
ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಈಗಾಗಲೇ ಮತ್ತೊಮ್ಮೆ ಐಪಿಎಲ್ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ಮನೆಕಡೆಗೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಟೀಮ್ ಸೋತು ತನ್ನ ಐಪಿಎಲ್ 2020 ಸೀಸನ್ಗೆ ಗುಡ್ಬೈ ಹೇಳಿದ್ದಾಗಿದೆ.
ಪ್ಲೇ ಆಫ್ ಹಂತಕ್ಕೇರಲು ಗೆಲ್ಲಲೇಬೇಕಾದ ಸಿಎಸ್ಕೆ ವಿರುದ್ಧ ಪಂದ್ಯದಲ್ಲಿ ಪಂಜಾಬ್ 9 ವಿಕೆಟ್ಗಳ ಹೀನಾಯ ಸೋಲು ಕಂಡಿತು. ಪಂಜಾಬ್ ನೀಡಿದ 154 ರನ್ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಧೋನಿ ಪಡೆ ಕೇವಲ ಒಂದು ವಿಕೆಟ್ ಕಳೆದುಕೊಂಡು ಒಂಭತ್ತು ವಿಕೆಟ್ಗಳ ಜಯದೊಂದಿಗೆ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಮುಗಿಸಿತು.
ಕಿಂಗ್ಸ್ ಇಲೆವೆನ್ ಪಂಜಾಬ್ ಲೀಗ್ನಲ್ಲೇ ಹೊರಬಿದ್ದ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಒಡತಿ ಪ್ರೀತಿ ಜಿಂಟಾ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.
''#IPL & ದುಬೈಗೆ ವಿದಾಯ ಹೇಳುವ ಸಮಯ. ನಾವು ಆಶಿಸಿದ ಸೀಸನ್ ಇದಲ್ಲ, ಆದರೆ ನಾವು ದೊಡ್ಡದಾಗಿ, ಉತ್ತಮವಾಗಿ ಮತ್ತು ಬಲವಾಗಿ ಮರಳಿ ಬರುತ್ತೇವೆ. ಈ ಸೀಸನ್ನಲ್ಲಿ ಅದೆಷ್ಟು ರೋಚಕತೆಗಳು, ಹೃದಯಾಘಾತ, ಏರಿಕೆ, ಇಳಿಕೆ ಮತ್ತು ಸ್ಮರಣೀಯ ಕ್ಷಣಗಳು. ಇದು ನಾವು ಆಶಿಸಿದ್ದಕ್ಕಿಂತ ಕಡಿಮೆ ಓಟವಾಗಿದೆ "ಎಂದು ಅವರು ತಮ್ಮ ಟ್ವಿಟರ್ನಲ್ಲಿ ಬರೆದಿದ್ದಾರೆ.
'' KXIP ಹಲವಾರು ಪಂದ್ಯಗಳನ್ನು ಕಳೆದುಕೊಂಡಿದ್ದರೂ ಸಹ, ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್ ಮತ್ತು ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಸೇರಿದಂತೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ'' ಎಂದು ಹೇಳುವುದರ ಜೊತೆಗೆ ಐಪಿಎಲ್ 2020 ರಿಂದ ಸೈನ್ ಆಫ್ ಆಗುವ ಮೊದಲು ಜಿಂಟಾ ಎಲ್ಲಾ ಅಭಿಮಾನಿಗಳಿಗೆ ಅಂತಿಮ ಕೃತಜ್ಞತೆ ಸಲ್ಲಿಸಿದರು.
'' ಆದರೆ ನಮ್ಮೊಂದಿಗೆ ನೀವು ನಿಂತಿದ್ದಕ್ಕಾಗಿ ಎಲ್ಲಾ @lionsdenkxip ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ನಮ್ಮ ರೆಕ್ಕೆಗಳ ಕೆಳಗಿನ ಗಾಳಿ'' ಗುಡ್ಬೈ ಐಪಿಎಲ್ 2020 ಎಂದು ಪ್ರೀತಿ ಜಿಂಟಾ ಟ್ವೀಟ್ ಮಾಡಿದ್ದಾರೆ.
ಪ್ಲೇ ಆಫ್ ಕನಸನ್ನು ಕಂಡಿದ್ದ ಕೆ.ಎಲ್ ರಾಹುಲ್ ಟೀಮ್ 12 ಪಾಯಿಂಟ್ಗಳೊಂದಿಗೆ ಪ್ಲೇ ಆಫ್ ಕನಸನ್ನು ಕಳೆದುಕೊಂಡಿತು. ಆಡಿರುವ 14 ಪಂದ್ಯಗಳಲ್ಲಿ ಆರು ಗೆಲುವು, ಎಂಟು ಪಂದ್ಯಗಳ ಸೋಲಿನೊಂದಿಗೆ 12 ಪಾಯಿಂಟ್ಗಳೊಂದಿಗೆ ಐಪಿಎಲ್ 13ನೇ ಆವೃತ್ತಿಯನ್ನು ಮುಗಿಸಿತು.