ಲೆಜೆಂಡ್ಸ್ ಲೀಗ್: 21 ಎಸೆತಕ್ಕೆ 56 ರನ್ ಚಚ್ಚಿದ ಇರ್ಫಾನ್ ಪಠಾಣ್; ಆ ಒಬ್ಬನಿಂದ ಭಾರತದ ಫೈನಲ್ ಕನಸು ಭಗ್ನ!

ಕ್ರಿಕೆಟ್ ಪ್ರೇಮಿಗಳ ಬಾಲ್ಯದ ಹೀರೋಗಳನ್ನು ಮತ್ತೊಮ್ಮೆ ಕಣದಲ್ಲಿ ನೋಡುವ ಆಸೆಯನ್ನು ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಪೂರೈಸುತ್ತಿದೆ. ಹೌದು, ಕ್ರಿಕೆಟ್ ಜೀವನದಿಂದ ನಿವೃತ್ತಿ ಪಡೆದುಕೊಂಡಿರುವ ವಿಶ್ವದ ಹಲವಾರು ದಿಗ್ಗಜ ಕ್ರಿಕೆಟಿಗರು ಸದ್ಯ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ ತಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದ್ದಾರೆ. ಯುವ ಕ್ರಿಕೆಟಿಗರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ 20 ಓವರ್ಗಳಲ್ಲಿ 200ಕ್ಕೂ ಹೆಚ್ಚು ರನ್ ಸಿಡಿಸಿ ಚುಟುಕು ಸಮರವೆಂದರೆ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ರೋಚಕ ಪಂದ್ಯಗಳನ್ನಾಡುತ್ತಿದ್ದಾರೆ.
ಈ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಟೂರ್ನಿಯಲ್ಲಿ 3 ತಂಡಗಳಾದ ಇಂಡಿಯಾ ಮಹಾರಾಜಸ್, ಏಷ್ಯಾ ಲಯನ್ಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳು ಕಣಕ್ಕಿಳಿದಿದ್ದು ಟೂರ್ನಿಯ ಮೊದಲನೇ ಪಂದ್ಯ ಜನವರಿ 20ರಂದು ನಡೆದಿತ್ತು ಹಾಗೂ ಅಂತಿಮ ಪಂದ್ಯವಾದ ಫೈನಲ್ ಜನವರಿ 29ರಂದು ನಡೆಯಲಿದೆ. ಇನ್ನು ಇಂಡಿಯಾ ಮಹಾರಾಜಸ್ ತಂಡ ಭಾರತದ ನಿವೃತ್ತ ಕ್ರಿಕೆಟಿಗರನ್ನು ಒಳಗೊಂಡ ತಂಡವಾಗಿದ್ದರೆ, ಏಷ್ಯಾ ಲಯನ್ಸ್ ಭಾರತದ ಕ್ರಿಕೆಟಿಗರನ್ನು ಹೊರತುಪಡಿಸಿ ಏಷ್ಯಾ ಖಂಡದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿದೆ ಹಾಗೂ ವರ್ಲ್ಡ್ ಜಿಯಂಟ್ಸ್ ಏಷ್ಯಾ ಖಂಡವನ್ನು ಹೊರತುಪಡಿಸಿ ವಿಶ್ವದ ಉಳಿದ ಕ್ರಿಕೆಟ್ ತಂಡಗಳ ಮಾಜಿ ಆಟಗಾರರನ್ನು ಒಳಗೊಂಡಿರುವ ತಂಡವಾಗಿದೆ.
