
ಬೆಂಗಳೂರು, ಜುಲೈ 30: ಭ್ರಷ್ಟಾಚಾರ ರಹಿತ ಕರ್ನಾಟಕ ಪ್ರೀಮಿಯರ್ ಲೀಗ್ ನೀಡಲು ಪಣ ತೊಟ್ಟಿರುವ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಈ ಬಾರಿಯ ಕೆಪಿಎಲ್ 7ನೇ ಆವೃತ್ತಿಯಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ನಿಟ್ಟಿನಲ್ಲಿ ಕಠಿಣ ನೀತಿ ಜಾರಿಗೊಳಿಸಿದೆ. ತಂಡದ ಮಾಲಕರು, ಆಟಗಾರರು, ಸಿಬ್ಬಂದಿ, ಅಂಪೈರ್ ಗಳು ಮತ್ತು ಕೆಎಸ್ಸಿಎ ಸಿಬ್ಬಂದಿ ನೀತಿಗೆ ಒಳಪಡಲಿದ್ದಾರೆ.
ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್, ಪಂದ್ಯಕ್ಕೆ ಸಂಬಂಧಿಸಿ ಮಾಹಿತಿ ದುರ್ಬಳಕೆ ಇತ್ಯಾದಿಗಳಿಗನುಸಾರ ಕಠಿಣ ನೀತಿ ಜಾರಿಗೊಳಿಸಲಾಗಿದೆ. ನೀತಿ ಉಲ್ಲಂಘಿಸಿದ ಆಟಗಾರ 6 ತಿಂಗಳಿನಿಂದ ಜೀವನಪರ್ಯಂತ ನಿಷೇಧಕ್ಕೊಳಗಾಗಲು ಇದರಲ್ಲಿ ಅವಕಾಶ ನೀಡಲಾಗಿದೆ. ನೀತಿ ಉಲ್ಲಂಘನೆಗೆ ಅನುಗುಣವಾಗಿ ಶಿಕ್ಷೆ ಜಾರಿಯಾಗಲಿದೆ.
ಶಿಸ್ತಿಗೆ ಸಂಬಂಧಿಸಿ ಕೆಎಸ್ಸಿಎ ಕ್ರಮಗಳನ್ನು ಕೈಗೊಂಡಿದ್ದು, ಕೆಎಸ್ಸಿಎ ರೂಪಿಸಿರುವ ಆ್ಯಂಟಿ ಕರಪ್ಶನ್ ಯೂನಿಟ್ ಈ ದಿಶೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಐಪಿಎಸ್ ಅಧಿಕಾರಿ ಆರ್ ಎನ್ ಸ್ವಾಮಿ ಮುಂದಾಳತ್ವದಲ್ಲಿ ಒಟ್ಟು ಎಂಟು ಅಧಿಕಾರಿಗಳ ಕೆಪಿಎಲ್ ಭ್ರಷ್ಟಾಚಾರ ನಿಗ್ರಹ ದಳ ಟುರ್ನಿಯ ಸಮಗ್ರತೆ ನೆಲೆಯಲ್ಲಿ ಕಾರ್ಯೋನ್ಮುಖವಾಗಲಿದೆ.
ಆಗಸ್ಟ್ 15ರಿಂದ ಆರಂಭಗೊಳ್ಳಲಿರುವ ಈ ಕೆಪಿಎಲ್ ಹಬ್ಬದ ಪಂದ್ಯಗಳು ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ತಾಣಗಳಲ್ಲಿ ನಡೆಯಲಿವೆ. ಬಿಜಾಪುರ್ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರ್ ವಾರಿಯರ್ಸ್, ನಮ್ಮ ಶಿವಮೊಗ್ಗ ಮತ್ತು ಬೆಂಗಳೂರು ಬ್ಲಾಸ್ಟರ್ಸ್ ತಂಡಗಳ ಹಣಾಹಣಿಯನ್ನು ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರ ಮಾಡಲಿದೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.