
ಚೆನ್ನೈ, ಜೂನ್ 17: ಭಾರತ ಹಾಗೂ ಚೀನಾ ಗಡಿಭಾಗ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20ಕ್ಕೂ ಅಧಿಕ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ ತಂಡದ ಡಾಕ್ಟರ್ ಮಾಡಿದ ಟ್ವೀಟ್ಗಾಗಿ ಅವರನ್ನು ಅಮಾನತು ಮಾಡಲಾಗಿದೆ.
ಐಪಿಎಲ್ನಲ್ಲಿ ಮೂರು ಬಾರಿ ಚಾಂಪಿಯನ್ ಎನಿಸಿಕೊಂಡಿರುವ, ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ತಂಡಕ್ಕೆ ಡಾಕ್ಟರ್ ಆಗಿದ್ದ ಮಧು ಥೊಟ್ಟಪಿಳ್ಳಿಲ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಲಡಾಕ್ ಸಂಘರ್ಷ ಮತ್ತು ಪಿಎಂ ಕೇರ್ಸ್ಗೆ ಲಿಂಕ್ ಕೊಟ್ಟು ಮಧು ಮಾಡಿದ್ದ ಟ್ವೀಟ್ ವಿವಾದಕ್ಕೀಡಾಗಿತ್ತು.
'ಕೀಳು ಅಭಿರುಚಿ' ಎಂದು ಕಾರಣ ನೀಡಿ ಮಧು ಅವರನ್ನು ಅಮಾನತುಗೊಳಿಸಿರುವ ಸಿಎಸ್ಕೆ, ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಇದನ್ನು ಖಾತರಿಪಡಿಸಿದೆ. ಭೂ ಸೇನೆಯಲ್ಲಿ ಗೌರವಯುತ ಲೆಫ್ಟಿನೆಂಟ್ ಆಗಿರುವ ಎಂಎಸ್ ಧೋನಿ ನಾಯಕತ್ವದ ತಂಡದ ಡಾಕ್ಟರ್ ಮಧು ಅವರು ಮಾಡಿದ ಕೃತ್ಯಕ್ಕೆ ಭಾರಿ ಬೆಲೆ ತೆತ್ತಿದ್ದಾರೆ.

ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಒಡೆತನದ ಚೆನ್ನೈ ತಂಡದ ಡಾಕ್ಟರ್ ಮಧು, 'ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಶವಗಳನ್ನು ಹೊತ್ತು ತರುವ ಶವಪೆಟ್ಟಿಗೆ ಮೇಲೆ ಕೂಡಾ ಪಿಎಂ ಕೇರ್ಸ್ ಎಂದು ಬರೆಯಲಾಗಿರುತ್ತದೆಯೇ?' ಎಂದು ಪಿಎಂ ಕೇಸ್ ಫಂಡ್ ಬಗ್ಗೆ ಗೇಲಿ ಟ್ವೀಟ್ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
'ಮಧು ಥೊಟ್ಟಪಿಳ್ಳಿಲ್ ಅವರು ವೈಯಕ್ತಿಕವಾಗಿ ಮಾಡಿದ್ದ ಟ್ವೀಟ್ ಬಗ್ಗೆ ಚೆನ್ನೈ ಸೂಪರ್ ಕಿಂಗ್ಗೆ ಗೊತ್ತಿರಲಿಲ್ಲ. ಅವರನ್ನು ಟೀಮ್ ಡಾಕ್ಟರ್ ಸ್ಥಾನದಿಂದ ಅಮಾನತುಗೊಳಿಸಲಾಗಿದೆ. ಮ್ಯಾನೇಜ್ಮೆಂಟ್ನ ಅರಿವಿಲ್ಲದೆ ಮತ್ತು ಕೆಟ್ಟ ಅಭಿರುಚಿಯಲ್ಲಿದ್ದ ಅವರ ಟ್ವೀಟ್ಗೆ ಚೆನ್ನೈ ಸೂಪರ್ ಕಿಂಗ್ಸ್ ವಿಷಾದಿಸಿದೆ' ಎಂದು ಸಿಎಸ್ಕೆ ತನ್ನ ಟ್ವೀಟ್ನಲ್ಲಿ ಬರೆದುಕೊಂಡಿದೆ.