ಇನ್ನು ಟೂರ್ನಿಯಲ್ಲಿ ನಡೆದ ಲೀಗ್ ಹಂತದ ಚೊಚ್ಚಲ ಪಂದ್ಯದಲ್ಲಿ ಏಷ್ಯಾ ಲಯನ್ಸ್ ವಿರುದ್ಧ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿದ್ದ ಇಂಡಿಯಾ ಮಹಾರಾಜಾಸ್ ನಂತರದ ಪಂದ್ಯಗಳಲ್ಲಿ ಮಂಕಾಗಿ ಹೋಯಿತು. ಜನವರಿ 27ರಂದು ನಡೆದ ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಲೀಗ್ ಹಂತದ ಎಲ್ಲಾ ಪಂದ್ಯಗಳು ಕೂಡ ಮುಕ್ತಾಯವಾಗಿವೆ. ಅಂತಿಮವಾಗಿ ನಡೆದ ಈ ಪಂದ್ಯದಲ್ಲಿ ವರ್ಲ್ಡ್ ಜಿಯಂಟ್ಸ್ ವಿರುದ್ಧ ಇಂಡಿಯಾ ಮಹಾರಾಜಾಸ್ ಜಯ ಸಾಧಿಸಿದರೆ ಫೈನಲ್ ಪ್ರವೇಶಿಸಬಹುದಾದ ಅವಕಾಶವಿತ್ತು. ಆದರೆ ಇಂಡಿಯಾ ಮಹಾರಾಜಾಸ್ ಅಂತಿಮ ಹಂತದವರೆಗೂ ಕೂಡ ಕಠಿಣವಾದ ಹೋರಾಟವನ್ನು ನಡೆಸಿ ಕೊನೆಗೆ ಸೋಲನ್ನು ಅನುಭವಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ವರ್ಲ್ಡ್ ಜಿಯಂಟ್ಸ್ ಹಾಗೂ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಏಷ್ಯಾ ಲಯನ್ಸ್ ತಂಡಗಳು ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದು ಇಂಡಿಯಾ ಮಹಾರಾಜಾಸ್ ಟೂರ್ನಿಯಿಂದ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಈ ರೋಚಕ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡದ ಫೈನಲ್ ಪ್ರವೇಶದ ಕನಸಿಗೆ ಆ ಓರ್ವ ಆಟಗಾರ ತಣ್ಣೀರನ್ನು ಎರಚಿದ್ದಾನೆ. ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ..

ಮೊದಲು ಬ್ಯಾಟಿಂಗ್ ನಡೆಸಿ ಅಬ್ಬರಿಸಿದ ವರ್ಲ್ಡ್ ಜಿಯಂಟ್ಸ್
ಇಂಡಿಯಾ ಮಹಾರಾಜಾಸ್ ಮತ್ತು ವರ್ಲ್ಡ್ ಜಿಯಂಟ್ಸ್ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಮಹಾರಾಜಾಸ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ವರ್ಲ್ಡ್ ಜಿಯಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ವರ್ಲ್ಡ್ ಜಿಯಂಟ್ಸ್ ಪರ ಫಿಲ್ ಮಸ್ಟರ್ಡ್ 57, ಹರ್ಷಲ್ ಗಿಬ್ಸ್ 89 ಮತ್ತು ಕೆವಿನ್ ಒಬ್ರಿಯನ್ 34 ರನ್ ಗಳಿಸಿ ಮಿಂಚಿದರು. ಹೀಗೆ ತಂಡದ ಆಟಗಾರರ ಉತ್ತಮ ಬ್ಯಾಟಿಂಗ್ ನೆರವಿನಿಂದ ವರ್ಲ್ಡ್ ಜಿಯಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿತು ಹಾಗೂ ಎದುರಾಳಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ 229 ರನ್ಗಳ ಬೃಹತ್ ಗುರಿಯನ್ನು ನೀಡಿತು.

ಬೃಹತ್ ಮೊತ್ತವನ್ನು ಬೆನ್ನತ್ತಿ ಅಂತಿಮ ಹಂತದಲ್ಲಿ ಎಡವಿದ ಇಂಡಿಯಾ ಮಹಾರಾಜಾಸ್
ಇನ್ನು 229 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ತಂಡದ ಪರ ಆರಂಭಿಕ ಆಟಗಾರ ನಮನ್ ಓಜಾ 51 ಎಸೆತಗಳಿಗೆ 95 ರನ್ ಚಚ್ಚಿ ಮಿಂಚಿದರು. ಇನ್ನುಳಿದಂತೆ ವಾಸಿಂ ಜಾಫರ್, ಬದ್ರಿನಾಥ್ ಮತ್ತು ಸ್ಟುವರ್ಟ್ ಬಿನ್ನಿ ಎರಡಂಕಿ ಮುಟ್ಟುವಲ್ಲಿ ವಿಫಲವಾಗಿ ಔಟ್ ಆದರು. ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯೂಸುಫ್ ಪಠಾಣ್ 22 ಎಸೆತಗಳಿಗೆ 45 ರನ್ ಬಾರಿಸಿ ಅಬ್ಬರಿಸಿದರೆ, ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇರ್ಫಾನ್ ಪಠಾಣ್ ಅಂತಿಮ ಓವರ್ ತನಕ ಹೋರಾಟ ನಡೆಸಿ 21 ಎಸೆತಗಳಲ್ಲಿ 56 ರನ್ ಬಾರಿಸಿದರು. ಆದರೆ ಅಂತಿಮ ಓವರ್ನ ಮೊದಲನೇ ಎಸೆತದಲ್ಲಿ ಇರ್ಫಾನ್ ಪಠಾಣ್ ಔಟ್ ಆಗಿ ಇಂಡಿಯಾ ಮಹಾರಾಜಾಸ್ ತಂಡ ಗೆಲುವಿನ ಸನಿಹಕ್ಕೆ ಬಂದು ಸೋಲುಂಡಿದೆ. ಕೊನೆಗೆ ಇಂಡಿಯಾ ಮಹಾರಾಜಾಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು. ಈ ಮೂಲಕ ವರ್ಲ್ಡ್ ಜಿಯಂಟ್ಸ್ ತಂಡ ಈ ರೋಚಕ ಹಣಾಹಣಿಯಲ್ಲಿ 5 ರನ್ಗಳ ಗೆಲುವನ್ನು ಸಾಧಿಸಿತು. ಈ ಮೂಲಕ ಸೋತ ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶಿಸಲು ಇದ್ದ ಅಂತಿಮ ಅವಕಾಶವನ್ನು ಕಳೆದುಕೊಂಡು ಲೀಗ್ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತು.

