿದ್ದರು. ಟೀಮ್ ಇಂಡಿಯಾದ ಅನೇಕರು ಮಾರ್ಟಿನ್ಗೆ ನೆರವಿನ ಹಸ್ತ ಚಾಚಿದ್ದರು. ಭಾರತದ ಮಾಜಿ ಆಟಗಾರನ ನೆರವಿಗೆ ನಿಂತಿರುವ ಕೃನಾಲ್, ಮಾರ್ಟಿನ್ಗೆ ಬ್ಲ್ಯಾಂಕ್ ಚೆಕ್ಕನ್ನೇ ನೀಡಿದ್ದಾರೆ.
ಎಲ್ಲದಕ್ಕಿಂತ ಮಿಗಿಲಾಗಿ ಚೆಕ್ ನೀಡುವಾಗ ಜೇಕಬ್ ಅವರಿಗೆ ಕೃನಾಲ್ ಹೇಳಿದ ಮಾತು ಮನಸ್ಸಿಗಿಳಿಯುತ್ತವೆ. ಚೆಕ್ ನೀಡುತ್ತ ಪಾಂಡ್ಯ, 'ಸರ್, ನಿಮಗೆಷ್ಟು ಹಣದ ಅಗತ್ಯವಿದೆಯೋ ಅಷ್ಟನ್ನು ಬರೆಯಿರಿ. ಆದರೆ ದಯವಿಟ್ಟು 1 ಲಕ್ಷ ರೂ.ಗಿಂತ ಕಡಿಮೆ ಬರೆಯಬೇಡಿ' ಎಂದಿದ್ದರು!