ಇಂಡಿಯಾ ಮಹಾರಾಜಾಸ್ ಫೈನಲ್ ಕನಸಿಗೆ ತಣ್ಣೀರು ಎರಚಿದ ಬ್ರೆಟ್ ಲೀ
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸಿದ ಇರ್ಫಾನ್ ಪಠಾಣ್ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 12 ಎಸೆತಗಳಿಗೆ 22 ರನ್ ಬೇಕಿದ್ದಾಗ 19ನೇ ಓವರ್ನಲ್ಲಿ ಆಲ್ಬಿ ಮಾರ್ಕೆಲ್ಗೆ 2 ಅಬ್ಬರದ ಸಿಕ್ಸ್ ಬಾರಿಸಿದರು. ಈ ಮೂಲಕ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು ಕೇವಲ 8 ರನ್ಗಳ ಅಗತ್ಯತೆ ಇತ್ತು. 19ನೇ ಓವರ್ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡಿದ್ದ ಇರ್ಫಾನ್ ಪಠಾಣ್ ಕ್ರೀಸ್ ಕಾಯ್ದುಕೊಂಡಿದ್ದರು. ಈ ಸಂದರ್ಭದಲ್ಲಿ ಅಂತಿಮ ಓವರ್ ಬೌಲಿಂಗ್ ಮಾಡಲು ಬ್ರೆಟ್ ಲೀ ಕಣಕ್ಕಿಳಿದು ಮೊದಲನೇ ಎಸೆತವನ್ನು ವೈಡ್ ಹಾಕಿದರು. ನಂತರ ಆ ಓವರ್ನ ಮೊದಲ ಎಸೆತದಲ್ಲಿಯೇ ದೊಡ್ಡ ಹೊಡೆತಕ್ಕೆ ಕೈಹಾಕಿದ ಇರ್ಫಾನ್ ಪಠಾಣ್ ಆಲ್ಬಿ ಮಾರ್ಕೆಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಎರಡನೇ ಎಸೆತಕ್ಕೆ ರಜತ್ ಭಾಟಿಯಾ 1 ತೆಗೆದುಕೊಂಡರೆ ಮೂರನೇ ಹಾಗೂ ನಾಲ್ಕನೇ ಎಸೆತಗಳಲ್ಲಿ ಆವಿಷ್ಕಾರ್ ಸಾಳ್ವಿ ಯಾವುದೇ ರನ್ ಗಳಿಸದೇ ಐದನೇ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ಪಂದ್ಯದ ಅಂತಿಮ ಎಸೆತಕ್ಕೆ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 6 ರನ್ಗಳ ಅಗತ್ಯತೆ ಇತ್ತು. ಆದರೆ ಅಂತಿಮ ಎಸೆತವನ್ನು ಎದುರಿಸಿದ ಅಮಿತ್ ಭಂಡಾರಿ ಯಾವುದೇ ರನ್ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಈ ಮೂಲಕ ಕೊನೆಯ ಓವರ್ನಲ್ಲಿ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಗೆಲ್ಲಲು 8 ರನ್ ಬೇಕಿದ್ದಾಗ ಕೇವಲ 2 ರನ್ ನೀಡಿದ ಬ್ರೆಟ್ ಲೀ ಇರ್ಫಾನ್ ಪಠಾಣ್ ಅವರ ಪ್ರಮುಖ ವಿಕೆಟ್ನ್ನೂ ಕೂಡ ಪಡೆದು ಇಂಡಿಯಾ ಮಹಾರಾಜಾಸ್ ಫೈನಲ್ ಪ್ರವೇಶದ ಕನಸಿಗೆ ತಣ್ಣೀರು ಎರಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications